ರೈತರು ತಾವು ಬೆಳೆದ ಸಿರಿಧಾನ್ಯವನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡದೆ ಸಂಸ್ಕರಿಸಿ ಮಾರಾಟ ಮಾಡಿದರೆ, ಹೆಚ್ಚಿನ ಲಾಭ ಗಳಿಸಬಹುದು ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.

ಹೊಸದುರ್ಗ: ರೈತರು ತಾವು ಬೆಳೆದ ಸಿರಿಧಾನ್ಯವನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡದೆ ಸಂಸ್ಕರಿಸಿ ಮಾರಾಟ ಮಾಡಿದರೆ, ಹೆಚ್ಚಿನ ಲಾಭ ಗಳಿಸಬಹುದು ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು. ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ಸಹಾಯ ಧನದಲ್ಲಿ ಅನುಷ್ಠಾನಗೊಂಡಿರುವ ಪರಿಸಿರಿ ನ್ಯಾಚುರಲ್ಸ್ ಸಿರಿಧಾನ್ಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದರು.

ಮಳೆಯ ಕೊರತೆಯ ನಡುವೆಯೂ ಈ ಬಾರಿ 24 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗಿದೆ. ತಾಲೂಕಿನ ನಾಲ್ಕು ಹೋಬಳಿಯಲ್ಲಿಯೂ ಸಿರಿಧಾನ್ಯ ಸಂಸ್ಕರಣ ಘಟಕ ಅನುಷ್ಠಾನಗೊಳಿಸಲಾಗಿದೆ. ಪ್ರತಿ ಘಟಕಕ್ಕೆ 10 ಲಕ್ಷ ರು. ಸಹಾಯಧನ ನೀಡಲಾಗಿದೆ ಎಂದರು.

ಸಿರಿಧಾನ್ಯ ಬಳಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಡಾ. ಮಂಜುನಾಥ್‌, ಕೃಷಿ ಇಲಾಖೆಯ ಮೂಲಕ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಸಿರಿಧಾನ್ಯದ ಸಂಸ್ಕರಣಾ ಘಟಕಗಳನ್ನು ಅನುಷ್ಠಾನ ಮಾಡಿದರೆ ಶೇ 50 ರಷ್ಟು ಸಹಾಯ ಧನ ನೀಡುವುದರ ಜೊತೆಗೆ ಗರಿಷ್ಠ 10 ಲಕ್ಷದವರೆಗೆ ಸಹಾಯದನ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಬಾರ್ಡ ನ ಕವಿತಾ, ಉಪ ಕೃಷಿ ನಿರ್ದೇಶಕ ಶಿವಕುಮಾರ್‌, ಸಹಾಯಕ ಕೃಷಿ ನಿದೇರ್ಶಕ ಸಿ ಎಸ್‌ ಈಶ, ಕೃಷಿ ಅಧಿಕಾರಿ ವಿಕಾಸ್‌, ಸಂಸ್ಕರಣಾ ಘಟಕದ ಮುಖ್ಯಸ್ಥ ಲೋಕೇಶ್‌ ಹಾಜರಿದ್ದರು.