ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ. ಪಕ್ಷದ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಯಾವ ಮಠಾಧೀಶರಿಗೂ ಸೂಕ್ತವಲ್ಲ ಎಂದು ಕಾಗಿನೆಲೆ ಶಾಖಾಮಠದ ಸಿದ್ದರಾಮಾನಂದ ಮಹಾಪುರಿ ಸ್ವಾಮೀಜಿ ಹೇಳಿದ್ದಾರೆ.

ಹಾವೇರಿ : ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ. ಪಕ್ಷದ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಯಾವ ಮಠಾಧೀಶರಿಗೂ ಸೂಕ್ತವಲ್ಲ ಎಂದು ಕಾಗಿನೆಲೆ ಶಾಖಾಮಠದ ಸಿದ್ದರಾಮಾನಂದ ಮಹಾಪುರಿ ಸ್ವಾಮೀಜಿ ಹೇಳಿದ್ದಾರೆ.

ಡಿಕೆಶಿ ಪರ ಒಕ್ಕಲಿಗ ಸಮುದಾಯದ ನಿರ್ಮಲಾನಂದ ಶ್ರೀ ಬ್ಯಾಟಿಂಗ್

ಡಿಕೆಶಿ ಪರ ಒಕ್ಕಲಿಗ ಸಮುದಾಯದ ನಿರ್ಮಲಾನಂದ ಶ್ರೀ ಬ್ಯಾಟಿಂಗ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ವ್ಯಕ್ತಿಯಾಗಿ ನೋಡುತ್ತಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಮರ್ಥವಾಗಿ ಆಡಳಿತವನ್ನು ಅವರು ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಇರುತ್ತೇವೆ ಎಂದೂ ಸಹ ಹೇಳಿದ್ದಾರೆ. ಮಠಾಧೀಶರು ಧಾರ್ಮಿಕ ಪ್ರತಿನಿಧಿಗಳು. ಈ ರಾಜ್ಯದಲ್ಲಿ ಹಲವಾರು ಸಮುದಾಯಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹಲವಾರು ಸಮುದಾಯಗಳು ಉನ್ನತ ಹುದ್ದೆಯ ಹಪಾಹಪಿಯಲ್ಲಿದ್ದಾರೆ. ಪಕ್ಷದವರು ಸೂಕ್ತ ತೀರ್ಮಾನ ಕೈಗೊಳ್ಳಲು ನಾವು ಅವಕಾಶ ಕೊಡಬೇಕು ಎಂದರು.

ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನಾವು ಸಿದ್ದರಾಮಯ್ಯ ಅವರ ಪರವಾಗಿ ಸದಾ ಇರುತ್ತೇವೆ. ಸಾಮಾಜಿಕ ನ್ಯಾಯ ಕಾಪಾಡುವ ರಾಜಕಾರಣಿ ಬಂದರೆ ಅವರ ಜತೆ ನಮ್ಮವರು ಇರುತ್ತಾರೆ. ಸ್ವಾಮೀಜಿಯವರು ಜಾತಿ ಹಿನ್ನೆಲೆಯಲ್ಲಿ ಮಾತನಾಡಬಾರದಿತ್ತು. ಅದು ಅವರ ಸ್ಥಾನಕ್ಕೆ ಒಳ್ಳೆಯದಲ್ಲ. ಇತರ ಸಮುದಾಯಗಳನ್ನು ಅವಮಾನಿಸಿದಂತೆ ಆಗುತ್ತದೆ ಎಂದು ಕುಟುಕಿದರು.

ಮಠಾಧೀಶರು ಹೇಳಿದರೆ ಬದಲಾಗುವುದೇ?:

ಮಠಾಧೀಶರು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗುವ ಅವಕಾಶ ಇದೆಯಾ ಎಂದು ಪ್ರಶ್ನಿಸುವ‌ ಮೂಲಕ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಹೇಳಿಕೆಗೆ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕಗುರು ಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡುವಂಥದ್ದು, ಆಯ್ಕೆ ಮಾಡುವಂಥದ್ದು ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕರ ಅಧಿಕಾರ. ಹೀಗಾಗಿ, ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ಶಾಸಕರು ನಿರ್ಣಯ ಮಾಡುತ್ತಾರೆ. ಅದನ್ನು ಬಿಟ್ಟು ಯಾವುದೋ ಒಬ್ಬ ಸ್ವಾಮೀಜಿಯವರು ಮಾಡೋದಲ್ಲ ಎಂದು ಹೇಳಿದ್ದಾರೆ.