ಸಾರಾಂಶ
ಮೈಸೂರು : ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಶಾಪ ತಟ್ಟೇ ತಟ್ಟುತ್ತೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, 11 ಜನ ನಮ್ಮವರನ್ನ ಕಳೆದುಕೊಂಡಿದ್ದೇವೆ. ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ ಮಾಡಿದ್ದು ತಪ್ಪಾಗಿದೆ ಎಂದು ಟೀಕಿಸಿದರು.
ಪಕ್ಕದ ಆಂಧ್ರದಲ್ಲಿ ಕಾಲ್ತುಳಿದ ಆದಾಗ ನಟ ಅಲ್ಲು ಅರ್ಜನ್ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಪಕ್ಕದ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಆದರೆ, ಇಲ್ಲಿಯವರೆಗೆ ನಮ್ಮ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.
ವಿಧಾನಸೌಧಕ್ಕೆ ಯಾಕೆ ಆಟಗಾರನ್ನ ಕರೆದುಕೊಂಡು ಹೋದ್ರು. ಈ ಸಾವಿನ ಹೊಣೆಯನ್ನ ಸರ್ಕಾರವೇ ಹೊತ್ತುಕೊಳ್ಳಬೇಕು. ವಿಜಯೋತ್ಸವಕ್ಕೆ ಯಾವುದೇ ತಯಾರಿ ಮಾಡಿಕೊಂಡಿಲ್ಲ ಎಂದು ಬಿಸಿಸಿಐ ಹೇಳಿದೆ. ವಿಶ್ವಕಪ್ ಗೆದ್ದಾದ ಮಹಾರಾಷ್ಟ್ರದಲ್ಲಿ 20 ಲಕ್ಷ ಜನ ಸೇರಿದ್ದರು. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ಈಗಾಗಲೇ ಕೊಡಬೇಕಿತ್ತು ಎಂದು ತಿಳಿಸಿದರು.
ಬಿಜೆಪಿ ಈ ಪ್ರಕರಣದಲ್ಲಿ ರಾಜಕಾರಣ ಮಾಡುತ್ತಿಲ್ಲ. ಕುಂಭಮೇಳದಲ್ಲಿ ಘಟನೆ ನಡೆದಾಗ ಕಾಂಗ್ರೆಸ್ ಯಾವ ರೀತಿ ಟೀಕೆ ಮಾಡಿತ್ತು. 60 ಕೋಟಿ ಜನ ಕುಂಭಮೇಳಕ್ಕೆ ಹೋಗಿದ್ದರು. ಪೊಲೀಸರ ಬಗ್ಗೆ ಯಾಕೆ ಟೀಕೆ ಮಾಡುತ್ತೀರಾ? ಸರ್ಕಾರವೇ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಸಿಎಂ, ಡಿಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ದೂರು
ಮೈಸೂರು : ಆರ್ಸಿಬಿ ಸಂಭ್ರಮಾಚರಣೆ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ಸಿಎಂ, ಡಿಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರಿಜಿಸ್ಟ್ರಾರ್ ಪೋಸ್ಟ್ ಮೂಲಕ ದೂರು ನೀಡಿದ್ದಾರೆ.
ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಈ ಘಟನೆಗೆ ನೇರ ಕಾರಣ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್. ಇದು ಸರ್ಕಾರದ ನಿರ್ಲ್ಯಕ್ಷದ ಧೋರಣೆ ಕಾರಣ ಎಂದು ಆರೋಪಿಸಿದರು.
ಮುಂಜಾಗ್ರತಾ ಕ್ರಮ ಇಲ್ಲದೆ ಕಾರ್ಯಕ್ರಮ ಮಾಡಿದ್ದಾರೆ. ವಿಧಾನಸೌಧದಲ್ಲಿ ದಿಢೀರ್ ಅಂತ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸಿಎಂ ನೇತೃತ್ವದಲ್ಲಿ ಗುಪ್ತಚರ ಇಲಾಖೆ ಕೆಲಸ ಮಾಡುತ್ತೆ. ಏನಾಗತ್ತೆ ಅನ್ನೋ ಮುಂದಾಲೋಚನೆ ಇರುತ್ತೆ. ಗೊತ್ತಿದ್ರೂ ರಾಜಕೀಯ ಲಾಭಕ್ಕಾಗಿ ಸನ್ಮಾನ ಮಾಡಲು ಮುಂದಾದರು. ಈ ದುರಂತಕ್ಕೆ ನೇರ ಕಾರಣ ಸಿಎಂ, ಡಿಸಿಎಂ, ಆರ್ ಸಿಬಿ ಮ್ಯಾನೇಜ್ಮೆಂಟ್, ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ಮೇಲೆ ಕ್ರಮ ಆಗಬೇಕು ಎಂದು ಅವರು ಆಗ್ರಹಿಸಿದರು.
ಆಂಧ್ರದಲ್ಲಿ ನಟ ಅಲ್ಲು ಅರ್ಜುನ್ ಸಿನಿಮಾ ರಿಲೀಸ್ ಸಮಯದಲ್ಲಿ ಇದೇ ರೀತಿ ಆಗಿತ್ತು. ಅಲ್ಲು ಅರ್ಜುನ್ ಕಾರಣ ಅಂತ ಬಂಧಿಸಿದ್ದರು. ಈಲ್ಲೂ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.