ಸಾರಾಂಶ
ದಲಿತ ಮುಖ್ಯಮಂತ್ರಿ ಪ್ರಸ್ತಾವನೆಗೆ ಫುಲ್ಸ್ಟಾಪ್ ಹಾಕಲಾಗಿದ್ದು, ಸದ್ಯ ಆ ವಿಷಯದ ಕುರಿತು ಚರ್ಚೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿ : ದಲಿತ ಮುಖ್ಯಮಂತ್ರಿ ಪ್ರಸ್ತಾವನೆಗೆ ಫುಲ್ಸ್ಟಾಪ್ ಹಾಕಲಾಗಿದ್ದು, ಸದ್ಯ ಆ ವಿಷಯದ ಕುರಿತು ಚರ್ಚೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗರೊಂದಿಗೆ ಮಾತನಾಡಿ, ದಲಿತ ಸಿಎಂ ವಿಚಾರಕ್ಕೆ ಕಳೆದ 1 ವರ್ಷದಿಂದ ಫುಲ್ಸ್ಟಾಪ್ ಬಿದ್ದಿದ್ದು, ಈ ಅವಧಿಯಲ್ಲಿ ಆ ಬಗ್ಗೆ ಚರ್ಚೆ ಇಲ್ಲ. ಮುಂದಿನ ಅವಧಿಯಲ್ಲಿ ನೋಡೋಣ ಎನ್ನುವ ಮೂಲಕ ಮುಂದಿನ ವಿಧಾಸಸಭೆ ಚುನಾವಣೆ ಬಳಿಕ ಮತ್ತೇ ದಲಿತ ಸಿಎಂ ಕೂಗು ಎತ್ತುವ ಕುರಿತು ಮುನ್ಸೂಚನೆ ನೀಡಿದರು.
ಸೆಪ್ಟೆಂಬರ್ನಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ ಅವರ ಹೇಳಿಕೆಗೆ ನ್ಯಾನೇಕೆ ಉತ್ತರಿಸಬೇಕು? ಎಂದರು.
ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿಯವರು ಕಳೆದ 2 ವರ್ಷದಿಂದ ಇದನ್ನೇ ಹೇಳುತ್ತಿದ್ದಾರೆ. ಬರುವ 2 ವರ್ಷ ಸಹ ಇದನ್ನೇ ಹೇಳುತ್ತಿರುತ್ತಾರೆ. ಆದರೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾತ್ರ ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ಇತರ ಅಭಿವೃದ್ಧಿ ಕೆಲಸಗಳೂ ಸಮರ್ಪಕವಾಗಿ ನಡೆಯುತ್ತಿವೆ. ಹಿಂದಿನ ಬೊಮ್ಮಾಯಿ ಸರ್ಕಾರದ ಬಜೆಟ್ ಹಾಗೂ ನಮ್ಮ ಸರ್ಕಾರದ ಬಜೆಟ್ ನೋಡಿ ಗೊತ್ತಾಗುತ್ತದೆ ಎಂದರು.