ಕ್ರಷರ್ ಸದ್ದಿಗೆ ಹಿರೀಕಾಟಿ ಗ್ರಾಮಸ್ಥರ ನಿದ್ರಾಭಂಗ
KannadaprabhaNewsNetwork | Published : Nov 03 2023, 12:30 AM IST
ಕ್ರಷರ್ ಸದ್ದಿಗೆ ಹಿರೀಕಾಟಿ ಗ್ರಾಮಸ್ಥರ ನಿದ್ರಾಭಂಗ
ಸಾರಾಂಶ
ತಾಲೂಕಿನ ಹಿರೀಕಾಟಿ ಸುತ್ತ ಮುತ್ತಲಿನ ಕ್ರಷರ್ ಗಳು ರಾತ್ರಿ ಹಾಗೂ ಬೆಳಗಿನ ಜಾವ ಕ್ರಷಿಂಗ್ ಮಾಡುವುದರಿಂದ ಗ್ರಾಮಸ್ಥರ ನಿದ್ರೆಗೆ ಭಂಗವಾಗುತ್ತಿದೆ. ಹಿರೀಕಾಟಿ ಗ್ರಾಮದ ಬಳಿಯ ಲಕ್ಷ್ಮೀ ವೆಂಕಟೇಶ್ವರ, ಶ್ರೀಕಂಠೇಶ್ವರ, ಕ್ರಿಶ್ ಕ್ರಷರ್ಗಳು ರಾತ್ರಿಯಿಡೀ ಸದ್ದು ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿ
ಗ್ರಾಮಸ್ಥರ ದೂರಿಗೆ ಸ್ಪಂದಿಸದ ಜನಪ್ರತಿನಿದಿಗಳು, ಭೂ ವಿಜ್ಞಾನ ಇಲಾಖೆ । ಜಿಲ್ಲಾಡಳಿತ ಜಾಣಮೌನ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಸುತ್ತ ಮುತ್ತಲಿನ ಕ್ರಷರ್ ಗಳು ರಾತ್ರಿ ಹಾಗೂ ಬೆಳಗಿನ ಜಾವ ಕ್ರಷಿಂಗ್ ಮಾಡುವುದರಿಂದ ಗ್ರಾಮಸ್ಥರ ನಿದ್ರೆಗೆ ಭಂಗವಾಗುತ್ತಿದೆ. ಹಿರೀಕಾಟಿ ಗ್ರಾಮದ ಬಳಿಯ ಲಕ್ಷ್ಮೀ ವೆಂಕಟೇಶ್ವರ, ಶ್ರೀಕಂಠೇಶ್ವರ, ಕ್ರಿಶ್ ಕ್ರಷರ್ಗಳು ರಾತ್ರಿಯಿಡೀ ಸದ್ದು ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಕ್ರಷರ್ ಕಲ್ಲು ಅರೆಯಲು ಅವಕಾಶವಿದೆ. ಆದರೆ ಕ್ರಷರ್ಗಳು ದಿನದಲ್ಲಿ ಕನಿಷ್ಠ 20 ಗಂಟೆ ಕಲ್ಲು ಪುಡಿ ಮೂಲಕ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿವೆ. ಈ ಕ್ರಷರ್ಗಳು ಎರಡು ಪಾಳಿಯಲ್ಲಿ ಕೆಲಸಗಾರರನ್ನು ನಿಯೋಜಿಸಿಕೊಂಡು ಹಗಲು ರಾತ್ರಿಯಿಡೀ ಸದ್ದು ಮಾಡುತ್ತಿವೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿ ದಿನ ಕೂಡ ರಾತ್ರಿ ಕ್ರಷರ್ ಕಲ್ಲು ಅರೆಯುವ ಸದ್ದಿಗೆ ನಿದ್ದೆ ಭಂಗ ಕಂಡು ಪೊಲೀಸ್ ಇಲಾಖೆಯ 112 ಫೋನ್ ಮಾಡುತ್ತಿದ್ದಾರೆ. ಫೋನ್ ಮಾಡಿದ ಬಳಿಕ 112 ವಾಹನದಲ್ಲಿ ಪೊಲೀಸರು ಬಂದು ಕ್ರಷರ್ ಕೆಲಸ ನಿಲ್ಲಿಸುತ್ತಿದ್ದಾರೆ. ಈ ಸಂಬಂಧ ಗ್ರಾಮದ ಚಂದ್ರಶೇಖರ್ ಎಂಬುವರು ಜಿಲ್ಲಾಧಿಕಾರಿ,ಶಾಸಕರಿಗೆ ರಾತ್ರಿ ಕ್ರಷರ್ ಸದ್ದಿಗೆ ನಿದ್ದೆ ಬರುತ್ತಿಲ್ಲ ಎಂದು ಹಲವು ಬಾರಿ ಕರೆಯ ಮೂಲಕ ದೂರು ನೀಡಿದ್ದಾರೆ. ಜಾಣ ಮೌನ ಕ್ರಷರ್ಗಳು ಹಗಲು ರಾತ್ರಿಯೆನ್ನದೇ ಸದ್ದು ಮಾಡಿ ಜನರ ನಿದ್ದೆಗೆ ಭಂಗ ತರುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಷರ್ ಮಾಲೀಕರೊಂದಿಗೆ ಶಾಮೀಲಾಗಿ ಜಾಣ ಮೌನ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದಾಯ ಸೋರಿಕೆ? ರಾತ್ರಿ 10 ಗಂಟೆಯವರೆಗೂ ಎಂ.ಸ್ಯಾಂಡ್ ತುಂಬಿದ ಟಿಪ್ಪರ್ಗಳು ಖನಿಜ ತನಿಖಾ ಠಾಣೆಯನ್ನು ವಂಚಿಸಿ ಎಂಡಿಪಿ ಕಟ್ಟದೆ ತೆರಳುವ ಮೂಲಕ ಸರ್ಕಾರಕ್ಕೆ ಆದಾಯ ವಂಚನೆ ಮಾಡುತ್ತಿವೆ. -------- ಕೋಟ್... ʼಹಿರೀಕಾಟಿ ಬಳಿಯ ಕ್ರಷರ್ ಬಿಳಿ ಕಲ್ಲು ಅರೆಯುವುದರಿಂದ ಸದ್ದು ಬರುತ್ತಿದೆ. ಹಿರೀಕಾಟಿ ಜನ ನೆಮ್ಮದಿಯಾಗಿ ನಿದ್ದೆ ಮಾಡಲು ಕ್ರಷರ್ಗಳು ಬಿಡುತ್ತಿಲ್ಲ. ಈ ಸಂಬಂಧ ಶಾಸಕರು,ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಸ್ಥಳೀಯ ಪೊಲೀಸರಿಗೆ ತಿಳಿಸಿದರೂ ಕ್ರಷರ್ ಸದ್ದು ಮಾತ್ರ ನಿಂತಿಲ್ಲ’. -ಚಂದ್ರಶೇಖರ್,ಹಿರೀಕಾಟಿ ಗ್ರಾಮಸ್ಥ. -------------- 2ಜಿಪಿಟಿ2 ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಕ್ರಷರ್ ನಿಂದ ಓವರ್ ಲೋಡ್ ಆದ ಟಿಪ್ಪರ್ ತನಿಖಾ ಠಾಣೆಯನ್ನು ವಂಚಿಸಿ ಬುಧವಾರ ರಾತ್ರಿ ಮೈಸೂರಿನತ್ತ ತೆರಳುತ್ತಿದೆ. ---------------