ರಾಜ್ಯ ಬಿಜೆಪಿಯಲ್ಲಿ ಕಾಣಿಸಿರುವ ಭಿನ್ನಮತ ಶೀಘ್ರವೇ ಶಮನವಾಗಲಿದೆ : ಸೀಕಲ್ ರಾಮಚಂದ್ರಗೌಡ

| N/A | Published : Feb 02 2025, 01:00 AM IST / Updated: Feb 02 2025, 04:17 AM IST

ಸಾರಾಂಶ

ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಪಕ್ಷದ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.

  ಶಿಡ್ಲಘಟ್ಟ : ಬಿಜೆಪಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ರಾಷ್ಟ್ರೀಯ ನಾಯಕರು ಕೂಡಲೇ ಮಧ್ಯ ಪ್ರವೇಶಿಸಿ ಸರಿಪಡಿಸಬೇಕು, ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಪಕ್ಷದ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.

ಬಿಜೆಪಿ ಕಚೇರಿ ಸೇವಾ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದೊಳಗಿನ ಭಿನ್ನಮತದ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ ಅವರು, ಯಾರು ಕೂಡ ಬಹಿರಂಗವಾಗಿ ಪಕ್ಷದ ಬಗ್ಗೆ ಮಾತನಾಡಬಾರದು. ಪರಸ್ಪರ ಕೂತು ಚರ್ಚೆ ಮಾಡಿಕೊಂಡು ಒಮ್ಮತವಾಗಿ ನಡೆಯಬೇಕೆಂದರು.ನಾನೂ ನಾಮಪತ್ರ ಸಲ್ಲಿಸಿದ್ದೆ

ತಾವು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಇರಲಿಲ್ಲ. ಆದರೆ ಜಿಲ್ಲೆಯವರು ತಾಲೂಕಿಗೆ ಬಂದಾಗೆಲ್ಲಾ ನೀವು ಜಿಲ್ಲಾಧ್ಯಕ್ಷರಾಗಬೇಕೆಂದು ಒತ್ತಾಯಿಸಿದ್ದರು. ನಾನು ಕೂಡ ನಾಮಪತ್ರ ಸಲ್ಲಿಸಿದ್ದೆ. ಆದರೆ ಪಕ್ಷದ ವರಿಷ್ಠರು ಬೇರೆ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಸುಮಾರು 54 ಸಾವಿರ ಸದಸ್ಯತ್ವ ಮಾಡಿಸಿದ್ದು, ಕ್ಷೇತ್ರದಲ್ಲಿ ಪಕ್ಷವನ್ನು ಪ್ರಾಮಾಣಿಕವಾಗಿ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.

ರಾಜಕೀಯ ಪಕ್ಷಗಳು ಅಂದ ಮೇಲೆ ಭಿನ್ನಮತ ಇರುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಕಾಣಿಸಿರುವ ಭಿನ್ನಮತ ಕೇವಲ ಕೆಲವೇ ದಿನಗಳಲ್ಲಿ ಶಮನಗೊಳ್ಳುವ ಭರವಸೆ ಇದೆ. ಜಿಲ್ಲಾಧ್ಯಕ್ಷರ ನೇಮಕಾತಿ ವಿಚಾರದಲ್ಲಿ ರಾಜ್ಯಾಧ್ಯಕ್ಷರ ಪಾತ್ರ ಇಲ್ಲ ಎಂದು ಖುದ್ದು ವಿಜಯೇಂದ್ರ ಅವರೇ ನಮಗೆ ತಿಳಿಸಿದ್ದಾರೆ. ಆದ್ದರಿಂದ ಎಲ್ಲರೂ ಪಕ್ಷದ ಸಂಘಟನೆಗೆ ಒಂದಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿಯಿಂದ ದಿವಾಳಿ

ರಾಜ್ಯ ಕಾಂಗ್ರೆಸ್ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ. ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಬಿಜೆಪಿ ಗೆ 150 ಸ್ಥಾನ ಬರುವ ನಿರೀಕ್ಷೆ ಇದೆ. ಆದರೆ ಇದೇ ರೀತಿ ಕಿತ್ತಾಡಿಕೊಂಡರೆ ಪಕ್ಷಕ್ಕೇ ದೊಡ್ಡ ನಷ್ಠ ಉಂಟಾಗುತ್ತದೆ ಎಂದು ಸೀಕಲ್ ರಾಮಚಂದ್ರಗೌಡ ಹೇಳಿದರು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ , ನಿಕಟಪೂರ್ವ ಅಧ್ಯಕ್ಷ ಕಂಬದ ಹಳ್ಳಿ ಸುರೇಂದ್ರ ಗೌಡ , ನಗರಸಭೆ ಸದಸ್ಯ ನಾರಾಯಣ ಸ್ವಾಮಿ , ರಾಮಕೃಷ್ಣಪ್ಪ ,ಕನಕಪ್ರಸಾದ್ , ಪುರುಷೋತ್ತಮ್, ಮಧು ಮತ್ತಿತರರು ಹಾಜರಿದ್ದರು.