ಸಾರಾಂಶ
ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಸ್ಐಟಿ ಪೊಲೀಸರ ತನಿಖೆ ಎದುರಿಸಿದ ಬಳಿಕ ಜಾರಿ ನಿರ್ದೇಶನಾಲಯದ (ಇಡಿ) ಬಂಧನ ಭೀತಿಯಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿಧಾನಸಭೆಯ ಅಧಿವೇಶನ ವೇಳೆ ಪ್ರತ್ಯಕ್ಷರಾದರು.
ಇಡಿ ವಿಚಾರಣೆ ಬಳಿಕ ಎಸ್ಐಟಿ ವಿಚಾರಣೆ ಎದುರಿಸಿದ ದದ್ದಲ್ ಅವರು ತಮ್ಮ ಸ್ವಜಿಲ್ಲೆ ರಾಯಚೂರಿಗೆ ತೆರಳಿದ್ದರು. ಬಳಿಕ ಕಾಣದೇ ಇದ್ದಾಗ ನಾಪತ್ತೆಯಾಗಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ, ಸೋಮವಾರ ದಿಢೀರನೆ ವಿಧಾನಸೌಧಕ್ಕೆ ಆಗಮಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಕೆಲಕಾಲ ಸಮಾಲೋಚನೆ ನಡೆಸಿದರು.
ನಾನು ನಾಪತ್ತೆಯಾಗಿಲ್ಲ- ದದ್ದಲ್: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದದ್ದಲ್, ನಾನು ನಾಪತ್ತೆಯಾಗಿರಲಿಲ್ಲ. ಎರಡು ದಿನಗಳಿಂದ ನನ್ನ ಕ್ಷೇತ್ರಕ್ಕೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಾರಿ ನಿರ್ದೇಶಾನಲಯದಿಂದ ಮತ್ತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದರು.
ಅಧಿವೇಶನ ಮುಗಿಯುವವರೆಗೆ ಬಂಧನ ಇಲ್ಲ?: ಅಧಿವೇಶನ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಶಾಸಕರೂ ಆಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಬಂಧನ ಭೀತಿ ಸ್ವಲ್ಪ ಮಟ್ಟಿಗೆ ದೂರವಾಗಿದೆ.
ಸದನ ಮುಗಿಯುವವರೆಗೆ ಇಡಿ ಅಧಿಕಾರಿಗಳು ಬಂಧನ ಮಾಡುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ದದ್ದಲ್ ಅವರನ್ನು ಬಂಧಿಸಬೇಕಿದ್ದರೆ ಸಭಾಧ್ಯಕ್ಷರ ಅನುಮತಿ ಪಡೆದುಕೊಳ್ಳಬೇಕು. ಸಭಾಧಕ್ಷರು ಬಂಧನಕ್ಕೆ ಅನುಮತಿ ನೀಡಿದರೆ ಮಾತ್ರ ದದ್ದಲ್ ಬಂಧನ ಸಾಧ್ಯತೆ ಇದೆ. ಇಲ್ಲವಾದ್ದಲ್ಲಿ ಅಧಿವೇಶನ ಮುಗಿಯುವವರೆಗೆ ಬಂಧನವಾಗುವುದಿಲ್ಲ ಎಂದು ಮೂಲಗಳು ಹೇಳಿವೆ.