ಸಂವಿಧಾನ ಉಳಿಸಲು ಕಾಂಗ್ರೆಸ್‌ಗೆ ಮತ ನೀಡಿ : ನಾರಾಯಣಸ್ವಾಮಿ

| Published : Apr 15 2024, 01:25 AM IST / Updated: Apr 15 2024, 04:39 AM IST

ಸಾರಾಂಶ

ಕೋಲಾರ ಜಿಲ್ಲೆ, ಬರಪೀಡಿತ ಪ್ರದೇಶವಾಗಿದ್ದು ಈ ಹಿನ್ನೆಲೆಯಲ್ಲಿ ಜನತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತವನ್ನು ನೀಡಿ ಜಯಗಳಿಸಿದ್ದೆ ಆದಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಶ್ರಮಿಸು ಭರವಸೆ ನೀಡಿದೆ

 ಬಂಗಾರಪೇಟೆ :  ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಆದ್ದರಿಂದ ದೇಶದ ಜನತೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಗೌತಮ್ ಅವರಿಗೆ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಬೂದಿಕೋಟೆ, ಕಾಮಸಮುದ್ರ ಹಾಗೂ ಡಿಕೆಹಳ್ಳಿ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ದೇಶದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದರು.

ಬಡವರಿಂದ ತೆರಿಗೆ ವಸೂಲಿ

ಪ್ರಧಾನಿ ಮೋದಿ ಬಡವರಿಂದ ತೆರಿಗೆ ವಸೂಲಿಯನ್ನು ಮಾಡಿ ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರಿಗೆ, ಬಡವರಿಗೆ, ಸಹಾಯ ಹಸ್ತ ನೀಡದೆ ವಾಣಿಜ್ಯೋದ್ಯಮಿಗಳಾದ ಅಂಬಾನಿ ಮತ್ತು ಅಧಾನಿಯವರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ, ಇದರೊಟ್ಟಿಗೆ ಅಡುಗೆ ಅನಿಲ, ದಿನಬಳಕೆ ವಸ್ತುಗಳು, ಕೃಷಿ ಮತ್ತು ಗೃಹ ನಿರ್ಮಾಣದ ಪರಿಕರಗಳ ಮೇಲೆ ಅವೈಜ್ಞಾನಿಕ ಜಿಎಸ್‌ಟಿಯನ್ನು ಏರಿಸುವುದರ ಮೂಲಕ ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪಿಸಿದರು.

ಅಭ್ಯರ್ಥಿ ಕೆ ವಿ ಗೌತಮ್ ಮಾತನಾಡಿ ಕೋಲಾರ ಜಿಲ್ಲೆ, ಬರಪೀಡಿತ ಪ್ರದೇಶವಾಗಿದ್ದು ಕುಡಿಯುವ ನೀರಿನ ಹಾಹಾಕಾರ ತಾಂಡವಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಾವು ನನಗೆ ಮತವನ್ನು ನೀಡಿ ಜಯಗಳಿಸಿದ್ದೆ ಆದಲ್ಲಿ ಲೋಕಸಭೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಹಾಗೂ ಬಹು ಸಂಖ್ಯಾತ ಯುವಸಮುದಾಯ ಉದ್ಯೋಗ ಹರಸಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡುವುದು ನನ್ನ ಪರಮಾಧ್ಯ ಕರ್ತವ್ಯವಾಗಿದೆ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ ನಾಗರಾಜು, ಕೆಪಿಸಿಸಿ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ತಿಕ್, ಗ್ರಾಪಂ ಅಧ್ಯಕ್ಷ ಆದಿನಾರಾಯಣ ಕುಟ್ಟಿ, ನಾರಾಯಣಮ್ಮ, ಸುನಂದಮ್ಮ, ಮಂಜುನಾಥ್, ಮುಖಂಡರಾದ ಪಿಚಹಳ್ಳಿ ಗೋವಿಂದರಾಜು, ಮಹದೇವ್, ಜಯಣ್ಣ, ಲಕ್ಷ್ಮಿನಾರಾಯಣ ಪ್ರಸಾದ್, ದಲಿತ ಮುಖಂಡ ಭೀಮಣ್ಣ ದಲಿತ ಮುಖಂಡ ಭೀಮಣ್ಣ, ಮುನಿರಾಜು, ಎ ಬಾಬು ಇದ್ದರು.