ಸಾರಾಂಶ
ದಾಸರಹಳ್ಳಿ : ದೇಶದ ಅಭಿವೃದ್ಧಿಗಾಗಿ ಬಲಿಷ್ಠ ಸರ್ಕಾರ ರಚನೆ ಮಾಡಲು ಎನ್ಡಿಎ ಒಕ್ಕೂಟದ ಅಭ್ಯರ್ಥಿಯಾದ ಶೋಭಾ ಕರಂದ್ಲಾಜೆ ಅವರಿಗೆ ಮತವನ್ನು ನೀಡಬೇಕು. ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ದ್ವಾರಕನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಧಾನಸೌಧದಲ್ಲೂ ಕೂಡ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಈಗಾಗಲೇ ರಾಮೇಶ್ವರ ಕೆಫೆಯಲ್ಲೂ ಕೂಡ ಬಾಂಬ್ ಇಟ್ಟಿದ್ದಾರೆ. ಇವತ್ತು ಒಂದು ಹೋಟೆಲ್ಗೆ ಬಾಂಬ್ ಇಡಲಾಗಿದೆ ಎಂದು ಪೋಸ್ಟ್ ಮೂಲಕ ಪತ್ರವನ್ನು ಕಳುಹಿಸಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಕೊಲೆಗಳು ಕೂಡ ಆಗುತ್ತಿವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತುಕೊಂಡಿದೆ. ಈ ಸರ್ಕಾರ ನಿಸ್ಕ್ರೀಯ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಎಸ್.ಮುನಿರಾಜು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಲೂಟಿ ಸರ್ಕಾರ. ಈ ಸರ್ಕಾರ ಕರ್ನಾಟಕ ರಾಜ್ಯದ ಜನತೆಯ ಮೇಲೆ ತಲಾ ₹33 ಸಾವಿರ ಸಾಲದ ಭಾರವನ್ನು ಹೋರಿಸಿದೆ. ಒಂದು ಲಕ್ಷದ ಐದು ಸಾವಿರ ಕೋಟಿಯಷ್ಟು ಸಾಲ ಮಾಡಿದೆ. ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ 5 ಕೇಜಿ ಅಕ್ಕಿಯನ್ನು ನಾವು ನೀಡುತ್ತಿದ್ದೇವೆ ಎಂದು ಜನರ ಹತ್ತಿರ ಸುಳ್ಳು ಹೇಳಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದ್ವಾರಕನಗರದ ಮಂಜುನಾಥ್, ಪುರಸಭಾ ಬಿಜೆಪಿ ಅಧ್ಯಕ್ಷ ಗಿರೀಶ್, ಮಹಮ್ಮದ್ ಕಬೀರ್, ವೆಂಕಟೇಶ್, ಬಿ.ಎಂ.ಚಿಕ್ಕಣ್ಣ, ನವೀನ್ ಕುಮಾರ್, ಭಾಗ್ಯಮ್ಮ ಇದ್ದರು.‘ಮೋದಿ ಅವಧಿಯಲ್ಲಿ ಹೆಚ್ಚು ಅನುದಾನ’
ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಪ್ರಧಾನಿ ಆಗಿದ್ದಾಗ ಮನಮೋಹನ್ ಸಿಂಗ್ ಅವರು ಕರ್ನಾಟಕ ರಾಜ್ಯಕ್ಕೆ ನೀಡಿರುವ ಅನುದಾನಕ್ಕಿಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ಪಟ್ಟು ಅನುದಾನವನ್ನು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿಕೊಂಡು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಎಸ್.ಮುನಿರಾಜು ಟೀಕೆ ಮಾಡಿದರು.