ಸಾರಾಂಶ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅರೆ ಹುಚ್ಚನಾಗಿದ್ದು, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ವಿಜಯಪುರ ಜಿಲ್ಲೆಯಲ್ಲೇ ವೀರಶೈವ ಮಹಾಸಂಗಮದ ಪೂರ್ವಭಾವಿ ಸಿದ್ಧತೆ ಸಭೆ ನಡೆಸುವ ಜತೆಗೆ ಅಲ್ಲೇ ಸಮಾವೇಶದ ದಿನಾಂಕ ಘೋಷಣೆ ಮಾಡಲಾಗುವುದು ಎಂದೂ ಅವರು ಯತ್ನಾಳ ಅವರಿಗೆ ಟಾಂಗ್ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರಲ್ಲಿ ನಡೆದ ಸಮಾವೇಶಕ್ಕೆ ಯಾವುದೇ ಸ್ವಾಮೀಜಿಗಳನ್ನು ಪೇಮೆಂಟ್ ಕೊಟ್ಟು ಕರೆಸಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ಆಗಮಿಸಿದ್ದರು. ಮೇ 15ರೊಳಗೆ ದಾವಣಗೆರೆಯಲ್ಲಿ ಮಹಾಸಂಗಮ ಮಾಡುತ್ತೇವೆ. ನಾವು ಸಮಾವೇಶ ನಡೆಸಿದ 10 ದಿನ ಬಳಿಕ ಅವರು ಸಮಾವೇಶ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ನಾವು ಆತನಿಗೆ ಮಾದರಿಯಾಗಿದ್ದೇವೆ. ನಮ್ಮನ್ನು ನೋಡಿ ಸಮಾವೇಶ ನಡೆಸಲು ಮುಂದಾಗಿದ್ದಾರೆ. ನಾವು ಹೋಗುವ ದಾರಿಯಲ್ಲಿ ಯಾಕೆ ಹೋಗಬೇಕು ಎಂದು ಲೇವಡಿ ಮಾಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಗ್ಗೆ ಮಾತನಾಡುವವರು ಡಮ್ಮಿಗಳು ಮತ್ತು ಕಾಮಿಡಿ ಪೀಸ್ಗಳು. ಆತನೇ ಪೇಮೆಂಟ್ ಗಿರಾಕಿ. ಬಬಲೇಶ್ವರದಲ್ಲಿ ಸ್ಪರ್ಧಿಸಲು ಸಾಧ್ಯವಾಗದೆ ಹೊಂದಾಣಿಕೆ ರಾಜಕೀಯ ಮಾಡಲಾಗುತ್ತಿದೆ. ಸಿದ್ದೇಶ್ವರ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಆತನ ಸಂಬಂಧಿಕರು ಇಲ್ಲವೇ? ಆತನ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ ಎಂದು ವಾಗ್ದಾಳಿ ನಡೆಸಿದರು.