ಪ್ರಧಾನಿ, ಗೃಹ ಸಚಿವರು ಜನತೆಯ ಕ್ಷಮೆ ಕೋರಲಿ- ಎಚ್.ಎ. ವೆಂಕಟೇಶ್ ಆಗ್ರಹ

| Published : Dec 14 2023, 01:30 AM IST

ಪ್ರಧಾನಿ, ಗೃಹ ಸಚಿವರು ಜನತೆಯ ಕ್ಷಮೆ ಕೋರಲಿ- ಎಚ್.ಎ. ವೆಂಕಟೇಶ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ, ಗೃಹ ಸಚಿವರು ಜನತೆಯ ಕ್ಷಮೆ ಕೋರಲಿ, ಬಿಜೆಪಿ ಸರ್ಕಾರ ಇದರ ಹೊಣೆ ಹೊರಬೇಕಿದ್ದು ಪ್ರಧಾನಿ ಮತ್ತು ಗೃಹ ಸಚಿವರು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ದೇಶದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹಿಸಿದ್ದಾರೆ.ಎಚ್.ಎ. ವೆಂಕಟೇಶ್ ಆಗ್ರಹ

ಫೋಟೋ- 13ಎಂವೈಎಸ್49

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಪ್ರಜಾಪ್ರಭುತ್ವದ ಹೃದಯದಂತಿರುವ ಸಂಸತ್ ಭವನದ ಮೇಲೆ ದಾಳಿ ನಡೆದಿರುವುದು ದೊಡ್ಡ ಭದ್ರತಾ ಲೋಪವಾಗಿದೆ. ಬಿಜೆಪಿ ಸರ್ಕಾರ ಇದರ ಹೊಣೆ ಹೊರಬೇಕಿದ್ದು ಪ್ರಧಾನಿ ಮತ್ತು ಗೃಹ ಸಚಿವರು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ದೇಶದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹಿಸಿದ್ದಾರೆ.

22 ವರ್ಷಗಳ ಹಿಂದೆಯೂ ಇದೇ ಮಾದರಿಯ ದಾಳಿ ನಡೆದಿತ್ತು. ಈ ಸಮಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಈಗಲೂ ಬಿಜೆಪಿ ಅಧಿಕಾರದಲ್ಲಿದೆ. ಈ ಪಕ್ಷ ದೇಶದ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದನ್ನು ಈ ಘಟನೆ ಖಚಿತಪಡಿಸುತ್ತದೆ ಎಂದಿದ್ದಾರೆ.

ದೇಶದ ರಾಜಧಾನಿಯಲ್ಲಿರುವ ಪ್ರಜಾಪ್ರಭುತ್ವದ ಸವೋಚ್ಛ ಸೌಧವನ್ನೇ ರಕ್ಷಿಸಲು ವಿಫಲವಾಗಿರುವ ಪ್ರಧಾನಿ ಮತ್ತು ಗೃಹಮಂತ್ರಿ ಆಡಳಿತದಲ್ಲಿಯೂ ಪೂರ್ಣವಾಗಿ ಸೋತಿದ್ದಾರೆ ಎನ್ನುವುದು ಸ್ಪಷ್ಟ. ದೆಹಲಿಯ ಗೃಹ ಸಚಿವಾಲಯ ಮತ್ತು ಗುಪ್ತಚರ ವಿಭಾಗ ಇಂತಹ ದುಷ್ಕೃತ್ಯ ತಡೆಯಲು ವಿಫಲವಾಗಿದೆ ಎಂದಿದ್ದಾರೆ.

ರಾಜಧಾನಿಯಲ್ಲೇ ಅದರಲ್ಲೂ ಸಂಸತ್ತಿನಲ್ಲಿಯೇ ಇಂತಹ ಘಟನೆ ತಡೆಯಲು ಅಸಮರ್ಥರಾದವರು ಇನ್ನು ದೇಶಪೂರ್ತಿ ಹೇಗೆ ನಿಗಾ ಇಟ್ಟು ನಮ್ಮ ಗಡಿ ಮತ್ತು ಜನತೆಯನ್ನು ಕಾಪಾಡುತ್ತಾರೆ ಎನ್ನುವುದು ಇಲ್ಲಿ ಪ್ರಶ್ನೆ.

ದಾಳಿಯಲ್ಲಿ ಭಾಗಿಯಾಗಿದ್ದವರು ಮೈಸೂರಿನ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಅನುಮೋದನೆಯ ಪಾಸ್ ಪಡೆದಿದ್ದರು. ಸಂಸದರು ಇಂತಹ ವ್ಯಕ್ತಿಗಳಿಗೆ ಪಾಸ್ ನೀಡಿರುವುದು ದುರದೃಷ್ಟಕರ. ಪಾಸ್ ಕೇಳುವವರ ಹಿನ್ನೆಲೆ ಗಮನಿಸದೇ ಇವರು ತಳೆದ ಬೇಜವಾಬ್ದಾರಿಯಿಂದಲೇ ಇಂತಹ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಂಸದರನ್ನು ತನಿಖೆಗೊಳಪಡಿಸುವ ಅಗತ್ಯವಿದೆ. ಅಲ್ಲದೇ ಚುನಾವಣೆ ವೇಳೆ ಬಿಜೆಪಿ ಎಂತಹ ಕೆಲಸಕ್ಕಾದರೂ ಮುಂದಾಗುತ್ತದೆ ಎನ್ನುವುದು ಈ ಹಿಂದೆಯೂ ಹಲವು ಬಾರಿ ಸಾಬೀತಾಗಿದೆ. ಘಟನೆಯಲ್ಲಿ ಈ ಪಕ್ಷದವರ ಕೈವಾಡವಿದ್ದರೂ ಇರಬಹುದು. ಹೀಗಾಗಿ ನಿಷ್ಪಕ್ಷಪಾತ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ಘಟನೆಯಲ್ಲಿ ಭಾಗಿಯಾದವರು ಯಾವುದೇ ವಿಚಾರಧಾರೆ ಹೊಂದಿರಲಿ, ಸಂಸತ್ತಿನ ಮೇಲೆ ದಾಳಿಗೆ ಯತ್ನಿಸುವುದು ಘೋರ ತಪ್ಪು. ಹೀಗಾಗಿ ಕಠಿಣ ಶಿಕ್ಷೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ, ಆದರೆ ದಾಳಿ ನಡೆಸುವ ಮತ್ತು ಕಾನೂನು ಉಲ್ಲಂಘಿಸುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ಸಂವಿಧಾನ ಬದ್ಧವಾಗಿ ನಡೆಯುವ ಸರ್ಕಾರವನ್ನು ಪ್ರಶ್ನಿಸುವುದಕ್ಕೆ ಹಲವು ಮಾರ್ಗಗಳಿವೆ. ಕಾನೂನು ರೂಪುಗೊಳ್ಳುವ ಸಂಸತ್ತಿಗೇ ನುಗ್ಗಿ ದಾಂದಲೆ ನಡೆಸುವುದು ಸೂಕ್ತ ನಡೆಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಂಕೆಎಸ್‌ ಖಂಡನೆ

ಇಂದಿನ ಸಂಸತ್ ಮೇಲಿನ ದಾಳಿ ಅತ್ಯಂತ ಖಂಡನೀಯವಾದದ್ದು. ಶಾಸನ ರೂಪಿಸುವಂತಹ ದೇಗುಲದಲ್ಲಿಯೇ ಇಂತಹ ಕೃತ್ಯ ನಡೆದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ. ಹಿಂದೆಯೂ ಹಲವು ಬಾರಿ ಈ ರೀತಿಯ ದಾಳಿಗಳು ನಡೆದಿದ್ದರೂ ಸಹ ಭದ್ರತಾ ಲೋಪವನ್ನು ಮತ್ತೆ ಎಸಗಿರುವುದನ್ನು ನೋಡಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದ್ದಾರೆ.