ಸಾರಾಂಶ
ಕಾಳೇನ ಅಗ್ರಹಾರ - ನಾಗವಾರ (21.26ಕಿಮೀ) ನಡುವಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕಾಗಿ ಮುಂದಿನ ಮಾರ್ಚ್ ಅಂತ್ಯದೊಳಗೆ 20 ರೈಲುಗಳನ್ನು ಒದಗಿಸುವ ಭರವಸೆಯನ್ನು ಬಿಇಎಂಎಲ್ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಳೇನ ಅಗ್ರಹಾರ - ನಾಗವಾರ (21.26ಕಿಮೀ) ನಡುವಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕಾಗಿ ಮುಂದಿನ ಮಾರ್ಚ್ ಅಂತ್ಯದೊಳಗೆ 20 ರೈಲುಗಳನ್ನು ಒದಗಿಸುವ ಭರವಸೆಯನ್ನು ಬಿಇಎಂಎಲ್ ನೀಡಿದೆ.ಮೊದಲ ಪ್ರೊಟೊಟೈಪ್ ರೈಲಿನ ಕಾರ್ಯ ಸೆಪ್ಟೆಂಬರ್ ವೇಳೆಗೆ ಮುಗಿಯಲಿದೆ. ನಂತರ ಹೆಚ್ಚಿನ ರೈಲುಗಳ ನಿರ್ಮಾಣ ಆಗಲಿದೆ. ನಗರದಲ್ಲಿನ ಬಿಇಎಂಎಲ್ ಕಾರ್ಖಾನೆಯಲ್ಲಿ ರೈಲು ನಿರ್ಮಾಣಕ್ಕಾಗಿ ಹೆಚ್ಚುವರಿ ಕ್ರಮ ವಹಿಸಲಾಗುತ್ತಿದೆ. ಜತೆಗೆ ಭೋಪಾಲ್ನಲ್ಲಿ ಮೆಟ್ರೋ ಕೋಚ್, ರೈಲು ನಿರ್ಮಾಣಕ್ಕಾಗಿ ಹೊಸ ಉತ್ಪಾದನಾ ಘಟಕ ನಿರ್ಮಾಣ ಆಗುತ್ತಿದೆ. ಇದರಿಂದ ಬಿಇಎಂಎಲ್ನ ರೈಲು ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ.
ಗುಲಾಬಿ ಮಾರ್ಗದ ಎತ್ತರಿಸಿದ ಮಾರ್ಗ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ (7.5ಕಿಮೀ) ನಿಲ್ದಾಣಗಳು, ಮಾರ್ಗ ಸೇರಿ ಶೇ.100 ರಷ್ಟು ಕಾಮಗಾರಿ ಆಗಿದೆ. ಇನ್ನು ಡೈರಿ ಸರ್ಕಲ್ನಿಂದ ನಾಗವಾರದವರೆಗಿನ (13.76ಕಿಮೀ) ಭೂಗತ ಮಾರ್ಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ.ನೀಲಿ ಮಾರ್ಗಕ್ಕೂ ನಿಯೋಜನೆ:
ಬೆಂಗಳೂರು ಮೆಟ್ರೋ ರೈಲು ನಿಗಮದ ಜೊತೆಗೆ 2023ರ ಆಗಸ್ಟ್ನಲ್ಲಿ ಬಿಇಎಂಎಲ್ ₹3,177 ಕೋಟಿ ಮೊತ್ತದ ಬಿಡ್ನ್ನು ತನ್ನದಾಗಿಸಿಕೊಂಡು 318 ಮೆಟ್ರೋ ಬೋಗಿ (52ರೈಲು) ಒದಗಿಸುವ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಈ ಮಾರ್ಚ್ನಲ್ಲಿ ₹405 ಕೋಟಿಯ ಮತ್ತೊಂದು ಒಪ್ಪಂದ ಮಾಡಿಕೊಂಡು ಹೆಚ್ಚುವರಿ 42 ಬೋಗಿ ಒದಗಿಸುವ ಒಡಂಬಡಿಕೆ ಆಗಿತ್ತು. ಈ ಪೈಕಿ ಆರಂಭಿಕವಾಗಿ 96 ಬೋಗಿಗಳು (16ರೈಲು) ಗುಲಾಬಿ ಮಾರ್ಗಕ್ಕೆ ಎಂದು ನಿರ್ಧಾರವಾಗಿತ್ತು. ಉಳಿದ ರೈಲುಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಮಾರ್ಗ ಸಂಪರ್ಕಿಸುವ ನೀಲಿ ಮಾರ್ಗಕ್ಕೆ ನಿಯೋಜಿಸಲು ಯೋಜಿಸಲಾಗಿದೆ.ಇನ್ನು ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದರೂ ಮೆಟ್ರೋ ರೈಲುಗಳು ಇಲ್ಲದೆ ತೊಂದರೆಯಾಗಿದ್ದು, ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ.