ಸಾರಾಂಶ
ಇದು ಗ್ರಹಗಳ ಮೆರವಣಿಗೆ! ಸೌರಮಂಡಲದಲ್ಲಿ ಸಂಭವಿಸುವ ಈ ಅಪೂರ್ವ ವಿದ್ಯಮಾನ ಸೋಮವಾರ ಘಟಿಸಿತು. ಆದರೆ, ಬೆಂಗಳೂರು ಸೇರಿ ರಾಜ್ಯದಲ್ಲಿ ನಸುಕಿನ ಮಳೆ, ಮೋಡವಿದ್ದ ಕಾರಣ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.
ಬೆಂಗಳೂರು : ಇದು ಗ್ರಹಗಳ ಮೆರವಣಿಗೆ! ಸೌರಮಂಡಲದಲ್ಲಿ ಸಂಭವಿಸುವ ಈ ಅಪೂರ್ವ ವಿದ್ಯಮಾನ ಸೋಮವಾರ ಘಟಿಸಿತು. ಆದರೆ, ಬೆಂಗಳೂರು ಸೇರಿ ರಾಜ್ಯದಲ್ಲಿ ನಸುಕಿನ ಮಳೆ, ಮೋಡವಿದ್ದ ಕಾರಣ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.
ಭೂಮಿಯಿಂದ ನೋಡಿದರೆ ಬುಧ, ಗುರು, ಯುರೇನಸ್, ಮಂಗಳ, ನೆಪ್ಚೂನ್, ಶನಿ ಗ್ರಹಗಳು ಒಂದರ ಹಿಂದೊಂದರಂತೆ ಒಂದೇ ಸಾಲಿನಲ್ಲಿ ಇರುವಂತೆ ಗೋಚರ ಆಗುತ್ತಿತ್ತು. ನೈಜವಾಗಿ ಇವೆಲ್ಲ ಗ್ರಹಗಳು ಸೂರ್ಯನ ಸುತ್ತ ತಮ್ಮದೇ ಕಕ್ಷೆಯಲ್ಲಿ ಬೇರೆ ಬೇರೆ ವೇಗದಲ್ಲಿ ಸುತ್ತುತ್ತಿದರೂ ನಮಗೆ ಸೂರ್ಯನ ಒಂದೇ ಬದಿಯಲ್ಲಿ ಇರುವಂತೆ ಕಾಣಬಹುದಿತ್ತು.
ಈ ಬಗ್ಗೆ ಮಾತನಾಡಿದ ನೆಹರು ತಾರಾಲಯದ ನಿರ್ದೇಶಕ ಡಾ.ಗುರುಪ್ರಸಾದ್ ಬಿ.ಆರ್., ಆರು ಗ್ರಹಗಳು ಒಂದೇ ಸಾಲಿನಲ್ಲಿ ಇದ್ದರೂ ಆಗಸ ಶುಭ್ರವಾಗಿದ್ದರೆ ಶನಿ, ಮಂಗಳವನ್ನು ಬರಿಗಣ್ಣಿನಲ್ಲೇ ನೋಡಬಹುದಿತ್ತು. ಅದರಂತೆ ಸದ್ಯಕ್ಕೆ ಗುರು, ಬುಧ ಗ್ರಹಗಳು ಸೂರ್ಯನಿಗೆ ಹತ್ತಿರ ಇರುವುದರಿಂದ ದಿಗಂತದಲ್ಲಿ ಸೂರ್ಯೋದಯಕ್ಕೆ ಮುನ್ನ ನಸುಕಿನಲ್ಲಿ ಈ ಅಪರೂಪದ ವಿದ್ಯಮಾನ ಕಾಣಬಹುದಿತ್ತು. ಯುರೇನಸ್, ನೆಪ್ಚೂನ್ ಬರಿಗಣ್ಣಿಗೆ ಕಾಣುವುದಿಲ್ಲ. ಒಟ್ಟಾರೆ ಈ ವಿದ್ಯಮಾನ ನೋಡಲು ಟೆಲಿಸ್ಕೋಪ್ ಅಗತ್ಯ ಎಂದರು.
ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಳೆಯಾದ ಕಾರಣ ಯಾವ ಗ್ರಹಗಳನ್ನೂ ನೋಡಲು ಸಾಧ್ಯವಾಗಲಿಲ್ಲ. ಇದೇ ವರ್ಷ ಏ.8ರಂದು ನಾಲ್ಕೈದು ಗ್ರಹಗಳ ಒಂದೇ ನೇರದಲ್ಲಿ ಸೇರಿದ್ದರಿಂದ ಇದೇ ರೀತಿಯ ವಿದ್ಯಮಾನ ಸಂಭವಿಸಿತ್ತು. ವಿರಳ ವಿದ್ಯಮಾನವಾದ ಕಾರಣ ಜಾಗತಿಕವಾಗಿ ‘ಪರೇಡ್ ಆಫ್ ದಿ ಪ್ಲಾನೆಟ್’ ಎಂದೇ ಜನಪ್ರಿಯತೆ ಪಡೆದಿದೆ. ನೆಹರು ತಾರಾಲಯದಿಂದ ಇದರ ವೀಕ್ಷಣೆಗೆ ಭಾನುವಾರ ರಾತ್ರಿಯಿಂದ ದೂರದರ್ಶಕದ ಮೂಲಕ ನೋಡುವ ವ್ಯವಸ್ಥೆ ಮಾಡಿಕೊಂಡಿದ್ದರೂ ಮೋಡದ ಕಾರಣದಿಂದ ಕಂಡಿಲ್ಲ ಎಂದು ಅವರು ಹೇಳಿದರು.
ತಾರಾಲಯದ ಹಿರಿಯ ವಿಜ್ಞಾನಿ ಆನಂದ ಎಂ.ವೈ. ಮಾತನಾಡಿ, ಕೆಲದಿನ ಅಂದರೆ ಒಂದು ವಾರಪೂರ್ತಿ ಇದನ್ನು ನೋಡಬಹುದು. ಐದು, ನಾಲ್ಕು ಗ್ರಹಗಳು ಒಟ್ಟಿಗೆ ಬರುವುದು ಅಪರೂಪವಲ್ಲ. ಗ್ರಹಗಳ ಚಲನೆ ಗಮನಿಸಿದರೆ ನವೆಂಬರ್ನಲ್ಲಿ ಈ ರೀತಿ ಬೇರೆ ಬೇರೆ ಗ್ರಹಗಳು ಒಟ್ಟಿಗೆ ಇರುವುದನ್ನು ಕಾಣುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.