ಸರ್ಕಾರಿ ಕಾಲೇಜುಗಳಲ್ಲಿ ಕೌಶಲ್ಯವನ್ನೂ ಕಲಿಸಿ - ಉದ್ಯೋಗ ಕೊಡಲು ಉದ್ಯಮಗಳು ಕೌಶಲ್ಯ ಕೇಳುತ್ತವೆ

| Published : Oct 08 2024, 01:22 PM IST

pooja gandhi

ಸಾರಾಂಶ

ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎನ್ನುವುದ ದಶಕಗಳ ಬೇಡಿಕೆ. ಆದರೆ ಇದಕ್ಕೆ ಕೌಶಲ್ಯ ಎನ್ನುವ ಮಾನದಂಡ ಅಡ್ಡಿಯಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸರ್ಕಾರ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಪರಿಚಯಿಸಬೇಕಿದೆ.

ಪೂಜಾಗಾಂಧಿ, ನಟಿ

ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎನ್ನುವುದ ದಶಕಗಳ ಬೇಡಿಕೆ. ಆದರೆ ಇದಕ್ಕೆ ಕೌಶಲ್ಯ ಎನ್ನುವ ಮಾನದಂಡ ಅಡ್ಡಿಯಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸರ್ಕಾರ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಪರಿಚಯಿಸಬೇಕಿದೆ.

==============

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎನ್ನುವ ದಶಕಗಳ ಬೇಡಿಕೆಗೆ ಸರ್ಕಾರ ಸಂಪುಟ ಸಭೆಯಲ್ಲಿ ಅನುಮೋದಿಸಿದರೂ, ಕೆಲವೊಂದು ಅಡ್ಡಿಗಳು ಎದುರಾಗಿವೆ. ಖಾಸಗಿ ಸಂಸ್ಥೆಗಳು ಕೌಶಲ್ಯವೊಂದೇ ಅರ್ಹತೆಗೆ ಮಾರ್ಗಸೂಚಿ ಎಂದು ವಾದಿಸಿ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿವೆ. 2024ರ ಕೇಂದ್ರ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಭಾರತದಲ್ಲಿ ಪದವಿಯನ್ನು ಪೂರೈಸಿದ ಶೇ.49ರಷ್ಟು ವಿದ್ಯಾರ್ಥಿಗಳು ಇಂದಿನ ಔದ್ಯೋಗಿಕ ಜಗತ್ತಿಗೆ ಬೇಕಾದ ಕೌಶಲ್ಯ ಹೊಂದಿಲ್ಲ ಎನ್ನುವ ಸಂಗತಿ ಬಯಲಾಗಿದೆ.

ಕೌಶಲ್ಯದ ಕೊರತೆ ಹೆಚ್ಚು ಕಂಡುಬಂದಿರುವುದೇ ಗ್ರಾಮೀಣ ಭಾಗದಲ್ಲಿ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳಿಗೆ ಅಗತ್ಯವಿರುವ ಆಳ ಜ್ಞಾನ ಪಡೆಯುವುದರಿಂದ ವಂಚಿತರಾಗಿದ್ದಾರೆ. ಕಂಪನಿಗಳ ಜೊತೆಗೆ ಕಾಲೇಜುಗಳಿಗೆ ಒಡನಾಟವಿಲ್ಲದಿರುವುದೇ ಇದಕ್ಕೆ ಬಹುಮುಖ್ಯ ಕಾರಣ. ನಗರ ಪ್ರದೇಶದಲ್ಲಿ ಕಾಲೇಜುಗಳು ಕೋರ್ಸ್‌ಗಳಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತವೆಯೋ ಅಷ್ಟನ್ನೇ ಕೌಶಲ್ಯಾಧರಿತ ವಿಷಯಗಳಿಗೆ ನೀಡುತ್ತವೆ. ಉದ್ಯಮಗಳೊಂದಿಗಿನ ನಿರಂತರ ಸಹಭಾಗಿತ್ವದಿಂದಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತವೆ .ಆದರೆ ಗ್ರಾಮೀಣ ಭಾಗದಲ್ಲಿ ಆ ವ್ಯವಸ್ಥೆಯಿಲ್ಲ.

ಪದವಿ ತರಗತಿಗಳಲ್ಲಿ ಇಂಗ್ಲಿಷ್‌ ಸಂವಹನ ನಡೆಸಲು, ಎಕ್ಸೆಲ್, ಅಡ್ವಾನ್ಸ್ಡ್ಎಕ್ಸೆಲ್, ಅಡ್ವಾನ್ಸ್ಡ್‌ಟ್ಯಾಲಿ, ಮಾನವ ಸಂಪನ್ಮೂಲ ಕುರಿತ ಸಾಫ್ಟ್‌ವೇರ್‌ಗಳು, ನೆಟ್‌ವರ್ಕಿಂಗ್ ಇತ್ಯಾದಿಗಳನ್ನು ಕಾಲೇಜಿನ ಅವಧಿಯಲ್ಲಿ ಕಲಿಸಲು ಮತ್ತು ರಜಾದಿನಗಳಲ್ಲಿ ಇಂಟರ್ನ್‌ಶಿಪ್‌ಗಳನ್ನು ನಡೆಸಲು ಖಾಸಗಿ ಉದ್ಯಮಗಳೊಂದಿಗೆ ಸರ್ಕಾರ ಕೈ ಜೋಡಿಸಬೇಕಾಗಿದೆ. ಉದ್ಯೋಗದಲ್ಲಿ ಮೀಸಲಾತಿಯನ್ನು ವಿರೋಧಿಸುವ ಉದ್ಯಮಗಳು ಸ್ಥಳೀಯರ ಕೌಶಲ್ಯ ಮತ್ತು ಅವರು ಉದ್ಯೋಗ ಗಳಿಸಲು ಬೇಕಾದ ಪರಿಸರ ಸೃಷ್ಟಿಸಲು ಸರ್ಕಾರದ ಜೊತೆ ಕೈ ಜೋಡಿಸುವಂತೆ ಮಾಡಬೇಕು.

ಸದ್ಯ ಇರುವ ಸಮಸ್ಯೆ ಏನು?

ದೇಶದಲ್ಲಿ ಸರ್ಕಾರ ಈಗಾಗಲೇ ಹಲವಾರು ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ತೃಪ್ತಿಕರವಾದ ರೀತಿಯಲ್ಲಿ ಕೌಶಲ್ಯಾಭಿವೃದ್ಧಿಯಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಪದವಿ ಮತ್ತು ಡಿಪ್ಲೋಮಾ ಕೋರ್ಸಗಳು ಒಂದೆಡೆಯಾದರೆ, ಕೌಶಲ್ಯ ತರಬೇತಿ ಕೋರ್ಸಗಳು ಅವುಗಳಿಂದ ಬೇರ್ಪಟ್ಟಿರುವುದು.

ಇದಕ್ಕೆ ಇರುವ ಪರಿಹಾರಗಳೇನು?

*ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ಕೆಲ ಮಾರ್ಪಾಡು ಆಗಬೇಕಿದೆ. ಕಾಲೇಜಿನ ಆವರಣದಲ್ಲಿಯೇ ಪದವಿ ಜೊತೆ ಜೊತೆಯಲ್ಲೇ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕಿದೆ.

*ಕಾಲೇಜುಗಳು ವಿದ್ಯಾರ್ಥಿಸ್ನೇಹಿಯಾಗಿರಬೇಕು, ಉದ್ಯಮಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಪರಿಕರಗಳು, ಕೌಶಲ್ಯಾಭಿವೃದ್ಧಿ ಕೇಂದ್ರಗಳು, ಖಾಸಗಿ ಉದ್ಯಮಗಳ ಪ್ರಾಯೋಜಕತ್ವದಲ್ಲಿ ತರಬೇತುದಾರರ ಪೂರೈಕೆ ಮತ್ತು ಕೋರ್ಸ್‌ ಕಲಿಕೆಯ ಹೊಣೆಗಾರಿಕೆಯನ್ನು ಸರ್ಕಾರಗಳು ನಿಭಾಯಿಸಬೇಕಿದೆ.

*ಖಾಸಗಿ ಉದ್ದಿಮೆಗಳು ನಡೆಸುವ ಸರ್ಟಿಫಿಕೇಷನ್ ಮತ್ತು ಇಂಟರ್ನ್ಶಿಪ್‌ ಅಂಕಗಳು, ಪದವಿ ಪರೀಕ್ಷೆಗಳ ಅಂಕಗಳೊಂದಿಗೆ ಶೇ.0 ಅನುಪಾತದಲ್ಲಿ ತೂಕವಿರುವಂತೆ ನಿಯಮಾವಳಿ ರೂಪಿಸಿ, ಕೌಶಲ್ಯಾ ಭಿವೃದ್ಧಿ ಕೋರ್ಸಗಳಿಗೆ ವಿದ್ಯಾರ್ಥಿಗಳು ಪ್ರಾಮುಖ್ಯತೆ ನೀಡುವಂತೆ ಮಾಡುವುದು.

* ಪದವಿ ಉಪನ್ಯಾಸಕರನ್ನೇ ತರಬೇತುಗೊಳಿಸಿ, ಪ್ರೋತ್ಸಾಹಧನ ನೀಡಬೇಕು. ನಿರಂತರವಾಗಿ ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಕೌಶಲ್ಯಕ್ಕೆ ಅವಕಾಶ ಲಭಿಸುವಂತೆ ಮಾಡಬೇಕು.

ಕನ್ನಡಿಗರ ಕೌಶಲ್ಯಾಭಿವೃದ್ಧಿ ವಿಧಾನ:

ಕರ್ನಾಟಕದಲ್ಲಿ ನೆಲೆಸಿರುವ ಉದ್ಯಮ ಸಂಸ್ಥೆಗಳ ಮೂಲಕ ಕನ್ನಡಿಗರ ಕೌಶಲ್ಯಾಭಿವೃದ್ಧಿಗೆ ಅವಕಾಶ ಕಲ್ಪಿಸುವುದು. ಕರ್ನಾಟಕದಲ್ಲಿ ನೂರಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಮತ್ತು ವಾರ್ಷಿಕ 50 ಕೋಟಿ ರು. ಮೀರಿ ವಹಿವಾಟು ನಡೆಸುವ ಕೈಗಾರಿಕೆಗಳು, ಐಟಿ- ಬಿಟಿ ಕಂಪನಿಗಳು ಮತ್ತು ಎಲ್ಲಾ ರೀತಿಯ ಉದ್ಯಮಗಳು ತಮ್ಮ ಒಟ್ಟು ಉದ್ಯೋಗಿಗಳ ಶೇ.20ರಷ್ಟು ಸಂಖ್ಯೆಯ ಕನ್ನಡಿಗರನ್ನು ಕೌಶಲ್ಯ, ಮೃದುಕೌಶಲ್ಯ, ಮರುಕೌಶಲ್ಯ, ಮತ್ತು ಉನ್ನತ ಕೌಶಲ್ಯ ಪಡೆದವರಂತರನ್ನಾಗಿಸಲು ಪ್ರೋತ್ಸಾಹಿಸುವುದು.

ಜಾರಿ ಮಾಡುವುದು ಹೇಗೆ?

*ಉದ್ಯಮಗಳು ತಮ್ಮ ಆವರಣದಲ್ಲಿ ಕನ್ನಡಿಗರಿಗೆ ಸ್ಟೈಪೆಂಡ್ ಆಧಾರಿತ ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ನಡೆಸಲು ಆದ್ಯತೆ ನೀಡಬೇಕು.

*ಕಂಪನಿಗಳು ಸರ್ಕಾರ ನಿಗದಿಪಡಿಸಿದ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳ ಜೊತೆ ಸಹಭಾಗಿತ್ವ ನಡೆಸುವ ಮೂಲಕ ಪದವಿ ಅವಧಿಯಲ್ಲೇ ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ನಡೆಸಬೇಕು. ಈ ಮೂಲಕ ತಮ್ಮದೇ ತರಬೇತುದಾರರನ್ನು ನೇಮಿಸುವ ಅಥವಾ ವಿಶ್ವವಿದ್ಯಾಲಯದ ಉಪನ್ಯಾಸಕರನ್ನೇ ತರಬೇತುಗೊಳಿಸಿ ಅವರಿಗೆ ಪ್ರೋತ್ಸಾಹಧನ ನೀಡಿ, ಹೆಚ್ಚುವರಿ ತರಗತಿಗಳ ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ನಡೆಸುವುದು. ಬೇಕಾಗುವ ಪಠ್ಯ ಮತ್ತು ಪೀಠೋಪಕರಣಗಳನ್ನು ಸಂಸ್ಥೆಗಳೇ ಕಾಲೇಜುಗಳಿಗೆ ಕೊಡುಗೆಯಾಗಿ ನೀಡಬೇಕು.

*ಉದ್ಯಮಗಳು ಖಾಸಗಿ ತರಬೇತಿ ಸಂಸ್ಥೆಗಳಿಗೆ (ಡ್ರೈವಿಂಗ್ ಸ್ಕೂಲ್‌, ಟ್ಯಾಲಿ ಟ್ರೈನಿಂಗ್, ಅಡ್ವಾನ್ಸ್ಡ್ಎಕ್ಸೆಲ್ ಇತ್ಯಾದಿ) ನಿರುದ್ಯೋಗಿ ಅಥವಾ ಕರ್ನಾಟಕದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ನಡೆಸಲು ಹಣ ಪಾವತಿ ಮಾಡುವ ನಿರ್ಧಾರ ಕೈಗೊಳ್ಳಲಿ.

ಕೌಶಲ್ಯಾಭಿವೃದ್ಧಿ ಯೋಜನೆಯ ಲಾಭಗಳು

ಕನ್ನಡಿಗರ ಲಾಭ: ನಿರುದ್ಯೋಗಿ ಯುವಕ-ಯುವತಿಯರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ವಿದ್ಯಾರ್ಹತೆಗೆ ಪೂರಕವಾದ, ಸಾಫ್ಟ್‌ ಸ್ಕಿಲ್‌ ತರಬೇತಿಗಳನ್ನು ತರಗತಿಯಲ್ಲಿಯೇ ಗಳಿಸಿಕೊಳ್ಳುವುದರ ಮೂಲಕ ಉದ್ಯೋಗದಲ್ಲಿ ಆದ್ಯತೆ ಪಡೆಯಲು ಸಾಧ್ಯವಾಗಿಸುವುದು.

ಖಾಸಗಿ ಪದವಿ ಕಾಲೇಜುಗಳಲ್ಲಿ ಇಂಟರ್ನ್‌ಶಿಪ್‌ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶಗಳಿರುತ್ತವೆ. ಅಂತಹದೇ ಸೌಲಭ್ಯವನ್ನು, ಪದವಿ ಕಾಲೇಜಿನ ಆವರಣದಲ್ಲೇ ಕಲ್ಪಿಸಬೇಕು.

ಸರ್ಕಾರದ ಲಾಭ: ರಾಜ್ಯದ ಯುವಕ- ಯುವತಿಯರಿಗೆ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಕನ್ನಡಿಗರಿಗೆ ಉದ್ಯೋಗ ಜಗತ್ತಿಗೆ ಪೂರಕ ಕೌಶಲ್ಯ ಸಿಗುವಂತಹ ವಾತಾವರಣ ಸೃಷ್ಟಿಸಿದ ಹಿರಿಮೆ ಸಿಗಲಿದೆ.

ಸರ್ಕಾರ ಇವನ್ನು ಅಳವಡಿಸಿಕೊಳ್ಳಬಹುದು:

* ಕನ್ನಡಿಗರಿಗೆ ಕೌಶಲ್ಯಾಭಿವೃದ್ಧಿಯನ್ನು ನಡೆಸಿದ ಶೇ.25ರಷ್ಟು ಉದ್ಯಮಗಳು ಸ್ವಯಂ ಘೋಷಿಸಿಕೊಳ್ಳಲು ಅವಕಾಶ ನೀಡುವುದು. ಅಂತಹ ಉದ್ಯಮಗಳಿಗೆ ಇಲಾಖೆಗಳಲ್ಲಿನ ಅನುಮತಿ, ಅನುಮೋದನೆ ಮುಂತಾದ ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡ ಸಿಂಗಲ್‌ ವಿಂಡೋ ಯೋಜನೆ ಜಾರಿಗೊಳಿಸಿ, ಕಾಲಮಿತಿಯಲ್ಲಿ ಅನುಮೋದನೆ ಸಿಗದಿದ್ದರೆ, ಸ್ವಯಂಚಾಲಿತ ಅನುಮೋದನೆಯ ಹಕ್ಕು ಅವರಿಗೆ ಸಿಗುವಂತೆ ಮಾಡುವುದು.

*ಶೇ.25ರ ಅನುಪಾತದಲ್ಲಿ ಕನ್ನಡಿಗರಿಗೆ ಸರ್ಟಿಫಿಕೇಷನ್‌ ಕೋರ್ಸ್‌ಗಳನ್ನು ನಡೆಸಿದ ಸಂಸ್ಥೆಗಳು ಸ್ವಯಂ ಘೋಷಣೆ ಮಾಡಲು ಅವಕಾಶ ಕಲ್ಪಿಸುವುದು. ಅಂತಹ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಭೇಟಿ ಮತ್ತು ದಾಖಲೆಗಳ ಪರಿಶೀಲನೆಯನ್ನು (ದೂರುಗಳಿಲ್ಲದ ಪಕ್ಷದಲ್ಲಿ) ನಿರ್ಬಂಧಿಸುವುದು.

* ವರ್ಷಕ್ಕೊಮ್ಮೆ ‘ಕನ್ನಡಿಗರ ಹೆಮ್ಮೆಯ ಉದ್ಯಮಗಳು’ ಸಮಾವೇಶ ಆಯೋಜಿಸುವುದು.

* ಅತ್ಯಂತ ಹೆಚ್ಚು ಕನ್ನಡಿಗರಿಗೆ ತರಬೇತಿ ಸರ್ಟಿಫಿಕೇಟ್ ವಿತರಿಸಿದ ಮೊದಲ 50 ಉದ್ಯಮಗಳಿಗೆ ಸನ್ಮಾನ, ಪ್ರಮಾಣಪತ್ರನೀಡುವುದು.

*ಅತ್ಯಂತ ಹೆಚ್ಚು ಕನ್ನಡಿಗರಿಗೆ ತರಬೇತಿ ಸರ್ಟಿಫಿಕೇಟ್ ವಿತರಿಸಿದ 10 ಉದ್ಯಮಗಳ ಮುಖ್ಯಸ್ಥರನ್ನು ಒಳಗೊಂಡ ‘ಮುಖ್ಯಮಂತ್ರಿಗಳ ನೇತೃತ್ವದ ಕನ್ನಡಿಗರ ಕೌಶಲ್ಯಾಭಿವೃದ್ಧಿ ಸಲಹಾ ಸಮಿತಿ’ ರಚಿಸಿ ಮೂರು ತಿಂಗಳಿಗೊಮ್ಮೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸುವುದು. ಡಿಸಿಎಂ, ಕಾರ್ಮಿಕ, ಕೈಗಾರಿಕಾ, ಉನ್ನತ ಶಿಕ್ಷಣ , ಕೌಶಲ್ಯಾಭಿವೃದ್ಧಿ ಸಚಿವರನ್ನು ಸದಸ್ಯರನ್ನಾಗಿ ನೇಮಿಸುವುದು.

* ಮುಖ್ಯಮಂತ್ರಿಗಳ ಅಥವಾ ಕೈಗಾರಿಕಾ ಸಚಿವರ ನೇತೃತ್ವದ ವಿದೇಶ ಪ್ರವಾಸ ನಿಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಿಗೆ ಕಾಯಂ ಆಹ್ವಾನ. ಅಂತಹ ಸಂಸ್ಥೆಗಳು ತಮ್ಮ ಮುಖ್ಯ ದ್ವಾರಗಳಲ್ಲಿ ಮತ್ತು ಪ್ರಚಾರ ಸಾಮಗ್ರಿಗಳಲ್ಲಿ ‘ಕನ್ನಡಿಗರ ಹೆಮ್ಮೆಯ ಉದ್ಯಮ’ ಎಂದು ಅಡಿ ಬರಹ ಹಾಕಲು ಅನುಮತಿಸುವುದು.

* ಕೌಶಲ್ಯಭರಿತ ಮಾನವ ಸಂಪನ್ಮೂಲ, ಕಂಪನಿಗಳ ಬೆಳವಣಿಗೆಯಲ್ಲಿ ಪ್ರಮುಖ ಸಹಕಾರಿಯಾಗಿರುವುದರಿಂದ, ತಮ್ಮದೇ ಉತ್ಪಾದನೆಗೆ, ಸ್ಥಳೀಯ ನುರಿತ ಉದ್ಯೋಗಿಗಳನ್ನು ಸೃಷ್ಟಿಸುವುದು. ತಮ್ಮ ಸಿಎಸ್‌ಆರ್ ಕಾರ್ಯಕ್ರಮಗಳ ಮೂಲಕ ಈ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು.

ಉಪಯೋಗ

*ಗ್ರಾಮೀಣ ಭಾಗದ ಪೂರ್ವ ಪದವಿ ಮತ್ತು ಪದವಿ ಪಡೆದ ವಿದ್ಯಾರ್ಥಿಗಳು ಕೌಶಲ್ಯ, ಮೃದು ಕೌಶಲ್ಯ , ಮರುಕೌಶಲ್ಯ , ಉನ್ನತ ಕೌಶಲ್ಯ ಪಡೆಯಲು ಸಹಕಾರಿ.

*ಉದ್ಯಮಗಳು, ಕಾರ್ಪೊರೇಟ್‌ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ನಿರ್ವಹಣೆಯ ಬಾಬ್ತಿನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗ ಪಡೆಯಲು ಅರ್ಹರನ್ನಾಗಿಸುವುದು.

*ಉದ್ಯಮಗಳ ಜೊತೆ ಒಡನಾಟ ಮತ್ತು ಪಾಲುದಾರಿಕೆಯ ಕಾರ್ಯಕ್ರಮಗಳ ಮೂಲಕ ಕಾಲೇಜುಗಳಲ್ಲಿ ಸಂಶೋಧನೆ ಮತ್ತು ವಿದ್ಯಾರ್ಥಿಗಳಲ್ಲಿ ವಾಣಿಜ್ಯೋದ್ಯಮದ ಬಗೆ ಆಸಕ್ತಿ ಬೆಳೆಸುವುದು..

*ವಿದ್ಯಾರ್ಥಿಗಳಿಗೆ ಬೇಕಾದ ಕೌಶಲ್ಯಗಳನ್ನು ಕಾಲೇಜುಗಳಲ್ಲಿ ಪಡೆಯಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು ಟೈಪಿಂಗ್, ಅಡ್ವಾನ್ಸ್ಡ್ಎಕ್ಸೆಲ್, ಅಡ್ವಾನ್ಸ್ಡ್‌ ಟ್ಯಾಲಿ, ಮಾರ್ಕೆಟಿಂಗ್, ರಿಟೇಲ್, ಸಂಶೋಧನೆ, ಫಾರ್ಮ ಮುಂತಾದ ವಿಷಯಗಳಲ್ಲಿ ಅನುಭವ ಪಡೆದು ಉದ್ಯೋಗ ಅರಸಲು ಸಹಕಾರಿ.

* ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಕಾಲೇಜಿನ ಅವಧಿಯಲ್ಲಿಯೇ ಕೋರ್ಸ್‌ಗಳ ಪ್ರಮಾಣ ಪತ್ರ ಪಡೆಯುವುದರಿಂದ ತಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಪಡೆಯುವ ಸಾಧ್ಯತೆಗಳಿರುತ್ತದೆ.