ಸಾರಾಂಶ
ಬೆಂಗಳೂರು : ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ನಗರದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಅಂಗವಿಕಲರಿಗೆ ಮಾಸಾಶನ, ವಿಧವೆಯರಿಗೆ ಪಿಂಚಣಿ ಮತ್ತು ಉನ್ನತ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ ವಿತರಣೆ ಇತ್ತೀಚೆಗೆ ನೆರವೇರಿತು.
ಕರ್ನಾಟಕ ಜೈವಿಕ ಶಕ್ತಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಆರ್ಯವೈಶ್ಯ ಸಮಾಜದ ಏಳ್ಗೆಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ಇರಲಿದೆ.ಈ ಸಮಾಜದ ಏನೇ ಅಗತ್ಯಗಳಿದ್ದರೂ ಅದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಆರ್ಯವೈಶ್ಯ ಮಹಾಸಭಾ ಖಾಸಗಿಯಾಗಿ ತಮ್ಮ ಸಮಾಜದಲ್ಲಿ ಬಡವರಿಗೆ, ಅಂಗವಿಕಲರಿಗೆ, ವಿಧವಾ ಮಹಿಳೆಯರು ಹಾಗೂ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 180 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, 53 ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ, ಸಂಧ್ಯಶ್ರೀ ಯೋಜನೆಯಡಿ 309 ವಿಧವೆಯರಿಗೆ ಮಾಸಾಶನ, 260 ಅಂಗವಿಕಲರಿಗೆ ಮಾಸಾಶನ ಹಾಗೂ ಅಮರಜ್ಯೋತಿ ವಿಮೆ ವಿತರಿಸಲಾಯಿತು.
ಸಮಾರಂಭದಲ್ಲಿ ಆರ್.ವಿ. ಇನ್ಸ್ಟಿಟ್ಯೂಟ್ ಜಂಟಿ ಕಾರ್ಯದರ್ಶಿ ಡಿ.ಪಿ.ನಾಗರಾಜ್, ಮೈಸೂರು ವಿಭಾಗದ ಇಂಡಿಯನ್ ರೈಲ್ವೆ ಆಪರೇಷನ್ ಮ್ಯಾನೇಜರ್ ಹರಿತಾ ಉಪಸ್ಥಿತರಿದ್ದರು.