ರಾಜ್ಯದಲ್ಲಿ ಮೇವಿಗೂ ಬರ: ಬೆಲೆ 3 ಪಟ್ಟು ಹೆಚ್ಚಳ

| Published : Dec 09 2023, 01:15 AM IST

ಸಾರಾಂಶ

ಪಿಂಡಿಗೆ ₹200ಗೆ ಮಾರಾಟವಾಗುತ್ತಿದ್ದ ರಾಗಿ ಹುಲ್ಲು ಈಗ ₹600!. ಬರಗಾಲದಿಂದ ಬೆಳೆಗಳ ನಷ್ಟ: ಜಾನುವಾರುಗಳ ಮೇವಿಗೂ ಸಮಸ್ಯೆ. 2021ರಲ್ಲಿ ಕಾಲಕಾಲಕ್ಕೆ ಮಳೆಯಾಗಿ ಉತ್ತಮ ಪ್ರಮಾಣದಲ್ಲಿ ಬೆಳೆ ಬಂದಿತ್ತು. 2022ರಲ್ಲಿ ಭಾರಿ ಮಳೆಯಾಗಿ ಬೆಳೆ ಕೊಯ್ಲಿಗೇ ಸಿಗಲಿಲ್ಲ. ಮೇವು ಕೊರತೆ ಆಯ್ತು. ಈ ವರ್ಷ ಬರಗಾಲದಿಂದ 46.11 ಲಕ್ಷ ಹೆಕ್ಟೇರ್‌ ಕೃಷಿ ಬೆಳೆಗೆ ಹಾನಿ. ಮೇವು ತತ್ವಾರ. ಜಾನುವಾರುಗಳಿಗೆ ವರ್ಷಕ್ಕಾಗುವಷ್ಟು ಮೇವು ಸಂಗ್ರಹಕ್ಕೆ ಮುಂದಾದ ರೈತರು. ಮೇವಿನ ಬೆಲೆ ದುಬಾರಿಯಾಗಿರುವುದರಿಂದ ಜಾನುವಾರು ಹೊಂದಿರುವವರಿಗೆ ಸಂಕಷ್ಟ.

*ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಎರಡು ವರ್ಷದಿಂದೀಚೆಗೆ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ಬೆಳೆಹಾನಿ ಉಂಟಾಗಿ ಮೇವಿನ ಬೆಲೆ ಮೂರುಪಟ್ಟು ಹೆಚ್ಚಳವಾಗಿದ್ದು, ಜಾನುವಾರು ಇರುವವರು ಸಂಕಷ್ಟ ಅನುಭವಿಸುವಂತಾಗಿದೆ.

2021ರಲ್ಲಿ ಕಾಲಕಾಲಕ್ಕೆ ಮಳೆಯಾಗಿ ಬೆಳೆಗಳೂ ರೈತರ ಕೈಹಿಡಿದಿದ್ದವು. ಆದರೆ 2022ರಲ್ಲಿ ಭಾರೀ ಮಳೆ ಸುರಿದು ಕೊಯ್ಲು ಸರಿಯಾಗಿ ಕೈಗೇ ಬರಲಿಲ್ಲ. ಇದೀಗ ಪ್ರಸಕ್ತ ಸಾಲಿನಲ್ಲಿ ಬರದಿಂದಾಗಿ ಬೆಳೆಗಳ ಬೆಳವಣಿಗೆ ಭಾರೀ ಪ್ರಮಾಣದಲ್ಲಿ ಕುಂಠಿತವಾಗಿದ್ದರಿಂದ ಎತ್ತು, ಎಮ್ಮೆ ಸೇರಿದಂತೆ ಜಾನುವಾರುಗಳನ್ನು ಸಾಕಿದ ರೈತರು ಮೇವಿನ ಬೆಲೆ ಗಗನಕ್ಕೇರಿರುವುದರಿಂದ ದಿಕ್ಕುತೋಚದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮೊದಲೆಲ್ಲ ರೈತರು ತಾವು ಬೆಳೆದ ಮೇವಿನಲ್ಲಿ ಅಗತ್ಯವಿದ್ದಷ್ಟನ್ನು ಇಟ್ಟುಕೊಂಡು ಅಧಿಕವಾದ ಹುಲ್ಲನ್ನು ಬಣವೆ, ಎತ್ತಿನ ಗಾಡಿ ಅಥವಾ ಟ್ರ್ಯಾಕ್ಟರ್‌ಗಳ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ರೈತರು ರಾಗಿ, ಭತ್ತ ಕೊಯ್ಲಿಗೆ ಯಂತ್ರಗಳನ್ನು ಅವಲಂಬಿಸುತ್ತಿದ್ದು, ಮೊದಲಿನ ಹಾಗೆ ಹುಲ್ಲನ್ನು ಬಣವೆ ಮಾಡಿ ಶೇಖರಿಸಿಟ್ಟುಕೊಳ್ಳಲು ಮುಂದಾಗದೇ ಪಿಂಡಿ ಕಟ್ಟಿಸುತ್ತಿದ್ದಾರೆ.

ಪಿಂಡಿ ಕಟ್ಟಿಸುವುದರಿಂದ ಶೇಖರಿಸಿಟ್ಟುಕೊಳ್ಳಲು, ಮಾರಾಟ ಮಾಡಲು ಅನುಕೂಲವಾಗಿದ್ದು, ಸಾಗಾಣಿಕೆಗೂ ಸುಲಭವಾಗಿದೆ. 2021ರಲ್ಲಿ ಎಲ್ಲೆಡೆಯೂ ಉತ್ತಮ ಮೇವು ಉತ್ಪಾದನೆ ಆಗಿದ್ದರಿಂದ 80ರಿಂದ 100 ರುಪಾಯಿಗೊಂದು ಪಿಂಡಿಯಂತೆ ರಾಗಿ ಹುಲ್ಲು ಮಾರಾಟವಾಗಿತ್ತು. 2022ರಲ್ಲಿ ಮಳೆಯಿಂದ ಬೆಳೆ ಹಾನಿ ಉಂಟಾಗಿ ಈ ಬೆಲೆ 150 ರಿಂದ 200 ರುಪಾಯಿಗೆ ಬಂದು ತಲುಪಿತ್ತು.ಆದರೆ ಪ್ರಸಕ್ತ ಸಾಲಿನಲ್ಲಿ ಬರಗಾಲದಿಂದಾಗಿ ಮೇವಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಒಂದು ಪಿಂಡಿ ರಾಗಿ ಹುಲ್ಲು 500 ರಿಂದ 600 ರುಪಾಯಿವರೆಗೂ ಮಾರಾಟವಾಗುತ್ತಿದೆ. ಮಳೆಗೆ ಸಿಲುಕಿ ರಾಗಿಯು ಕಪ್ಪುಬಣ್ಣಕ್ಕೆ ತಿರುಗದೇ ಉತ್ತಮ ಗುಣಮಟ್ಟ ಹೊಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇದು 800 ರುಪಾಯಿಗೆ ತಲುಪಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ವಹಿವಾಟಿನ ಅನುಭವ ಇರುವ ರೈತರು.

ಜೋಳದ ಮೇವು ವಿಪರೀತ ದುಬಾರಿ:

‘2022ರ ಬೇಸಿಗೆಯಲ್ಲಿ ಒಂದು ಕಟ್ಟು(ಸಣ್ಣ ಪಿಂಡಿ) ಬೇಸಿಗೆ ಜೋಳದ ಮೇವಿಗೆ 10ರಿಂದ 12 ರುಪಾಯಿ ಬೆಲೆಯಿತ್ತು. ಆದರೆ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಒಂದು ಕಟ್ಟಿಗೆ 32 ರುಪಾಯಿಗೆ ಈಗಾಗಲೇ ನಾನೇ ಮಾರಾಟ ಮಾಡಿದ್ದೇನೆ. ಮುಂಬರುವ ಬೇಸಿಗೆಯಲ್ಲಿ ಇದು 50 ರುಪಾಯಿ ತಲುಪಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ತರೀಕೆರೆ ತಾಲೂಕಿನ ರೈತರೊಬ್ಬರು.

ರಾಜ್ಯದಲ್ಲಿವೆ 1 ಕೋಟಿ ಜಾನುವಾರು

ರಾಜ್ಯದಲ್ಲಿ ಸುಮಾರು 1.05 ಕೋಟಿ ಜನುವಾರುಗಳಿದ್ದು, ಅಧಿಕ ಮೇವಿನ ಅಗತ್ಯವಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಬರಗಾಲದಿಂದ 46.11 ಲಕ್ಷ ಹೆಕ್ಟೇರ್‌ನಲ್ಲಿದ್ದ ಕೃಷಿ ಬೆಳೆಗಳು ಹಾನಿಗೊಳಗಾಗಿವೆ. ಪ್ರಾರಂಭದಲ್ಲಿ ಹಸಿರು ಬರ ಎಂದು ಪರಿಗಣನೆಯಾಗಿದ್ದರೂ ನಂತರ ಬಿರುಬಿಸಿಲಿನಿಂದ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಕುಂಠಿತವಾಗಿದ್ದು, ಮೇವಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಅಡಿಕೆ, ತೆಂಗು ವಿಪರೀತ ಹೆಚ್ಚಳವೂ ಕಾರಣ

‘ಮೂರು ವರ್ಷದಿಂದೀಚೆಗೆ ರೈತರು ಅಡಿಕೆ ಮತ್ತು ತೆಂಗು ಬೆಳೆಗೆ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಶುಸಂಗೋಪನೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಅಡಿಕೆ, ತೆಂಗು ಬೆಳೆಗಳಿಗೆ ರೈತರು ಪ್ರಾಮುಖ್ಯತೆ ನೀಡುತ್ತಿದ್ದು, ಹೊಲಗಳೆಲ್ಲಾ ತೋಟಗಳಾಗಿ ಮಾರ್ಪಾಡು ಆಗುತ್ತಿವೆ. ಅಗತ್ಯವಿರುವ ಮೇವನ್ನು ಖರೀದಿಸಿದರಾಯಿತು ಎಂಬ ಮನೋಭಾವವೂ ಮೇವು ದುಬಾರಿಯಾಗಲು ಒಂದು ಕಾರಣವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.