ಸಾರಾಂಶ
ಹಬ್ಬದ ಸೀಸನ್ನಲ್ಲಿ ಕಂಪನಿಗಳು ನೋ ಕಾಸ್ಟ್ ಇಎಂಐ, ರಿಯಾಯಿತಿ, ಅರ್ಧಕ್ಕರ್ಧ ಕಡಿಮೆ ಬೆಲೆ ಇತ್ಯಾದಿ ಆಫರ್ಗಳನ್ನು ನೀಡುತ್ತವೆ. ಈ ಸಂದರ್ಭದಲ್ಲಿ ಗ್ರಾಹಕರು ಗಮನ ನೀಡಬೇಕಾದ ಕೆಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
ಹೊಸ ಫೋನ್, 4ಕೆ ಟಿವಿ, ಸೋಫಾ ಸೆಟ್ಟು, ಫ್ರಿಡ್ಜ್ .. ಹೀಗೆ ಹಬ್ಬ ಬಂತೆಂದರೆ ಮನೆಗೆ ಬರುವ ವಸ್ತುಗಳೆಷ್ಟೋ. ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲ ಖರೀದಿಯಾಯ್ತು ಅಂತ ನಿಟ್ಟುಸಿರು ಬಿಡುವ ಮೊದಲು ನಿಜಕ್ಕೂ ಈ ಖರೀದಿಯಿಂದ ಲಾಭವಾಗಿದೆಯಾ ಅಂತ ಆಲೋಚಿಸಬೇಕಿದೆ.
1. ಅರಿವಿಗೆ ಬರದ ಗುಪ್ತ ಶುಲ್ಕಗಳು
ಹಬ್ಬದ ಸಂದರ್ಭಗಳ ಬಹಳ ಜನರನ್ನು ಆಕರ್ಷಿಸುವುದು ಕಂಪನಿಗಳ ನೋ ಕಾಸ್ಟ್ ಇಎಂಐ ಆಫರ್. ಆದರೆ ನೆನಪಿಟ್ಟುಕೊಳ್ಳಬೇಕಾದ ಅಂಶ ಅಂದರೆ ನೋ ಕಾಸ್ಟ್ ಇಎಂಐ ಅಂದಾಕ್ಷಣ 30,000 ರು. ಬೆಲೆಯ ಫೋನ್ ನಿಮ್ಮ ಕೈಗೆ ಅಷ್ಟೇ ಬೆಲೆಗೆ ಬರುವುದಿಲ್ಲ. ಅದರಲ್ಲಿ ಪ್ರೊಸೆಸಿಂಗ್ ಫೀಸ್ ಇರುತ್ತದೆ, ಕೆಲವೊಂದು ಟ್ಯಾಕ್ಸ್ಗಳಿರುತ್ತವೆ. ಇಎಂಐ ಕಾರಣಕ್ಕೆ ಕ್ಯಾಶ್ ಡಿಸ್ಕೌಂಟ್ಗಳು ಕಟ್ ಆಗುತ್ತವೆ. ಇವೆಲ್ಲಾ ಆಗಿ ಫೋನ್ ನಿಮ್ಮ ಕೈಗೆ ಬರುವಾಗ ನೈಜ ಬೆಲೆಗಿಂತ ಎಷ್ಟೋ ಹೆಚ್ಚಿನ ಮೊತ್ತ ಕೈಜಾರಿರುತ್ತದೆ.
2. ದಂಡದ ಭೀತಿ
ನೋ ಕಾಸ್ಟ್ ಇಎಂಐ ಇದೆ ಅಂದರೂ ಒಂದು ತಿಂಗಳು ಇಎಂಐ ಮೊತ್ತ ಕಟ್ಟದಿದ್ದರೆ ಅದಕ್ಕೆ ದಂಡ ಬೀಳುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ. ಅಲ್ಲಿಗೆ ಮತ್ತೊಂದಷ್ಟು ಹಣ ಕೈಜಾರಿದಂತೆ. ಇದು ಅನೇಕ ಹಣಕಾಸು ವ್ಯವಹಾರಗಳಿಗೆ ತಡೆಯಾಗಲೂಬಹುದು.
3. ಅನಾವಶ್ಯಕ ಪೋಲು
ನಿಮಗೆ 20,000 ರು. ಬೆಲೆಯ ಫೋನ್ ಬೇಕಿರುತ್ತದೆ. ಹೇಗಿದ್ದರೂ ನೋ ಕಾಸ್ಟ್ ಇಎಂಐ ಇದೆಯಲ್ಲ ತಿಂಗಳಿಗೆ ಒಂದೂವರೆಯೋ ಎರಡು ಸಾವಿರವೋ ಕಟ್ಟುವುದು ಕಷ್ಟವಲ್ಲ ಎನಿಸಿ 35,000 ರು.ನ ಮೊಬೈಲ್ ಕೊಳ್ಳುತ್ತೀರಿ. ಇದರಿಂದ ಇಎಂಐ ಮೂಲಕ ಜೇಬಿಗೆ ಕತ್ತರಿ ಬೀಳುವ ಜೊತೆಗೆ ಅನಾವಶ್ಯಕ ಪೋಲು ಮಾಡಿದಂತೆಯೂ ಆಗುತ್ತದೆ.
4. ಹೆಚ್ಚುವ ಒತ್ತಡ
ಹಬ್ಬದ ಆಫರ್ ನೆವದಲ್ಲಿ ಅಗತ್ಯ ಇದೆಯೋ ಇಲ್ಲವೋ ರಿಯಾಯಿತಿಗೆ ಮಾರುಹೋಗಿ ಖರೀದಿಸುವ ಮನಸ್ಥಿತಿ ಹಲವರಲ್ಲಿದೆ. ಇದು ಆ ಕ್ಷಣಕ್ಕೆ ಖುಷಿ ಕೊಡಬಹುದು. ಆದರೆ ಹಬ್ಬದ ಖರೀದಿಗೆಂದು ತೆಗೆದಿಟ್ಟ ಬಜೆಟ್ ಇದರಿಂದ ಮೀರಿ ಹೋಗುತ್ತದೆ. ಖರ್ಚು ಮಾಡಿದ ಹಣ ಮತ್ತೆ ಸಂಗ್ರಹಿಸಲು ಒದ್ದಾಡಬೇಕಿರುತ್ತದೆ. ಜೀವನ ನಿರ್ವಹಣೆಯ ಮೇಲೂ ಇದು ಪರಿಣಾಮ ಬೀರಬಹುದು.
5. ಅಗತ್ಯವಿಲ್ಲದೇ ಖರೀದಿಸಿದ ಹತಾಶೆ
ಹೆಚ್ಚಿನವರ ಬದುಕು ಅವರ ಔದ್ಯೋಗಿಕತೆ ಮೇಲೆ ನಿಂತಿದೆ. ಅನಿರೀಕ್ಷಿತ ಕ್ಷಣದಲ್ಲಿ ಕೆಲಸ ಕೈತಪ್ಪಬಹುದು, ಆರೋಗ್ಯ ಸಮಸ್ಯೆಗಳಾಗಿ ಹಣಕ್ಕೆ ಪರದಾಡಬೇಕಾದ ಸ್ಥಿತಿ ಬರಬಹುದು. ಇಂಥಾ ಸನ್ನಿವೇಶಗಳಲ್ಲಿ ದುಂದುವೆಚ್ಚ ಮಾಡಿದ್ದಕ್ಕೆ ಹತಾಶೆ ಆವರಿಸಬಹುದು. ಖುಷಿಗೆಂದು ಖರೀದಿಸಿದ್ದು ನಿರಾಸೆ ಹೆಚ್ಚಿಸುವಂತಾದರೆ ಆ ಖರೀದಿಯೇ ನೋವು ಕೊಡಬಹುದು.
ಒಟ್ಟಿನಲ್ಲಿ ಹಬ್ಬ ಅಥವಾ ಇನ್ನಿತರ ನೆವದಲ್ಲಿ ಕಂಪನಿಗಳು ನೀಡುವ ಆಕರ್ಷಕ ಆಫರ್ಗಳು, ನೋ ಕಾಸ್ಟ್ ಇಎಂಐ ಹಿಂದೆ ಹಲವಾರು ಅಗೋಚರ ನಿಯಮಗಳಿರುತ್ತವೆ. ಯಾವುದಕ್ಕೂ ಖರೀದಿಗೆ ಮೊದಲು ಹತ್ತು ಸಲ ಯೋಚಿಸಿ, ಎರಡು ದಿನ ಕಾದು ಮತ್ತೂ ಅವಶ್ಯಕತೆ ಇದೆ ಅಂತನಿಸಿದರೆ ಖರೀದಿಗಳಿಯುವುದು ಜಾಣತನ.