ನಗರದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುವ ಮುಖ್ಯ ಬೇಸಿಗೆ ಅವಧಿ ಆರಂಭವಾಗಿದ್ದು, ಸೋಮವಾರ ನಗರದಲ್ಲಿ 35.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಕಳೆದ ವರ್ಷ ಮಾರ್ಚ್ ತಿಂಗಳ ಗರಿಷ್ಠ ಉಷ್ಣಾಂಶದ (35.4) ದಾಖಲೆಯನ್ನು ಮುರಿದಿದೆ.
ಬೆಂಗಳೂರು : ನಗರದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುವ ಮುಖ್ಯ ಬೇಸಿಗೆ ಅವಧಿ ಆರಂಭವಾಗಿದ್ದು, ಸೋಮವಾರ ನಗರದಲ್ಲಿ 35.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಕಳೆದ ವರ್ಷ ಮಾರ್ಚ್ ತಿಂಗಳ ಗರಿಷ್ಠ ಉಷ್ಣಾಂಶದ (35.4) ದಾಖಲೆಯನ್ನು ಮುರಿದಿದೆ.
ಬಿಸಿಲು ಹೆಚ್ಚಳದ ಜೊತೆಗೆ ಆರ್ದ್ರತೆಯು ಹೆಚ್ಚಾಗಿರುವುದರಿಂದ ಹೆಚ್ಚು ಬಿಸಿಯ ಅನುಭವ ಆಗುತ್ತಿದೆ. ಎಚ್ಎಎಲ್ ಏರ್ಪೋರ್ಟ್ನಲ್ಲಿ 36.8 ಡಿಗ್ರಿ ಸೆಲ್ಸಿಯಸ್ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಾಡಿಕೆಗಿಂತ ಎರಡ್ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ. ಮುಂದಿನ 1 ತಿಂಗಳು ಕಾಲ ನಗರದಲ್ಲಿ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ವಾತಾವರಣದಲ್ಲಿ ತೇವಾಂಶವಿದ್ದು, ಉಷ್ಣಾಂಶ ಹೆಚ್ಚಾಗಿದ್ದಾಗ ಆರ್ದ್ರತೆ ಹೆಚ್ಚಾಗುತ್ತದೆ. ಇದರಿಂದ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇದ್ದರೂ 38-40 ಡಿಗ್ರಿ ಸೆಲ್ಸಿಯಸ್ನಂತೆ ಭಾಸವಾಗುತ್ತದೆ. ಬೆಂಗಳೂರಿನಲ್ಲಿ ಕಳೆದ ಒಂದೆರೆಡು ದಿನಗಳಿಂದ ಅಂತಹ ಅನುಭವ ಆಗುತ್ತಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಹೇಳಿದರು.
ಅನಗತ್ಯ ಓಡಾಟ ಬೇಡ:
ಈ ಬೇಸಿಗೆಯಲ್ಲಿ ತಾಪಮಾನ ಸರಾಸರಿಗಿಂತ 3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿರುತ್ತದೆ ಎನ್ನುವ ಮುನ್ಸೂಚನೆ ನೀಡಲಾಗಿತ್ತು. ಅದರಂತೆ ತಾಪಮಾನ ಹೆಚ್ಚಾಗುತ್ತಿದೆ. ನಗರದಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿರುವುದು ಕಂಡು ಬರುತ್ತಿದೆ. ಬಿಸಿಯ ಅನುಭವ ತೀವ್ರವಾಗಿರುವ ಕಾರಣ ಮಧ್ಯಾಹ್ನದ ಅವಧಿಯಲ್ಲಿ ಅನಗತ್ಯ ಓಡಾಟ ಕಡಿಮೆ ಮಾಡಬೇಕು. ಅದರಲ್ಲೂ ವೃದ್ಧರು, ಮಕ್ಕಳು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹೆಚ್ಚು ಎಚ್ಚರದಿಂದ ಇರಬೇಕು ಎಂದು ಶ್ರೀನಿವಾಸ ರೆಡ್ಡಿ ಸಲಹೆ ನೀಡಿದರು.
ತಾಪ ತಗ್ಗಿಸಲು ಈ ಕ್ರಮ ಪಾಲಿಸಿ
ಮಧ್ಯಾಹ್ನದ ವೇಳೆ ಓಡಾಡುವ ಅನಿವಾರ್ಯತೆ ಇದ್ದರೆ ಕೊಡೆ, ಟೋಪಿ, ಕನ್ನಡಕ ಬಳಸಬೇಕು. ನೀರಿನ ಬಾಟಲಿ ಇಟ್ಟುಕೊಂಡು ಆಗಾಗ ನೀರು ಕುಡಿಯುತ್ತಿರಬೇಕು. ತಾಪಮಾನ ಹೆಚ್ಚಿರುವ ಕಾರಣ ವೇಗವಾಗಿ ನಿರ್ಜಲೀಕರಣವಾಗುವ ಕಾರಣ ನೀರು, ಹಣ್ಣು, ಜ್ಯೂಸ್ ಸೇರಿದಂತೆ ಹೆಚ್ಚಿನ ದ್ರವ ಪದಾರ್ಥಗಳನ್ನು ಸೇವಿಸುತ್ತಿರಬೇಕು ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.

