ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ಬಕ್ರೀದ್‌ ಸಂಭ್ರಮ

| Published : Jun 18 2024, 12:50 AM IST / Updated: Jun 18 2024, 07:26 AM IST

ಸಾರಾಂಶ

ಈದ್ಗಾ ಮೈದಾನದಲ್ಲಿ ಸಂಭ್ರದಿಂದ ಮುಸ್ಲಿಂ ಬಂಧುಗಳು ಬಕ್ರೀದ್ ಆಚರಣೆ ಮಾಡಲಾಯಿತು.

 ಚಾಮರಾಜನಗರ : ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಹೊರವಲಯದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಮುಸ್ಲಿಂ ಧರ್ಮಗುರುಗಳು ಬೋಧನೆ ಮಾಡುತ್ತಿದ್ದಂತೆಯೇ, ಮುಸ್ಲಿಂ ಭಾಂದವರು ವಿಶೇಷ ಪ್ರಾರ್ಥನೆ ಮಾಡಿದರು. ಬಡವ - ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ಥಿಸಿ, ಸುಖ, ಶಾಂತಿ, ಸಹಬಾಳ್ವೆ ನೆಮ್ಮದಿಯ ಜೀವನವನ್ನು ಕೋರಿದರು.ಗುರು-ಹಿರಿಯರು, ಮಕ್ಕಳು, ಮುಖಂಡರು ಪ್ರಾರ್ಥನೆ ಮುಗಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯವನ್ನು ವಿನಿಯಮ ಮಾಡಿಕೊಂಡು ಸಂಭ್ರಮಿಸಿದರು.

ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತಮ್ಮ ಶಕ್ತಿಗನುಸಾರವಾಗಿ ದಾನ ಮಾಡುತ್ತಿರುವುದು ಕಂಡು ಬಂದಿತು. ಅದಲ್ಲದೇ ಹಿರಿಯರು ಮಕ್ಕಳ ಕೈಗೂ ಕೂಡ ಹಣಕೊಟ್ಟು ದಾನ ಮಾಡಿಸಿದರು.ಬಲಿ ನೀಡಲಾದ ಪ್ರಾಣಿಯ ಮಾಂಸವನ್ನು ಮೂರು ಪಾಲುಗಳಾಗಿಸಿ, ಒಂದನ್ನು, ಬಲಿ ಕೊಟ್ಟವರ ಕುಟುಂಬದವರಿಗೆ, ಇನ್ನೊಂದನ್ನು ಬಂಧು ಮಿತ್ರರಿಗೆ ಮತ್ತು ಮೂರನೆಯದನ್ನು ಬಡವರಿಗೆ ಹಂಚಿದರು. ಬಡವನ ಮನೆಯ ಒಲೆಯೂ ಉರಿದು ಎಲ್ಲರೂ ಸಮಾನರು ಎಂಬ ತತ್ವ ಸಾರುವುದಕ್ಕೆ ಸಾಂಕೇತಿಕವಾಗಿ ಪ್ರಾಣಿ ಬಲಿ ನೀಡಿ ಆಪ್ತರು, ಬಡ ಬಗ್ಗರಿಗೆ ಹಂಚಿದರು.ಪ್ರವಾದಿ ಇಬ್ರಾಹಿಂ ಬದುಕು ನಮಗೆಲ್ಲರಿಗೂ ಮಾದರಿ. ಎಲ್ಲ ಮನುಷ್ಯರಿಗೂ ಅವರ ಜೀವನದಲ್ಲಿ ಬಹಳಷ್ಟು ಸಂದೇಶಗಳು ಅಡಗಿವೆ. ಅವರ ಅಚಲ ವಿಶ್ವಾಸ, ಸವಾಲು, ಸತ್ವಪರೀಕ್ಷೆ ಎದುರಿಸಿದ ರೀತಿಯನ್ನುಅಲ್ಲಾ ಮೆಚ್ಚಿ, ಅವರಿಗೆ ಖಲೀಲುಲ್ಲಾಹ್ ಎಂಬ ಅತ್ಯುನ್ನತ ಸ್ಥಾನವನ್ನು ನೀಡಿದ್ದಾನೆ ಎಂದು ಗುರುಗಳು ಬೋಧಿಸಿದರು. ಐದು ಸಾವಿರ ವರ್ಷಗಳ ಹಿಂದೆ ಮಾಡಿದ್ದ ತ್ಯಾಗ, ಬಲಿದಾನಗಳ ನೆನಪಿಗಾಗಿ ಈ ಪವಿತ್ರ ಹಬ್ಬಆಚರಿಸಲಾಗುತ್ತಿದೆ ಎಂದರು.

ಬಕ್ರಿದ್ ನಿಮಿತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಸೀದಿಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.