ಸಾರಾಂಶ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ₹18.85 ಕೋಟಿ ಮೌಲ್ಯದ ಒಟ್ಟು 8.27 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿರುವ ಬೆಂಗಳೂರು ನಗರ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ.
ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ₹18.85 ಕೋಟಿ ಮೌಲ್ಯದ ಒಟ್ಟು 8.27 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿರುವ ಬೆಂಗಳೂರು ನಗರ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ.
ಗೋಮಾಳ, ಗುಂಡುತೋಪು, ಸ್ಮಶಾನ, ಕುಂಟೆ, ಸರ್ಕಾರಿ ಮುಫತ್ ಕಾವಲ್, ಸರ್ಕಾರಿ ಕಟ್ಟೆಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ನೇತೃತ್ವದ ತಂಡಗಳಿಂದ ತೆರವು ಕಾರ್ಯಾಚರಣೆ ನಡೆಯಿತು.
ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದಲ್ಲಿ 2 ಕೋಟಿ ರು. ಮೌಲ್ಯದ 1.05 ಎಕರೆ ಸರ್ಕಾರಿ ಮುಫತ್ ಕಾವಲ್, ಕಣಮಿಣಕೆ ಗ್ರಾಮದಲ್ಲಿ ₹2.20 ಕೋಟಿ ಮೌಲ್ಯದ 0.12 ಎಕರೆ ಸರ್ಕಾರಿ ಕಟ್ಟೆ ಹಾಗೂ ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿ ಗ್ರಾಮದಲ್ಲಿ ₹75 ಲಕ್ಷ ಮೌಲ್ಯದ 5 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ.
ಯಲಹಂಕ ತಾಲೂಕಿನ ಅರಕೆರೆ ಗ್ರಾಮದಲ್ಲಿ 10 ಗುಂಟೆ ಸ್ಮಶಾನ, ಮತ್ಕೂರು ಗ್ರಾಮದಲ್ಲಿ 7 ಗುಂಟೆ ಸ್ಮಶಾನ, ಹುತ್ತನಹಳ್ಳಿ ಗ್ರಾಮದಲ್ಲಿ ₹2 ಕೋಟಿ ಮೌಲ್ಯದ 2 ಎಕರೆ ಸರ್ಕಾರಿ ಗೋಮಾಳ, ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದಲ್ಲಿ 21 ಗುಂಟೆ ಸರ್ಕಾರಿ ಗುಂಡುತೋಪು, ಹುಲ್ಲೇಗೌಡೇನಹಳ್ಳಿಯಲ್ಲಿ ₹6 ಕೋಟಿ ಮೌಲ್ಯದ 3 ಎಕರೆ ಸರ್ಕಾರಿ ಗೋಮಾಳ ಒತ್ತುವರಿ ತೆರವು ಮಾಡಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಆದೂರು ಗ್ರಾಮದಲ್ಲಿ ₹2 ಕೋಟಿ ಮೌಲ್ಯದ 1 ಎಕರೆ ಸರ್ಕಾರಿ ಜಮೀನು, ಗುಂಜೂರು ಗ್ರಾಮದಲ್ಲಿ ₹1.20 ಕೋಟಿ ಮೌಲ್ಯದ 4 ಗುಂಟೆ ಸ್ಮಶಾನ ವಶಪಡಿಸಿಕೊಳ್ಳಲಾಗಿದೆ.