ಇಬ್ಬರು ಗೆಳೆಯರಿದ್ದಾರೆ. ಸೋಮು ಮತ್ತು ರಾಮು. ಇಬ್ಬರ ಆದಾಯವೂ ಸಮನಾಗಿತ್ತು. ಇಬ್ಬರೂ ದಿನಕ್ಕೆ ಹನ್ನೆರಡು ಗಂಟೆ ಶ್ರಮಿಸುತ್ತಿದ್ದರು. ಆದರೆ ಯೋಚನಾ ಲಹರಿ ಬೇರೆ ಬೇರೆ. ಸೋಮು ಯಾವಾಗಲೂ ,‘ನನ್ನ ಹಣೆಬರಹವೇ ಇಷ್ಟು, ನನ್ನ ಹತ್ತಿರ ದುಡ್ಡು ನಿಲ್ಲುವುದೇ ಇಲ್ಲ, ನಾನೆಷ್ಟೇ ಸಂಪಾದಿಸಿದರೂ ಬಡವನಾಗಿಯೇ ಇರುತ್ತೇನೆ’ ಎಂದು ಹಳಹಳಿಸುತ್ತಿದ್ದ.
ಇಬ್ಬರು ಗೆಳೆಯರಿದ್ದಾರೆ. ಸೋಮು ಮತ್ತು ರಾಮು. ಇಬ್ಬರ ಆದಾಯವೂ ಸಮನಾಗಿತ್ತು. ಇಬ್ಬರೂ ದಿನಕ್ಕೆ ಹನ್ನೆರಡು ಗಂಟೆ ಶ್ರಮಿಸುತ್ತಿದ್ದರು. ಆದರೆ ಯೋಚನಾ ಲಹರಿ ಬೇರೆ ಬೇರೆ. ಸೋಮು ಯಾವಾಗಲೂ ,‘ನನ್ನ ಹಣೆಬರಹವೇ ಇಷ್ಟು, ನನ್ನ ಹತ್ತಿರ ದುಡ್ಡು ನಿಲ್ಲುವುದೇ ಇಲ್ಲ, ನಾನೆಷ್ಟೇ ಸಂಪಾದಿಸಿದರೂ ಬಡವನಾಗಿಯೇ ಇರುತ್ತೇನೆ’ ಎಂದು ಹಳಹಳಿಸುತ್ತಿದ್ದ. ಇತ್ತ ರಾಮು ಮಾತ್ರ, ‘ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುತ್ತದೆ, ಶೀಘ್ರದಲ್ಲೇ ನಾನು ದೊಡ್ಡ ಉದ್ಯಮಿಯಾಗುತ್ತೇನೆ’ ಎಂದು ಪ್ರತಿದಿನ ತನಗೇ ತಾನು ಹೇಳಿಕೊಳ್ಳುತ್ತಿದ್ದ. ಶ್ರೀಮಂತಿಕೆಯನ್ನು ಮನಸ್ಸಿನಲ್ಲೇ ಕಲ್ಪಿಸಿಕೊಳ್ಳುತ್ತಿದ್ದ.
ಕಾಲ ಉರುಳಿತು. ಐದು ವರ್ಷಗಳ ನಂತರ ಸೋಮು ಇಂದಿಗೂ ಅದೇ ಹಳಹಳಿಕೆಯಲ್ಲಿದ್ದಾನೆ. ರಾಮು ಮಾತ್ರ ತನ್ನ ಧನಾತ್ಮಕ ಚಿಂತನೆ ಮತ್ತು ಕಠಿಣ ಶ್ರಮದಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾನೆ!
ಇದನ್ನೇ ಮನಿ ಮ್ಯಾನಿಫೆಸ್ಟೇಷನ್ ಎನ್ನಲಾಗುತ್ತದೆ. ನಮ್ಮ ಆಲೋಚನೆಗಳು ಮತ್ತು ನಂಬಿಕೆಗಳ ಮೂಲಕ ಸಂಪತ್ತನ್ನು ಸೆಳೆಯುವ ಕಲೆ. ಲಕ್ಷ್ಮಿ ಕೇವಲ ಶ್ರಮಕ್ಕೆ ಮಾತ್ರವಲ್ಲ, ಧನಾತ್ಮಕ ಮನೋಭಾವಕ್ಕೂ ಒಲಿಯುತ್ತಾಳೆ.
1. ಹಣದ ಬಗೆಗಿನ ಮೈಂಡ್ಸೆಟ್ ಬದಲಾಯಿಸಿ
ನಮ್ಮಲ್ಲಿ ಹೆಚ್ಚಿನವರು ‘ದುಡ್ಡು ಎಲ್ಲಾ ಅನರ್ಥಗಳಿಗೂ ಮೂಲ’, ‘ನಮ್ಮ ಕೈಯಲ್ಲಿ ಅಷ್ಟೊಂದು ಹಣ ಗಳಿಸಲು ಸಾಧ್ಯವಿಲ್ಲ’ ಎಂಬ ನಕಾರಾತ್ಮಕ ಯೋಚನೆಗಳಲ್ಲೇ ಮುಳುಗಿರುತ್ತಾರೆ. ಹಾಗೆ ಯೋಚಿಸಿದಾಗ ಹಣ ನಿಮ್ಮಿಂದ ದೂರ ಸರಿಯುತ್ತದೆ. ಅದಕ್ಕೆ ಬದಲು, ‘ನಾನು ಶ್ರೀಮಂತನಾಗಲು ಅರ್ಹ ಮತ್ತು ಪ್ರಾಮಾಣಿಕವಾಗಿ ಹಣ ಗಳಿಸಸುತ್ತೇವೆ’ ಎಂಬ ಸಕಾರಾತ್ಮಕ ಭಾವನೆ ಇಟ್ಟುಕೊಳ್ಳಿ.
2. ಕೃತಜ್ಞತಾ ಭಾವ ರೂಢಿಸಿಕೊಳ್ಳಿ
ನಿಮ್ಮ ಬಳಿ ಪ್ರಸ್ತುತ ಎಷ್ಟು ಹಣವಿದೆಯೋ, ಅದಕ್ಕೆ ಮೊದಲು ಮನಸ್ಸಿನಲ್ಲೇ ಕೃತಜ್ಞತೆ ಸಲ್ಲಿಸಿ. ಇವತ್ತಿನ ನನ್ನ ಅಗತ್ಯಗಳನ್ನು ಪೂರೈಸಲು ನನ್ನ ಬಳಿ ಹಣವಿದೆ, ಅದಕ್ಕೆ ಧನ್ಯವಾದಗಳು ಎಂದು ಭಾವಿಸಿ. ನಿಮ್ಮಲ್ಲಿರುವ ಸಂಪತ್ತಿಗೆ ನೀವು ಗೌರವ ಕೊಟ್ಟಾಗ, ಪ್ರಕೃತಿಯು ನಿಮಗೆ ಮತ್ತಷ್ಟು ಹೆಚ್ಚಿನ ಸಂಪತ್ತನ್ನು ಕರುಣಿಸುತ್ತದೆ ಎಂಬುದು ಈ ನಿಯಮದ ಮೂಲ.
3. ಸ್ಪಷ್ಟವಾದ ಆರ್ಥಿಕ ಗುರಿ ಇರಲಿ
ನನಗೆ ತುಂಬಾ ದುಡ್ಡು ಬೇಕು ಎಂದು ಬೇಡುವುದರಿಂದ ಹಣ ಬರುವುದಿಲ್ಲ. ನಿಮಗೆ ಎಷ್ಟು ಹಣ ಬೇಕು? ಅದನ್ನು ಯಾವ ಅವಧಿಯೊಳಗೆ ಗಳಿಸಬೇಕು? ಮತ್ತು ಅದಕ್ಕಾಗಿ ನೀವು ಯಾವ ರೀತಿಯ ಶ್ರಮಿಸಲು ಸಿದ್ಧರಿದ್ದೀರಿ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ನಿಮ್ಮ ಆರ್ಥಿಕ ಗುರಿಯನ್ನು ಒಂದು ಕಾಗದದ ಮೇಲೆ ಬರೆದಿಟ್ಟುಕೊಳ್ಳಿ. ಆ ಸ್ಪಷ್ಟತೆ ಇರಲಿ.
4. ವಿಶುವಲೈಸೇಷನ್ ತಂತ್ರ
ದಿನಕ್ಕೆ ಐದು ನಿಮಿಷ ಕಣ್ಣು ಮುಚ್ಚಿ, ನಿಮ್ಮ ಆರ್ಥಿಕ ಗುರಿಗಳು ಈಗಾಗಲೇ ಈಡೇರಿವೆ ಎಂದು ಕಲ್ಪಿಸಿಕೊಳ್ಳಿ. ಬ್ಯಾಂಕ್ ಖಾತೆಯಲ್ಲಿ ಅಂದುಕೊಂಡಷ್ಟು ಹಣ ಜಮೆಯಾಗಿದೆ, ಅಂದುಕೊಂಡ ಮನೆಯನ್ನು ಖರೀದಿಸಿದ್ದೀರಿ, ಸಾಲಗಳೆಲ್ಲ ತೀರಿ ನಿರಾಳವಾಗಿದ್ದೀರಿ ಎಂದು ಮನಸ್ಸಿನಲ್ಲೇ ಆ ದೃಶ್ಯವನ್ನು ಕಂಡು ಆನಂದಿಸಿ. ಈ ವಿಶುವಲೈಸೇಶನ್ ಪ್ರಕ್ರಿಯೆ ನಿಮ್ಮ ಸುಪ್ತ ಮನಸ್ಸನ್ನು ಜಾಗೃತಗೊಳಿಸಿ, ಆ ಗುರಿ ತಲುಪಲು ಬೇಕಾದ ಹೊಸ ಆಲೋಚನೆ ಮತ್ತು ದಾರಿಗಳನ್ನು ನಿಮಗೆ ತೋರಿಸಿಕೊಡುತ್ತದೆ.
5. ಕಾರ್ಯಪ್ರವೃತ್ತರಾಗಿ
ಮ್ಯಾನಿಫೆಸ್ಟೇಷನ್ ಎಂದರೆ ಕೇವಲ ಮನೆಯಲ್ಲಿ ಕುಳಿತು ಹಗಲುಗನಸು ಕಾಣುವುದಲ್ಲ. ಧನಾತ್ಮಕ ಯೋಚನೆಗಳು ನಿಮ್ಮ ಮನಸ್ಸಿಗೆ ಆತ್ಮವಿಶ್ವಾಸ ನೀಡಿದರೆ, ಅದಕ್ಕೆ ತಕ್ಕಂತೆ ನೀವು ಕೆಲಸ ಮಾಡಬೇಕಾಗುತ್ತದೆ. ಹೊಸ ಆದಾಯದ ಮೂಲಗಳನ್ನು ಹುಡುಕುವುದು, ಕೌಶಲ್ಯ ವೃದ್ಧಿಸಿಕೊಳ್ಳುವುದು ಮತ್ತು ಅವಕಾಶಗಳನ್ನು ಆರ್ಥಿಕ ಪ್ರಗತಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಶಿಸ್ತಿನಿಂದ ಹೆಜ್ಜೆ ಇಡಬೇಕು.
