ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಬ್ಗಯಾರ್ ಶಾಲೆಯಲ್ಲಿ ತಡವಾಗಿ ಶುಲ್ಕದ ಕಂತು ಪಾವತಿಸಲು ಮುಂದಾದ ಕೆಲ ಮಕ್ಕಳ ಪೋಷಕರಿಂದ ಶೇಕಡ 3ರಷ್ಟು ಬಡ್ಡಿ ವಸೂಲಿಗೆ ಇಳಿದಿರುವ ಆರೋಪ ಕೇಳಿಬಂದಿದೆ.ಶಾಲೆಯ ಕ್ರಮವನ್ನು ಖಂಡಿಸಿ ವಿವಿಧ ಪೋಷಕರು ಕೆಲ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸೇರಿ ಮಂಗಳವಾರ ಶಾಲೆಯ ಮುಂದೆ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಷಕರ ಮನವೊಲಿಕೆಗೆ ಯತ್ನಿಸಿದ ಶಾಲಾ ಸಿಬ್ಬಂದಿ ಒಳಗೆ ಕೂತು ಶುಲ್ಕ ಸಮಸ್ಯೆ ಒರಿಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು.
ಆದರೆ, ಇದಕ್ಕೆ ಒಪ್ಪದ ಪೋಷಕರು ಶಾಲಾ ಶುಲ್ಕಕ್ಕೆ ಬಡ್ಡಿ ವಿಧಿಸುವ ನಿಯಮ ಯಾವ ಕಾನೂನಲ್ಲಿದೆ ತೋರಿಸಿ. ನಿನ್ನೆ ಶುಲ್ಕ ಪಾವತಿಸಲು ಬಂದಾಗ ಬಡ್ಡಿ ಪಾವತಿಸಲೇಬೇಕೆಂದು ಹೇಳಿದಿರಿ. ಈಗ ಸಂದಾಯಕ್ಕೆ ಕರೆಯುತ್ತೀರಾ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೋಷಕರು, ನಾವು ಐದು ಕಂತುಗಳಲ್ಲಿ ಶುಲ್ಕ ಪಾವತಿಸಬೇಕು. ಇದರಲ್ಲಿ ಮೊದಲ ಎರಡು ಕಂತುಗಳನ್ನು ಶಾಲೆ ಆರಂಭಕ್ಕೆ ಮೊದಲೇ ಅಂದರೆ ಮಾರ್ಚ್ನಲ್ಲೇ ಪಡೆದುಕೊಂಡಿರುತ್ತಾರೆ. ನಂತರ ಹಂತ ಹಂತವಾಗಿ ಜನವರಿ ವೇಳೆಗೆ ಉಳಿದ ಮೂರು ಕಂತುಗಳನ್ನು ಪಾವತಿಸಬೇಕು. ಇದು ತಡವಾಗಿದ್ದಕ್ಕೆ ತಿಂಗಳಿಗೆ ಶೇ.3ರಂತೆ ಬಡ್ಡಿ ವಿಧಿಸಿದ್ದಾರೆ ಎಂದು ದೂರಿದರು.
ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಕೆಲ ವಿದ್ಯಾರ್ಥಿಗಳ ಪೋಷಕರ ಪರವಾಗಿ ಮಾತನಾಡಿದ ಲೋಕೇಶ್ ಎನ್ನುವವರು, ನಾವು ಒಬ್ಬೊಬ್ಬರೂ ವಾರ್ಷಿಕ ಪ್ರತಿ ಮಗುವಿಗೆ ₹1.25 ಲಕ್ಷ ಶುಲ್ಕ ಪಾವತಿಸಬೇಕಿತ್ತು.(ವ್ಯಾನ್ ಶುಲ್ಕ ಹೊರತುಪಡಿಸಿ) ಇದರಲ್ಲಿ ₹50 ಸಾವಿರ ಕಳೆದ ಮಾರ್ಚ್ನಲ್ಲೇ ಪಾವತಿಸಿದ್ದೆವು. ಉಳಿದ ಮೂರು ಕಂತುಗಳಲ್ಲಿ ₹75 ಸಾವಿರಗಳನ್ನು ಪಾವತಿಸಬೇಕಿತ್ತು. ಅದನ್ನು ಈಗ ಒಟ್ಟಿಗೆ ಪಾವತಿಸಿದ್ದೇನೆ. ಆದರೆ, ಇದಕ್ಕೆ ಒಪ್ಪದ ಆಡಳಿತ ಮಂಡಳಿ ತಿಂಗಳಿಗೆ ಶೇ.3ರ ಬಡ್ಡಿಯಂತೆ ಸುಮಾರು ₹10 ಸಾವಿರ ಬಡ್ಡಿ ಮೊತ್ತವನ್ನೇ ಸೇರಿಸಿ ಶುಲ್ಕ ಪಾವತಿಸಲು ಕೇಳುತ್ತಿದೆ. ಇದು ಅನ್ಯಾಯ. ಈ ರೀತಿ ಬಡ್ಡಿ ವಿಧಿಸಲು ಕಾನೂನಲ್ಲಿ ಅವಕಾಶವಿದೆಯಾ ಎಂದು ಕೇಳಿದ್ದಕ್ಕೆ ಶಾಲೆಯವರು ಇದೆ ಎಂದು ಇ-ಮೇಲ್ ಮೂಲಕ ಉತ್ತರಿಸಿದ್ದಾರೆ. ಈ ಸಂಬಂಧ ಸರ್ಕಾರ ಪರಿಶೀಲಿಸಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.ಈ ಮಧ್ಯೆ, ಶಾಲೆಯ ಸಿಬ್ಬಂದಿ ಮಾಧ್ಯಮಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿ ನಾವು ಪೋಷಕರೊಂದಿಗೆ ಚರ್ಚಿಸಿ ಶುಲ್ಕ ಸಮಸ್ಯೆ ಪರಿಹರಿಸುವುದಾಗಿಯಷ್ಟೇ ಹೇಳಿಕೆ ನೀಡಿದರು.
ತಡವಾಗಿ ಶುಲ್ಕ ಪಾವತಿಸುವ ಪೋಷಕರಿಂದ ಬಡ್ಡಿ ವಸೂಲಿ ಮಾಡುವ ಅಕ್ರಮ ಯಾವುದೋ ಒಂದು ಶಾಲೆಯಲ್ಲ ಬಹಳಷ್ಟು ಖಾಸಗಿ ಶಾಲೆಗಳಲ್ಲಿದೆ. ದೊಡ್ಡ ದೊಡ್ಡ ಶಾಲೆಗಳು ಶಿಕ್ಷಣವನ್ನು ಉದ್ಯಮವನ್ನಾಗಿಸಿಕೊಂಡಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.। ಬಿ.ಎನ್.ಯೋಗಾನಂದ, ಖಾಸಗಿ ಶಾಲಾ ಪೋಷಕರ ಸಂಘದ ಸಂಚಾಲಕ.