ಹೊಸ ದಿಗಂತದ ಕಡೆಗೆ : ನವ್ಯದ ಭರಾಟೆಯ ದಿನಗಳಲ್ಲಿ ತೇಜಸ್ವಿ ಈ ಬರಹ ಅತ್ಯಂತ ಪ್ರಸ್ತುತ

| Published : Dec 08 2024, 01:17 AM IST / Updated: Dec 08 2024, 06:05 AM IST

ncert books

ಸಾರಾಂಶ

ಬರಹಗಾರ ಆತ್ಮಾವಲೋಕನ ಮಾಡಿಕೊಳ್ಳಬೇಡವೇ? ನವ್ಯದ ಭರಾಟೆಯ ದಿನಗಳಲ್ಲಿ ತೇಜಸ್ವಿ ಬರೆದಿರುವ ಈ ಬರಹ ಸಾಹಿತ್ಯ ಸಮ್ಮೇಳನ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಅತ್ಯಂತ ಪ್ರಸ್ತುತ. ಹೊಸ ಬರಹಗಾರರು ಓದಲೇಬೇಕಾದ ಬರಹ ಇದು.

-ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ

- ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ.ನನ್ನ ಜೀವನ ವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿ ಹಾಕಿದ್ದು ಲೋಹಿಯಾರವರ ತತ್ವ ಚಿಂತನೆ.

 ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯಾ ಒಬ್ಬರೇ ಒರಿಜಿನಲ್ ಎನ್ನಿಸುವ ತತ್ವ ಮೀಮಾಂಸಕರು. ಲೋಹಿಯಾರವರ ಆಲೋಚನೆಗಳನ್ನು ವಿಶ್ವವಿದ್ಯಾಲಯದ ಒಳಕ್ಕೆ ಅವರ ಜೀವಿತ ಕಾಲದಲ್ಲಿ ಬರದಂತೆ ನೋಡಿಕೊಂಡ ನಮ್ಮ ಬುದ್ದಿಜೀವಿಗಳ ಸಮೂಹವು ಒಂದು ನೀಚರ ವ್ಯೂಹ. ನಮ್ಮ ಭಾರತದಲ್ಲಿ ಬೇರೂರಿರುವ ಗುಲಾಮ ಶಾಹಿಯ ಸ್ವರೂಪವನ್ನು ಇದು ಶ್ರುತಪಡಿಸುತ್ತದೆ. 

ಲೋಹಿಯಾರವರ ಆಲೋಚನೆಗೆ ಪ್ರತಿಸ್ಪಂದಿಸದ ಚೇತನ ಭಾರತದ ಯಾವುದಕ್ಕೂ ಸ್ಪಂದಿಸಲಾರದು. ಅಂತೆಯೇ ಹೊಸ ಸಾಹಿತ್ಯಕ್ಕೂ ಕೂಡ.ಕನ್ನಡದ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸ ದಿಕ್ಕಿನಲ್ಲಿ ನಾವೀಗ ಅನ್ವೇಷಿಸಬೇಕಾಗಿದೆ. ಇದಕ್ಕೆ ಕಾರಣ ಹೊಸ ಸಾಹಿತ್ಯ ಸೃಷ್ಟಿಸಬೇಕೆಂಬ ಹಂಬಲವಲ್ಲ ಅಥವಾ ಹೊಸ ಪಂಥ ಒಂದರ ಸೃಷ್ಟಿಕರ್ತನಾಗಬೇಕೆಂಬುದೂ ಅಲ್ಲ. 

ಕಳೆದ ಹದಿನೈದು ಇಪ್ಪತ್ತು ವರುಷಗಳಲ್ಲಿ ನವ್ಯ ಸಾಹಿತಿಗಳು ಪ್ರಾಮಾಣಿಕತೆಯ ಹೆಸರಿನಲ್ಲಿ ಅಭ್ಯಸಿಸಿದ ಅಪ್ರಮಾಣಿಕತೆ, ವಿಮರ್ಶೆಯ ಹೆಸರಿನಲ್ಲಿ ನಡೆಸಿದ ರಾಜಕೀಯ, ಅನುಭವ ಕ್ಷೇತ್ರವನ್ನೂ ಅಭಿವ್ಯಕ್ತಿ ಸಾಮರ್ಥವನ್ನೂ ವಿಸ್ತರಿಸುವ ಹೆಸರಿನಲ್ಲಿ ಕುಗ್ಗಿ ಸಿದುದು ಇತ್ಯಾದಿಗಳೆಲ್ಲಾ ಈ ಮಾರ್ಗದ ಬರಹಗಾರರಿಗೆ ಹಿಡಿದ ಶನಿಗಳಾಗಿವೆ. ಇವುಗಳನ್ನು ಮುಂದೆ ಸಾಹಿತ್ಯದ ಪರಿಭಾಷೆಯಲ್ಲಿ ಪರ್ಯಾಲೋಚಿಸುತ್ತೇನೆ.ನನ್ನ ಎಂ.ಎ., ವಿದ್ಯಾಭ್ಯಾಸದ ಅನಂತರ ನಾನು ಅನಿರೀಕ್ಷಿತವಾಗಿ ವ್ಯವಸಾಯ ಗಾರನಾಗಿ ಹಳ್ಳಿಗೆ ಬರಬೇಕಾಯ್ತು. ಹೊಸ ದಿಕ್ಕಿನ ಅನ್ವೇಷಣೆ ಆರಂಭಿಸಬೇಕಾಗಿದೆ ಎಂದು ನಾನು ಹೇಳುವುದಕ್ಕೆ ಇವೂ ಹಲವು ಕಾರಣಗಳು: ವಿಶ್ವವಿದ್ಯಾಲಯದ ಪದವೀಧರನಾದ, ಬರಹಗಾರನಾದ ನಾನು ಹಳ್ಳಿಯಲ್ಲಿ ಒಂದು ಅತಿವಿಚಿತ್ರ ಸಂದರ್ಭದಲ್ಲಿ ಸಿಲುಕಿ ಕೊಂಡೆನು.

ನಮ್ಮ ವಿದ್ಯಾಭ್ಯಾಸ ಕ್ರಮ, ವಿದ್ಯಾಭ್ಯಾಸದ ತಿರುಳು ಮತ್ತು ಮಾಧ್ಯಮ ಇವು ಭಾರತೀಯ ಪರಿಸ್ಥಿತಿಯಲ್ಲಿ ಎಂಥ ಅಸಂಬದ್ಧವಾಗಿವೆ ಎಂಬುದು ನನಗೆ ಅರಿವಾಯ್ತು. ಈ ನಿಗೂಢವಾದ ಅಪರಿಚಿತ ಭಾರತದ ಬಗ್ಗೆ ಕಣ್ಣು ತೆರೆಸಿದ್ದು ಲೋಹಿಯಾ. ನಮ್ಮ ನವ್ಯ ಸಾಹಿತ್ಯ ಸಂಪ್ರದಾಯ ಸಾಂಕೇತಿಕ ಮಾರ್ಗ, ಠಕ್ಕಿನ ಪ್ರೌಢವಿಮರ್ಶೆ ಇವೆಲ್ಲಾ ಈ ಅವ್ಯಕ್ತ ಭಾರತದ ಎದುರು ಆಸಂಬದ್ಧವಾಗಿ ಹೋದವು. 

ಆದರೆ ಇದರೊಡನೇ ಲೋಹಿಯಾರವರ ತತ್ವಚಿಂತನೆ ಮತ್ತು ಹಳ್ಳಿಯ ಜೀವನದ ಹೊಸ ಪರಿಸ್ಥಿತಿಗಳು ನನಗೆ ಇನ್ನೊಂದು ಬಗೆಯ ಶ್ರದ್ಧೆಯನ್ನು ಕೊಟ್ಟವು. ಇಟಾಲಿಯನ್, ಫ್ರೆಂಚ್, ಸಾಹಿತ್ಯಗಳಷ್ಟೇ ಒರಿಜಿನಲ್ಲಾದ ಜೀವನಾನುಭವ ತಿಳುವಳಿಕೆಗಳಿಂದ ಅಚ್ಚ ಭಾರತೀಯ ಸಾಹಿತ್ಯ ಸೃಷ್ಟಿ, ಸಾಧ್ಯ ಎಂದು. 

ನನ್ನ ಜೀವನ ಮತ್ತು ಅದರ ಅಂಗವಾದ ಸಾಹಿತ್ಯ ಸೃಷ್ಟಿ ಇವು ಇಂದಿನ ಭಾರತೀಯ ಸಂದರ್ಭದ ನಮ್ಮ ವ್ಯಕ್ತಿತ್ವದ ಅಸಂಬದ್ಧತೆಯ ವಿರುದ್ಧ ಹೋರಾಡುವ ಮತ್ತು ಹೊಸ ಪರಿಪೂರ್ಣ ನಾಗರೀಕತೆಯೊಂದನ್ನು ನಿರ್ಮಿಸುವ ಹೋರಾಟವಾದರೆ ಮಾತ್ರ ನಾವು ನವ್ಯರಿಂದ ಭಿನ್ನವೆಂದು ಭಾವಿಸಬೇಕು,ಸರಳವಾಗಿ, ನೇರವಾಗಿ ನೋಡುವ ಕೇವಲ ದೃಷ್ಟಿಕೋನ ಮಾತ್ರವಾಗಿ ಸಾಹಿತಿ ಕತೆಗಳಲ್ಲಿ ವ್ಯಕ್ತವಾಗುವ ಹೊಸದೊಂದು ಶಿಸ್ತನ್ನು ಬರವಣಿಗೆಯಲ್ಲಿ ನಾನು ಅಭ್ಯಾಸ ಮಾಡಬೇಕಾಯ್ತು. 

ಇದಕ್ಕೆ ನಮ್ಮ ಗ್ರಾಮಗಳಲ್ಲಿ ಕೇವಲ ವೀಕ್ಷಕನಾಗಿ ಮಾತ್ರವೆ ಇರಬೇಕಾಗಿ ಬಂದ ನನ್ನ ಜೀವನ ಸಂದರ್ಭವೂ ಒಂದು ಕಾರಣ. ಆದ್ದರಿಂದ ಕಲಾವಿದನ ಪ್ರಜ್ಞೆಯೊಳಗೇ ವಿಕಾಸವಾಗುವ ಅಥವಾ ಕಲಾವಿದ ಪ್ರಜ್ಞೆಯೇ ಕೇಂದ್ರವಾಗಿರುವ, ಅಥವಾ ಸಾಹಿತಿಯೇ ನಾಯಕನಾದ, ಆತ್ಮನಿಷ್ಠ ಬರಹಗಾರರಾದ ಯು. ಆರ್. ಅನಂತಮೂರ್ತಿ ಮತ್ತು ''''''''ಗತಿಸ್ಥಿತಿ''''''''ಯ ಗಿರಿ ಒಂದು ಕೊನೆಯಾದರೆ, ಈ ಕಥಾ ಸಂಕಲನದ ನಾನು ಇನ್ನೊಂದು ಕೊನೆ.ನವ್ಯ ಸಾಹಿತ್ಯ ಸಂಪೂರ್ಣ ನಿಸ್ತೇಜಗೊಂಡಿದೆ. 

ಬದಲಾಗುತ್ತಿರುವ ಪರಿಸರದ ಹೊಸ ಜವಾಬ್ದಾರಿಗಳನ್ನು ಅದು ಹೊರಲಾರದುದೇಕೆಂದರೆ ಮೊದಲನೆಯದಾಗಿ ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಶೈಲಿ ತಂತ್ರಗಳು, ಕೇವಲ ಉಪಾಧ್ಯಾಯರೇ ಹೆಚ್ಚಾಗಿರುವ ಅದರ ಸಾಹಿತಿ ವರ್ಗ ಮತ್ತು ಕೇವಲ ಸಾಹಿತ್ಯದ ಮಟ್ಟಿಗೇ ಸೀಮಿತ ಗೊಂಡ ಅದರ ಕ್ರಾಂತಿಕಾರತನ.ಈ ಮೂರೂ ಕಾರಣಗಳನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸ ಬಯಸುತ್ತೇನೆ. ನವ್ಯ ಮಾರ್ಗದ ಸಾಂಕೇತಿಕ ಶೈಲಿ ಮತ್ತು ತಂತ್ರಗಳು ಮೊದಲನೆಯದಾಗಿ ಸಾಹಿತ್ಯದ ಅನೇಕ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಸಾಹಿತಿಗಳಿಗಿರುವ ತಿರಸ್ಕಾರವನ್ನು ತೋರಿಸುತ್ತದೆ. 

ನಮ್ಮ ರಾಷ್ಟ್ರೀಯ ಉತ್ಪಾದನೆಯ ಬಹುಪಾಲನ್ನು ಉಚ್ಚವರ್ಗ ಮತ್ತು ಜಾತಿಗಳೂ, ಮಿಕ್ಕುದನ್ನು ಮಧ್ಯಂತರ ವರ್ಗ ಮತ್ತು ಜಾತಿಗಳೂ ತಿಂದು ಹಾಕುತ್ತಿರುವುದರಿಂದ, ಸಾಕ್ಷರತೆ ನಿರೀಕ್ಷಿತ ಗತಿಯಲ್ಲಿ ವೃದ್ಧಿಸಿಯೇ ಇಲ್ಲ. ಈ ಕಾರಣದಿಂದಲೇ ಭಾರತದ ಗ್ರಾಮಗಳಲ್ಲಿ ಕೇವಲ ಹೆಬ್ಬೆಟ್ಟೊತ್ತುವ ಪಶು ಸದೃಶ ಶೂದ್ರ ಸಮುದಾಯ ಒಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ಸಾಹಿತ್ಯಾಭಿರುಚಿಯನ್ನು ಮೇಲುಜಾತಿ ಮತ್ತು ವರ್ಗದವರ ಸೊತ್ತಾಗಿಯೇ ಉಳಿಸುವ ಯತ್ನ ನಮ್ಮ ವಿದ್ಯಾಭ್ಯಾಸದ ಯೋಜನೆಗಳು ಮತ್ತು ವಿದ್ಯಾಭ್ಯಾಸ ಕ್ರಮ. 

ಭಾಷೆಯು ಹೇಗೆ ಕೇವಲ ಉಳ್ಳವರ ಸೊತ್ತು ಮಾತ್ರವೇ ಆಗತೊಡಗಿದೆಯೆಂದರೆ ಈಗ ಭಾಷೆಯಲ್ಲಿ ಆಲೋಚನೆ ಮತ್ತು ಅನುಭವಗಳ ಅಭಿವ್ಯಕ್ತಿ ಬಯಸುವುದೇ ಮೋಸಗಾರಿಕೆಯಾಗುವ ಹೊತ್ತು ಬರುತ್ತಿದೆ. ಅಂಥದರಲ್ಲಿ ಸಾಹಿತ್ಯದಲ್ಲೂ ನಾವು ಯಾಂತ್ರಿಕ ಸಾಂಕೇತಿಕತೆಯೊಂದನ್ನು ಸಂಪ್ರದಾಯ ಮಾಡಿಕೊಂಡು ಸಹೃದಯ ಸ್ತೋಮವನ್ನು ಸೀಮಿತಗೊಳಿಸಿಕೊಳ್ಳುವುದೇ ಸಾಹಿತ್ಯ ರಚನೆಯ ಉದ್ದೇಶಗಳಲ್ಲಿ ಒಂದನ್ನಾಗಿ ಮಾಡಿಕೊಂಡರೆ ಅದು ರೋಗಗ್ರಸ್ತ ನಾಗರಿಕತೆಯ ಪರಕಾಷ್ಠೆ ಎಂದಷ್ಟೇ ಹೇಳಬಹುದು.

ಎರಡನೆಯದು ಉಪಾಧ್ಯಾಯರಿಂದಲೇ ಆಗುವ ಸಾಹಿತ್ಯಸೃಷ್ಟಿ, ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗಿಯೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದಾಗುತ್ತದೆ. ಇದು ಉಪಾಧ್ಯಾಯರ ಮೇಲಿನ ತಿರಸ್ಕಾರವೇ ಆಗಲಿ, ಅವಹೇಳನವಾಗಲೀ ಅಲ್ಲ. 

ಭಾರತೀಯ ಸಂದರ್ಭದಲ್ಲಿ ಒಬ್ಬನ ವೃತ್ತಿಯು ಕನ್ನಡ ಜಾನಪದದ ಒಟ್ಟು ಅನುಭವದ ವಿಸ್ತೀರ್ಣದಲ್ಲಿ ಎಷ್ಟನ್ನು ಒಳಗೊಂಡಿರಬಲ್ಲುದೆಂಬ ಪ್ರಶ್ನೆ, ಭಾಷೆಯ ಉಪಯೋಗದಲ್ಲಿನ ಏಕತಾನತೆ, ಅನುಭವ, ಶೈಲಿ ಮುಂತಾದವುಗಳ ಪುನರಾವರ್ತನೆ, ಪಾಶ್ಚಿಮಾತ್ಯ ಕೃತಿಗಳ ಎರವಲು ಪಡೆದ ರಚನೆ, ಮತ್ತು ಪ್ರಕಾಶಕ ವಿಮರ್ಶಕ ಮತ್ತು ಬರಹಗಾರರೊಡಗೂಡಿದ ವಂಚಕ ಜಾಲಗಳು ; ಇವಕ್ಕೆಲ್ಲಾ ಈ ಮೂರೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವ್ಯಾಪ್ತಿಯೊಳಗಿರುವ ವರ್ಗ, ಬಡ್ತಿ, ನೇಮಕ ಪಠ್ಯಪುಸ್ತಕ ಇತ್ಯಾದಿಗಳ ಕೆಟ್ಟ ರಾಜಕಾರಣದಲ್ಲಿ ಮುಳುಗಿರುವ ಉಪಾಧ್ಯಾಯ ಸಾಹಿತಿಗಳ ಸಮುದಾಯವೇ ಕಾರಣ.

ನಿಜವಾಗಿಯೂ ಸಹಾನುಭೂತಿಗೆ ಬಾಧ್ಯರಾದ ಗೌರವವಾನ್ವಿತ ಉಪಾಧ್ಯಾಯರ ಮೇಲೆ ಟೀಕಿಸುವ ಅಗತ್ಯವಿರಲಿಲ್ಲ. ಆದರೆ ಈ ಜನ ವಿದ್ವತ್ ಗೋಷ್ಠಿಗಳಲ್ಲಿ, ವಿಮರ್ಶೆಯಲ್ಲಿ, ಚರ್ಚೆಯ ಸಮಾವೇಶಗಳಲ್ಲಿ, ಅತಿ ನಾಜೂಕಿನ ವಾತಾವರಣ ಒಂದನ್ನು ಸೃಷ್ಟಿ ಮಾಡಿ, ಕೇವಲ ಆತ್ಮಗೋಚರ ಮಾತ್ರವಾದ ವಿಮರ್ಶೆಯ ಪಾರಿಭಾಷಿಕ ಶಬ್ದ ಸರಣಿಗಳನ್ನು ಸೃಷ್ಟಿಸಿ; ನೇರವಾದ, ಸರಳವಾದ ಅನ್ಯಕ್ಷೇತ್ರದ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದಿಂದ ಸಂಕೋಚಗೊಂಡು ಓಡಿ ಬಿಡುವಂತೆ ಅತಿ ಸುಸಂಸ್ಕೃತಿಯ ಮೆಣಸಿನ ಹೊಗೆ ಹಾಕಿದ್ದಾರೆ.

ಮೂರನೆಯದು ಕೇವಲ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡ ಕ್ರಾಂತಿಕಾರಕತನ. ನವ್ಯ ಕಾವ್ಯದ ಸ್ಫೂರ್ತಿ ಮೂಲಗಳು ಆಂಗ್ಲ ಕಾವ್ಯದಿಂದ ಎರವಲು ತಂದ ಸಿದ್ಧಾಂತಗಳಿಂದ ಮಾತ್ರವೆಂದು ಹೇಳಬೇಕಾಗಿದೆ, ಏಕೆಂದರೆ ಆ ವಿಚಾರ ಸರಣಿ ನಮ್ಮ ಜೀವನದ ಯಾವುದೇ ಇತರ ಕ್ಷೇತ್ರಗಳಿಗೂ ಹಬ್ಬಲು ಸೋತುಹೋಗಿದೆ. ಕನ್ನಡ ಸಾಹಿತ್ಯದ ಎಲ್ಲ ಕ್ರಾಂತಿಗಳೂ ಕೂಡ ಇದೇ ರೀತಿ ಸಾಹಿತ್ಯಕ ಕ್ರಾಂತಿ ಮಾತ್ರವಾಗಿ ಮುಗ್ಗರಿಸಿದುದಕ್ಕೆ ಮೂಲಕಾರಣ ಇವುಗಳ ಮುಂಚೂಣಿಯಲ್ಲಿ ನಿಂತವರು ಬಾಹ್ಮಣರು. ಆದ್ದರಿಂದಲೇ ಹಳೆ ಸಾಹಿತ್ಯಕ್ಕೂ ಹೊಸ ಸಾಹಿತ್ಯಕ್ಕೂ ನಡುವಿನ ಘರ್ಷಣೆ; ಹಳೆ ಸಂಪ್ರದಾಯ, ಆಚಾರ, ಪರಂಪರೆ ಮುಂತಾದವುಗಳೆಲ್ಲದರ ವಿರುದ್ಧವಾದ ಆಂದೋಳನವಾಗಲಿಲ್ಲ, ಆದ್ದರಿಂದಲೇ ಕನ್ನಡ ಸಾಹಿತ್ಯದ ಚಳುವಳಿಯು ತಮಿಳಿನಲ್ಲಿಯಂತೆ ಭಾಷೆ, ಜಾತಿ ಪದ್ದತಿ, ತತ್ವ ಚಿಂತನೆ, ರಾಜಕೀಯ ಆಂದೋಳನ ಮುಂತಾದ ಎಲ್ಲ ಕ್ಷೇತ್ರಗಳವರೆಗೂ ಹಬ್ಬಲಿಲ್ಲ. 

ನವ್ಯ ಕಾವ್ಯರಚನೆಯಲ್ಲಿ ಹಿರಿಯರೂ ಅಗ್ರಗಣ್ಯರೂ ಆದ ಕೆಲವರು ಸಾಹಿತ್ಯದಲ್ಲಿ ಕ್ರಾಂತಿಕಾರಿಗಳಾದರೂ ಜಾತಿಪದ್ಧತಿ, ವರ್ಣಾಶ್ರಮ ಧರ್ಮ ಮುಂತಾದವುಗಳನ್ನು ಪ್ರತಿಪಾದಿಸಿದರು. ಜನಬಳಕೆ ಆಡು ಮಾತಿನಲ್ಲಿ ಕಾವ್ಯ ಬರೆಯಬೇಕೆಂದವರು ಶಿಕ್ಷಣಕ್ರಮವನ್ನು ಮಾತ್ರ ಇಂಗ್ಲಿಷಿನಲ್ಲೇ ಮುಂದುವರಿಸಬೇಕೆಂದರು. ನವ್ಯ ಸಾಹಿತ್ಯದ ಈಚಿನ ಕವನಗಳು ಬಹುಪಾಲು ಧಾರ್ಮಿಕ ಅಥವಾ ರಿಲಿಜಿಯಸ್ ಆಗಿರುವುದೇ ಹೆಚ್ಚು. 

ಉದಾರ ಮತ್ತು ವಿಶಾಲ ಮನೋಭಾವವಿರುವ ಧರ್ಮಗಳಿಗೆ ಸಂಬಂಧಿಸಿದವರು ಧಾರ್ಮಿಕ ಕವಿಗಳೂ, ಶ್ರೇಷ್ಠ ಕವಿಗಳೂ ಆಗಬಹುದೇನೋ ! ಆದರೆ ಭಾರತದಲ್ಲಿ “ರಿಲಿಜಿಯಸ್” ಆಗುವ ಕವಿ ಜನತಾ ದ್ರೋಹಿಯಾಗುತ್ತಾನೇಕೆಂದರೆ ಭಾರತದ ಬಹುಪಾಲು ಧರ್ಮಗಳೆಲ್ಲಾ ಮಾನವೀಯತೆಗೆ ವಿರೋಧಿಗಳಾಗಿವೆ.ಈ ಮೂರು ಕಾರಣಗಳಿಂದ ಈ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ. 

ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಅಲ್ಲದೆ ಇದರ ಸ್ಫೂರ್ತಿ ಮೂಲಗಳು, ಇದರ ಅಭಿವ್ಯಕ್ತಿ ಪರಿಕರಗಳು ಇದರ ಮೌಲ್ಯಗಳು ಎಲ್ಲವನ್ನೂ ತ್ಯಜಿಸಬೇಕಾಗಿದೆ. ಎಂದರೆ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ವಿಕವಾಗಿ, ಸಮಗ್ರವಾಗಿ ಬದಲಾವಣೆಯಾಗುವುದರಿಂದ ಮಾತ್ರವೇ ನಿಜವಾದ ಹೊಸ ಸಾಹಿತ್ಯ ಹೊರಬರುತ್ತದೆ. ಹೊಸ ಉಪಮಾನ, ಹೊಸ ಪದ ಪುಂಜಗಳು, ಅಚ್ಚು ಮಾಡುವ ಕ್ರಮ ಇಷ್ಟು ಮಾತ್ರಗಳಿಂದಲ್ಲ.