ಹೊಗಳುಭಟ್ಟರನ್ನು ಇಟ್ಟುಕೊಂಡಿರುವ ಎಂಬಿಪಾ! ಎರಡೆರಡು ಬಾರಿ ಹೇಳಿದ ಬಸನಗೌಡ ಪಾಟೀಲ್ ಯತ್ನಾಳ

| Published : Dec 30 2024, 12:14 PM IST

MB Patil

ಸಾರಾಂಶ

ಯತ್ನಾಳ ಅವರು, ಹಿಂದೆ ರಾಜರ ಆಸ್ಥಾನದಲ್ಲಿ ಹೊಗಳುಭಟರನ್ನು ಇಟ್ಟುಕೊಂಡಂತೆ, ನೀವು ಸಾಹಿತಿಗಳನ್ನು ಇಟ್ಟಕೊಂಡಿದ್ದೀರಿ ಎಂದು ಎರಡೆರಡು ಬಾರಿ ಹೇಳಿದರು.  

ಯತ್ನಾಳ ಅವರು, ಹಿಂದೆ ರಾಜರ ಆಸ್ಥಾನದಲ್ಲಿ ಹೊಗಳುಭಟರನ್ನು ಇಟ್ಟುಕೊಂಡಂತೆ, ನೀವು ಸಾಹಿತಿಗಳನ್ನು ಇಟ್ಟಕೊಂಡಿದ್ದೀರಿ ಎಂದು ಎರಡೆರಡು ಬಾರಿ ಹೇಳಿದರು. ಯತ್ನಾಳ ಹೀಗೆ ಹೇಳುತ್ತಿದ್ದಂತೆ ಸಚಿವ ಎಂ.ಬಿ.ಪಾಟೀಲ, ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ ಒಳಗೊಂಡು ಅಧಿಕಾರಿಗಳ ಮೊಗದಲ್ಲಿ ಕಿರು ನಗು ಕಾಣಿಸಿಕೊಂಡಿತು.

ಹಿಂದೆ ರಾಜರು ತಮ್ಮ ಆಸ್ಥಾನದಲ್ಲಿ ತಮ್ಮ ಶೂರತನ, ಆಡಳಿತ ಇತ್ಯಾದಿಗಳ ಬಗ್ಗೆ ಹೊಗಳಲು ಹೊಗಳುಭಟರನ್ನು ಇಟ್ಟುಕೊಂಡಿದ್ದರು. ಆದರೆ ಈಗ ರಾಜರ ಆಡಳಿತ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಆದರೂ ಹೊಗಳುಭಟರೂ ಇದ್ದೇ ಇರುತ್ತಾರೆ. ಇದಕ್ಕೆ ನಮ್ಮ ಸಚಿವ ಎಂ.ಬಿ. ಪಾಟೀಲರೂ ಹೊರತಾಗಿಲ್ಲ. ಸಾಹಿತಿಗಳನ್ನೇ ಹೊಗಳುಭಟರನ್ನಾಗಿ ಇಟ್ಟುಕೊಂಡಿದ್ದಾರೆ.

ಹೀಗಂತ ಹೇಳಿದ್ದು ಬೇರೆ ಯಾರೋ ಅಲ್ಲ, ಫೈರ್‌ ಬ್ರ್ಯಾಂಡ್‌ ಬಸನಗೌಡ ಪಾಟೀಲ್‌ ಯತ್ನಾಳ ಸಾಹೇಬ್ರು.

ನಡೆದಿದ್ದು ಇಷ್ಟೇ.. ಕನ್ನಡ ರಾಜ್ಯೋತ್ಸವದ ನಿಮಿತ್ತ ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಕದಂಬರ ಕಾಲದ ಕನ್ನಡದ ಮೊದಲ ಶಿಲಾಶಾಸನವಾದ ಹಲ್ಮಿಡಿ ಶಾಸನ ಸ್ಥಾಪಿಸುವ ಕಾರ್ಯಕ್ರಮ ನಡೆಯಿತು. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗಿಯಾಗಿದ್ದರು.

ಈ ವೇಳೆ ಶಾಸನವನ್ನು ಓದಿ ಅರ್ಥ ಹೇಳಿ ಎಂದು ಎಂ.ಬಿ.ಪಾಟೀಲರು ತಮ್ಮ ಮಾಧ್ಯಮ ಸಲಹೆಗಾರ ಡಾ.ಮಹಾಂತೇಶ ಬಿರಾದಾರ ಹಾಗೂ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರಗೆ ಹೇಳಿದರು. ಸಂಗಮೇಶ ಬಬಲೇಶ್ವರ ಅವರು ಶಾಸನದ ಪಕ್ಕದ ಗೋಡೆಯಲ್ಲಿ ಕನ್ನಡದಲ್ಲಿ ಬರೆದಿದ್ದನ್ನು ಓದಿ ಅರ್ಥ ಹೇಳಿದರು.

ಈ ವೇಳೆ ಏನೋ ಹೇಳಲು ಬಂದ ಸಚಿವ ಎಂ.ಬಿ.ಪಾಟೀಲರು, ಇದರಲ್ಲಿ ಕನ್ನಡ ಭಾಷೆಯ ಮಹತ್ವ ಸಾರುವ ಉದ್ದೇಶವಿದೆ. ಹೆಂಗೆ ನಾವು ಓದಿಸಿದೆವಲ್ಲವಾ? ಸಂಗಮೇಶ ಕಡೆಯಿಂದ ಎಂದರು. ಇದಕ್ಕೆ ತಕ್ಷಣವೇ ನೈಸ್‌ ಆಗಿಯೇ ತಿರುಗೇಟು ನೀಡಿದ ಶಾಸಕ ಯತ್ನಾಳ ಅವರು, ನೀವು ಇಬ್ಬರು, ಮೂವರು ಸಾಹಿತಿಗಳನ್ನೇ ಇಟ್ಟುಕೊಂಡಿದ್ದೀರಲ್ಲಾ, ಮಹಾಂತೇಶ ಬಿರಾದಾರಾ.... ಸಂಗಮೇಶ ಬಬಲೇಶ್ವರಾ... ಎಂದು ಇಬ್ಬರ ಹೆಸರನ್ನು ರಾಗವಾಗಿ ಎಳೆದು ಹೇಳಿದರು.

ಇಷ್ಟಕ್ಕೆ ಸುಮ್ಮನಾಗದ ಯತ್ನಾಳ ಅವರು, ಹಿಂದೆ ರಾಜರ ಆಸ್ಥಾನದಲ್ಲಿ ಹೊಗಳುಭಟರನ್ನು ಇಟ್ಟುಕೊಂಡಂತೆ, ನೀವು ಸಾಹಿತಿಗಳನ್ನು ಇಟ್ಟಕೊಂಡಿದ್ದೀರಿ ಎಂದು ಎರಡೆರಡು ಬಾರಿ ಹೇಳಿದರು. ಯತ್ನಾಳ ಹೀಗೆ ಹೇಳುತ್ತಿದ್ದಂತೆ ಸಚಿವ ಎಂ.ಬಿ.ಪಾಟೀಲ, ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ ಒಳಗೊಂಡು ಅಧಿಕಾರಿಗಳ ಮೊಗದಲ್ಲಿ ಕಿರು ನಗು ಕಾಣಿಸಿಕೊಂಡಿತು.

ಹೆಂಡತಿಯೊಬ್ಬಳು ಸ್ಟೇಜ್‌ ಮೇಲೆ ಹೊಗಳಿದರೆ...

ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ... ಅನ್ನೋದು ನಮ್ಮ ಭಾವಕವಿ ಕೆಎಸ್‌ನ ಅವರ ಜನಪ್ರಿಯ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... ಭಾವಗೀತೆಯ ಸಾಲು.

ಫಾರ್‌ ಎ ಚೇಂಜ್‌, ನಮ್ಮ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ಪತ್ನಿ ಜಯಶ್ರೀ ಅವರು ಗಂಡನ ಒಲುಮೆ, ಬೆಂಬಲ ಅರಿಯದ ಹೆಂಡತಿಗೂ ಜಯವಿಲ್ಲ, ಯಶಸ್ವಿ ಪುರುಷನ ಹಿಂದೆ ಮಹಿಳೆ ಹೇಗಿರ್ತಾಳೋ ಅದೇ ರೀತಿ ಹೆಂಡತಿ ಯಶಸ್ವಿಯಾಗಲು ಗಂಡನ ಸಪೋರ್ಟ್‌ ಬೇಕೇ ಬೇಕು ಅಂತ ಸಾರಿ ಹೇಳಿದ್ದಾರೆ.

ಹೀಗೊಂದು ಸ್ವಾರಸ್ಯಕರ ಚರ್ಚೆಗೆ ಇಲ್ಲಿನ ಸೂರ್ಯನಗರ ಬಡಾವಣೆಯ ಲಲಿತಕಲಾ ಸೇವಾ ಸಂಸ್ಥೆಯ ಜನನಿ ಪುರಸ್ಕಾರ ಸಮಾರಂಭ ವೇದಿಕೆಯಾಯ್ತು.

ಜನನಿ ಪುರಸ್ಕಾರ ಸ್ವೀಕರಿಸಿ ಮಾತಿಗಿಳಿದ ಜಯಶ್ರೀ ಅವರು, ಶಾಸಕ ಪತಿರಾಯರ ಪ್ರೇರಣೆಯೇ ತಮ್ಮ ಬಾಳಿಗೆ ಹೊಸ ಬೆಳಕಾಯ್ತೆಂದರು. ಮಹಾರಾಷ್ಟ್ರ ಮೂಲದ ತಮಗೆ ಕನ್ನಡವೇ ಗೊತ್ತಿರಲಿಲ್ಲ, ಹೆಂಡ್ತಿಗೆ ಮನೆಯಲ್ಲೇ ಕನ್ನಡ ಕಲಿಯಲು ಅನುಕೂಲ ಮಾಡಿಕೊಟ್ಟ ಪತಿಯಿಂದಾಗಿ ತಾವಿಂದು ಕನ್ನಡ ಕಲಿತಿರೋದಾಗಿ ಹೇಳ್ತಾ ಸಭೆಯಲ್ಲಿ ಕನ್ನಡದಲ್ಲೇ ಅರಳು ಹುರಿದಂತೆ ಮಾತನಾಡಿದಾಗ ಸೇರಿದ್ದ ಪ್ರೇಕ್ಷಕರು ಜಯಶ್ರೀ ಜಯಹೋ ಎಂದು ಅವ್ರ ಅಚ್ಚ ಕನ್ನಡಮಯ ಮಾತುಗಳಿಗೆ ಖುಷಿಪಟ್ಟರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಸಕ ಪತಿ ಬಸವರಾಜ ಮತ್ತಿಮಡು ಎಲ್ಲರ ಮುಂದೆ ಪತ್ನಿ ಜಯಶ್ರೀ ಈ ವಿಷಯಗಳನ್ನು ನೇರಾನೇರ ಪ್ರಸ್ತಾಪಿಸಿದಾಗ ಒಳಗೊಳಗೆ ಖುಷಿ ಪಟ್ಟರಾದರೂ ಬಹಿರಂಗವಾಗಿ ತೋರಗೊಡಲಿಲ್ಲ.

ಆದ್ರೆ ಅಲ್ಲಿದ್ದವರೆಲ್ಲರೂ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ..ಅನ್ನುವ ಬದಲು ಹೆಂಡತಿಯೊಬ್ಬಳು ಸ್ಟೇಜ್‌ ಮೇಲೆ ಹೊಗಳಿದರೆ .. ಎಂದು ರಾಗವಾಗಿ ಗುನುಗಿದರೆನ್ನಿ.

-ಶಶಿಕಾಂತ ಮೆಂಡೆಗಾರ

-ಶೇಷಮೂರ್ತಿ ಅವಧಾನಿ