ಸಾರಾಂಶ
ಬೆಂಗಳೂರು : ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಎಂಟಿಸಿಯ ಬೆಂಗಳೂರು-ಈಶ ಫೌಂಡೇಷನ್ ವಿಶೇಷ ಪ್ರವಾಸಿ ಪ್ಯಾಕೇಜ್ನ್ನು ಘಾಟಿ-ಈಶ ಫೌಂಡೇಷನ್ ಪ್ರವಾಸ ಪ್ಯಾಕೇಜನ್ನಾಗಿ ಪರಿವರ್ತಿಸಿ ಕಾರ್ಯಾಚರಣೆಗೊಳಿಸುವುದಕ್ಕೆ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿ ಅವರು ನೂತನ ಸೇವೆಗೆ ಹಸಿರು ನಿಶಾನೆ ತೋರಿದರು. ಘಾಟಿ-ಈಶ ಫೌಂಡೇಷನ್ ಪ್ರವಾಸ ಪ್ಯಾಕೇಜ್ ಜೂ.21ರಿಂದ ಜಾರಿಗೆ ಬರಲಿದ್ದು, ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಕಾರ್ಯಾಚರಣೆಗೊಳ್ಳಲಿದೆ.
ಪ್ರವಾಸಿ ಮಾರ್ಗ:ಘಾಟಿ-ಈಶ ಫೌಂಡೇಷನ್ ಪ್ರವಾಸಿ ಪ್ಯಾಕೇಜ್ ಬೆಳಗ್ಗೆ 9 ಗಂಟೆಗೆ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಆರಂಭವಾಗಲಿದೆ. ಅಲ್ಲಿಂದ ಹೊರಡುವ ಹವಾನಿಯಂತ್ರಿತ ಬಸ್ ನೆಲದಾಂಜನೇಯ ಸ್ವಾಮಿ ದೇವಸ್ಥಾನ, ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಮುದ್ದೇನಹಳ್ಳಿಯ ಜ್ಞಾನತೀರ್ಥ ಲಿಂಗ, ಸ್ಕಂದಗಿರಿಯ ಶ್ರೀ ದಕ್ಷಿಣ ಕಾಶಿ ಪಂಚನದಿ ಕ್ಷೇತ್ರದ ಪಾಪಾಗ್ನಿ ಮಠ, ಕಲ್ಯಾಣಿಗಳನ್ನು ವೀಕ್ಷಿಸಿ ನಂತರ ಈಶ ಫೌಂಡೇಷನ್ಗೆ ತಲುಪಲಿದೆ. ಅದೇ ದಿನ ರಾತ್ರಿ 7 ಗಂಟೆಗೆ ಬಸ್ ವಾಪಾಸು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹಿಂದಿರುಗಲಿದೆ. ಪ್ರವಾಸಿ ಪ್ಯಾಕೇಜ್ನ ಪ್ರಯಾಣ ದರ 600 ರು. ನಿಗದಿ ಮಾಡಲಾಗಿದೆ.
ಎರಡು ಹೆಚ್ಚುವರಿ ಸೇವೆ:
ಘಾಟಿ-ಈಶ ಫೌಂಡೇಷನ್ ಪ್ರವಾಸಿ ಪ್ಯಾಕೇಜ್ ಹೊರತುಪಡಿಸಿ ಬೆಂಗಳೂರಿನಿಂದ ಈಶ ಫೌಂಡೇಷನ್ಗೆ ಎರಡು ಹೆಚ್ಚುವರಿ ಸೇವೆಗಳನ್ನು ಜೂ.21ರಿಂದ ಕಾರ್ಯಾಚರಣೆಗೊಳಿಸುವುದಕ್ಕೂ ಚಾಲನೆ ನೀಡಲಾಗಿದೆ. ಅದರಂತೆ ಈಶ ಫೌಂಡೇಷನ್ 1ಎ ಮಾರ್ಗ ಸಂಖ್ಯೆಯ ಬಸ್ ಬನಶಂಕರಿ ಬಿಎಂಟಿಸಿಯಿಂದ ಹಾಗೂ ಈಶ ಫೌಂಡೇಷನ್ 1ಬಿ ಮಾರ್ಗ ಸಂಖ್ಯೆಯ ಬಸ್ ಸೆಂಟ್ರಲ್ ಸಿಲ್ಕ್ಬೋರ್ಡ್ನಿಂದ ಸೇವೆ ನೀಡಲಿವೆ. ಈ ಎರಡೂ ಬಸ್ಗಳು ಬೆಳಗ್ಗೆ 11 ಗಂಟೆಗೆ ನಿಗದಿತ ಸ್ಥಳದಿಂದ ಹೊರಡಲಿವೆ. ಈ ಎಲ್ಲ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ www.mybmtc.com ಮತ್ತು www.ksrtc.inನ್ನು ಸಂಪರ್ಕಿಸಬಹುದಾಗಿದೆ.
ಘಟಕ ವ್ಯವಸ್ಥಾಪಕರಿಗೆ ಸಚಿವರ ಅಭಿನಂದನೆ:
ಬಿಎಂಟಿಸಿ ಬಸ್ ಕಾರ್ಯಾಚರಣೆಯಲ್ಲಿ ಶೇ. 50ರಷ್ಟು ಪ್ರಯಾಣ ದರವನ್ನು ಯುಪಿಐ ಮೂಲಕ ಸಂದಾಯವಾಗುವಂತೆ ಮಾಡಿದ ಕಾರಣಕ್ಕಾಗಿ 13 ಮಂದಿ ಘಟಕ ವ್ಯವಸ್ಥಾಪಕರಿಗೆ ರಾಮಲಿಂಗಾರೆಡ್ಡಿ ಪ್ರಶಂಸನಾ ಪತ್ರವನ್ನು ನೀಡಿ ಶ್ಲಾಘಿಸಿದರು.