ಸಾರಾಂಶ
ಚಿಕ್ಕಬಳ್ಳಾಪುರ : ವೀಕೆಂಡ್ ಭಾನುವಾರದ ಹಿನ್ನೆಲೆಯಲ್ಲಿ ನಂದಿಗಿರಿಧಾಮ ಮತ್ತು ಈಶಾಗೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಇದರಿಂದ ತಾಲೂಕಿನ ನಂದಿಬೆಟ್ಟ ಮತ್ತು ಈಶಾಗೆ ತೆರಳುವ ರಸ್ತೆಗಳು ಮತ್ತು ಪಾರ್ಕಿಂಗ್ ಜಾಗ ಭರ್ತಿಯಾಗಿ ವಾಹನ ದಟ್ಟಣೆ ಉಂಟಾಯಿತು.
ನಂದಿಬೆಟ್ಟದ ರಸ್ತೆಯಲ್ಲಿ ಎಲ್ಲಿ ನೋಡಿದರೂ ವಾಹನಗಳಿಂದ ತುಂಬಿ ತುಳುಕಿ ಸಂಚಾರ ದಟ್ಟಣೆ ಉಂಟಾಗಿದ್ದು, ಐದಾರು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರವಾಸಿಗರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಂಚಾರದಟ್ಟಣೆ ನಿಯಂತ್ರಿಸಲು ನಂದಿಗಿರಿಧಾಮ ಪೊಲೀಸರು ಹೈರಾಣರಾಗಿದ್ದರು.ಭಾನುವಾರ ರಜೆಯಿದ್ದ ಇಂದು ಬೆಳಗ್ಗೆ ಐದು ಗಂಟೆಗೆ ನಂದಿ ಬೆಟ್ಟಕ್ಕೆ ಬಂದೆವು. ಆದರೆ ಇಲ್ಲಿ ಸಂಚಾರ ದಟ್ಟಣೆ ಕಂಡು ಈಶಾಗೆ ಬಂದಿದ್ದೇವೆ. ಇಲ್ಲಿಯೂ ಸಹಾ ಹೆಚ್ಚಿನ ಜನ ಪ್ರವಾಸಿಗರು ತುಂಬಿದ್ದಾರೆ. ಈಗ ಸಂಜೆ ಮೂಡಿಬಂದ ಲೇಸರ್ ಶೋ ನೋಡಿ ಪುನೀತರಾದೆವು ಎಂದು ಬೆಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕಿ ಅನುಷ್ಕಾ ಮಹದೇವ್ ತಿಳಿಸಿದರು.
ವೀಕೆಂಡ್ ಆಗಿದ್ದರಿಂದ ಆವಲಗುರ್ಕಿಬಳಿಯ ಈಶಾದ 112 ಅಡಿ ಆದಿಯೋಗಿ ಪ್ರತಿಮೆ ವೀಕ್ಷಸಲು ಭಾನುವಾರ ಪ್ರವಾಸಿಗರ ದಂಡೇ ನೆರೆದಿತ್ತು. ಆದರೆ, ಸಾಕಷ್ಟು ಮಂದಿ ಬಂದಿದ್ದರಿಂದ ಸಾಕಷ್ಟು ಮಂದಿ ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾಯಿತು.