ಸಾರಾಂಶ
. ‘ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ’ ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ಈ ವಿಶಿಷ್ಟತೆಯ ಪ್ರತಿಬಿಂಬವಾಗಿವೆ.
-ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವರು
ಪ್ರಕೃತಿಯು ತನ್ನ ಅಪರಿಮಿತ ಜ್ಞಾನದಲ್ಲಿ ಪ್ರತಿ ಮನುಷ್ಯನಿಗೂ ವಿಶಿಷ್ಟವಾದ ಗುರುತು ನೀಡಿದೆ. ನಮ್ಮ ಬೆರಳಚ್ಚುಗಳಿಂದ ಕಣ್ಣುಗುಡ್ಡೆಯವರೆಗೆ, ಗ್ರಹಿಕೆಗಳಿಂದ ಆಲೋಚನೆಗಳವರೆಗೆ, ಪ್ರತಿಭೆಯಿಂದ ಸಾಧನೆಗಳವರೆಗೆ ಪ್ರತಿಯೊಬ್ಬರೂ ವಿಶಿಷ್ಟವಾಗಿದ್ದಾರೆ. ಮಾನವ ಅನನ್ಯತೆಯ ಬಗೆಗಿನ ಈ ಅದ್ಭುತ ಸತ್ಯವು ನಮ್ಮ ಸಮಾಜದ ವಿಶಿಷ್ಟ ಲಕ್ಷಣವಾಗಿದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಈ ಅನನ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರತಿ ಮಗುವಿಗೆ ಕೆಲವು ಸಹಜವಾದ ಪ್ರತಿಭೆಗಳು ಇರುತ್ತವೆ. ಕೆಲವರು ಶೈಕ್ಷಣಿಕ ತೇಜಸ್ಸಿನಿಂದ ಹೊಳೆಯುತ್ತಾರೆ, ಕೆಲವರು ಸೃಜನಶೀಲತೆಯೆಡೆಗೆ ಒಲವು ಹೊಂದಿರುತ್ತಾರೆ ಮತ್ತು ಇನ್ನೂ ಕೆಲವರು ಅಥ್ಲೆಟಿಕ್ನಲ್ಲಿ ಪಾರಮ್ಯ ಮತ್ತು ವೃತ್ತಿಪರ ಕುಶಾಗ್ರಮತಿಯನ್ನು ಹೊಂದಿರುತ್ತಾರೆ. ‘ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ’ ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ಈ ವಿಶಿಷ್ಟತೆಯ ಪ್ರತಿಬಿಂಬವಾಗಿವೆ.
ಮಕ್ಕಳ ಸಹಜ ಪ್ರತಿಭೆಯನ್ನು ಹೊರ ತರುವುದು ಮತ್ತು ಅವರ ಆಯ್ಕೆಯ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸೃಜನಶೀಲವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮ ಶಿಕ್ಷಣಸಂಸ್ಥೆಗಳು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರಾಗಿ ಮಗುವಿನ ವಿಶಿಷ್ಟ ಪ್ರತಿಭೆಯನ್ನು ಪೋಷಿಸುವುದು ನಮ್ಮ ಪಾತ್ರವಾಗಿದೆ. ಮಗು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನುವು ಮಾಡಿಕೊಡಲು ಇದು ಕಾರಣವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಪ್ರತಿಭೆಯನ್ನು ವ್ಯಾಖ್ಯಾನಿಸುವ ಮತ್ತು ಪೋಷಿಸುವ ರೀತಿಯಲ್ಲಿ ಮಾದರಿ ಬದಲಾವಣೆಯನ್ನು ತಂದಿದೆ. ಇದು ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡುವ ನಮ್ಮ ಪ್ರತಿಯೊಂದು ಮಗುವಿನಲ್ಲಿ ಇರುವ ವಿಶಿಷ್ಟತೆಯನ್ನು ವಿವರಿಸುವ ತಾತ್ವಿಕ ಚೌಕಟ್ಟಾಗಿದೆ. ನಮ್ಮ ಪ್ರಧಾನಮಂತ್ರಿಯವರ ದೂರದರ್ಶಿ ನಾಯಕತ್ವದಲ್ಲಿ, ಮಗುವಿನ ಶೈಕ್ಷಣಿಕ ಪ್ರಯಾಣವು ಎಂದಿಗೂ ರೋಮಾಂಚನಕಾರಿ ಮತ್ತು ಸ್ಮರಣೀಯವಾಗಿರುವುದನ್ನು, ಅಧ್ಯಯನದ ಸಮಯದಲ್ಲಿ ಅಥವಾ ಪರೀಕ್ಷೆಯ ಸಮಯದಲ್ಲಿ ಯಾವುದೇ ಒತ್ತಡ ಮತ್ತು ಆತಂಕದಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಶಿಕ್ಷಣದಲ್ಲಿ ಆರೋಗ್ಯಕರ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ. ಈ ವಿಧಾನವು ಮೂಲಭೂತ ಕಲಿಕೆಯಿಂದ ಉನ್ನತ ಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳವರೆಗೆ ನಮ್ಮ ಶೈಕ್ಷಣಿಕ ಸುಧಾರಣೆಗಳಿಗೆ ಕೇಂದ್ರವಾಗಿದೆ.
ಎನ್ಇಪಿಯಿಂದ ನವೀನ ವಿಧಾನ ಆರಂಭ
ಕೆಲವು ವರ್ಷಗಳ ಹಿಂದೆ, ನಮ್ಮ ಪುಟ್ಟಮಕ್ಕಳಿಗೆ ಬಾಲವಾಟಿಕಾ ಅಥವಾ ಆಟಿಕೆ ಆಧಾರಿತ ಕಲಿಕೆಯು ವ್ಯಾಪಕವಾದ ಸಂದೇಹಗಳಿಗೆ ಕಾರಣವಾಗಿತ್ತು. ಇಂದು, ಎನ್ಇಪಿಯಿಂದಾಗಿ ಈ ನವೀನ ವಿಧಾನಗಳು ಆರಂಭಿಕ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಿವೆ, ಕಲಿಕೆಯನ್ನು ಹೊರೆಯ ಜವಾಬ್ದಾರಿಗಿಂತ ಸಂತೋಷದಾಯಕ ಕಾರ್ಯವನ್ನಾಗಿ ಮಾಡುತ್ತಿವೆ. ನಮ್ಮ ಹೊಸ ಶಿಕ್ಷಣ ವ್ಯವಸ್ಥೆಯು ಪ್ರತಿ ಮಗುವೂ ತನ್ನ ಸಹಜ ಪ್ರತಿಭೆಗೆ ಅನುಗುಣವಾಗಿ ಅರಳುವುದನ್ನು ಗುರುತಿಸುತ್ತದೆ. ಅಕಾಡೆಮಿ ಕಂಬ್ಯಾಕ್ ಅಫ್ ಕ್ರೆಡಿಟ್ ಅನ್ನು ಸ್ಥಾಪಿಸುವ ನಮ್ಮ ಕ್ರೆಡಿಟ್ ವರ್ಗಾವಣೆ ನೀತಿಯು ಮತ್ತೊಂದು ವಿನೂತನ ಹೆಜ್ಜೆಯಾಗಿದೆ. ಜೀವನದ ಮಾರ್ಗವು ಯಾವಾಗಲೂ ನೇರವಾಗಿರದೆ ಅಂಕುಡೊಂಕಾಗಿಯೂ ಇರಬಹುದು ಮತ್ತು ಕಲಿಕೆಯು ವಿಭಿನ್ನ ಸಂದರ್ಭಗಳಲ್ಲಿ ಮತ್ತು ವಿಭಿನ್ನ ವೇಗಗಳಲ್ಲಿ ಸಂಭವಿಸಬಹುದು ಎಂದು ಅದು ಗುರುತಿಸುತ್ತದೆ. ಇಷ್ಟದ ಆಸಕ್ತಿಯನ್ನು ಅನುಸರಿಸಲು, ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳಲು ಅಥವಾ ತಮ್ಮ ಕುಟುಂಬಗಳಿಗೆ ನೆರವಾಗಲು ಕಲಿಯುವವರು ಔಪಚಾರಿಕ ಶಿಕ್ಷಣವನ್ನು ಮಧ್ಯದಲ್ಲಿಯೇ ನಿಲ್ಲಿಸಬಹುದು. ಅವರು ಔಪಚಾರಿಕ ಶಿಕ್ಷಣಕ್ಕೆ ಹಿಂದಿರುಗಿದಾಗ, ಅವರ ಅನುಭವಗಳು ಮತ್ತು ಸಾಧನೆಗಳನ್ನು ಮೌಲ್ಯೀಕರಿಸಲಾಗುತ್ತದೆ ಮತ್ತು ಅವುಗಳನ್ನು ಶೈಕ್ಷಣಿಕ ದಾಖಲೆಗಳಲ್ಲಿ ಕ್ರೆಡಿಟ್ ಆಗಿ ಸೇರಿಸಲಾಗುತ್ತದೆ. ಈ ಹೊಂದಾಣಿಕೆಯು ಕಲಿಕೆಯ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ ಎಂಬುದನ್ನು ಒತ್ತಿ ಹೇಳುತ್ತದೆ. ಜನರನ್ನು ಅವರ ಜೀವನದ ಯಾವುದೇ ಹಂತದಲ್ಲಿ ಕಲಿಕೆಯ ಪರಿಸರ ವ್ಯವಸ್ಥೆಗೆ ಮರಳಿ ತರುತ್ತದೆ.
ಪರೀಕ್ಷೆಗಳಲ್ಲಿನ ಯಶಸ್ಸು ಎಂದಿಗೂ ನಮ್ಮ ಯುವ ಜನತೆಯ ಒಟ್ಟಾರೆ ಅಭಿವೃದ್ಧಿಯನ್ನು ಮರೆಮಾಚದ, ಅವರ ಮಾನಸಿಕ ಆರೋಗ್ಯಕ್ಕೆ ಧಕ್ಕೆ ತರದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ಈ ಮಹತ್ವದ ಸವಾಲನ್ನು ಗುರುತಿಸಿ, ನಮ್ಮ ಸರ್ಕಾರವು ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ಜಯಿಸಲು ಸಹಾಯ ಮಾಡಲು ರಾಷ್ಟ್ರೀಯ ಆದ್ಯತೆಯನ್ನು ನೀಡಿದೆ. ಪ್ರಧಾನ ಮಂತ್ರಿಯವರ ಅಭೂತಪೂರ್ವ ‘ಪರೀಕ್ಷಾಪೇ ಚರ್ಚಾ’ ಉಪಕ್ರಮವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಮೌಲ್ಯಮಾಪನ ಮಾಡುವ ವಿಧಾನವನ್ನು ಪರಿವರ್ತಿಸುವ ನಮ್ಮ ಬದ್ಧತೆಯನ್ನು ಪ್ರತಿ ಬಿಂಬಿಸುತ್ತದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಪಾಲಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದವು ಪರೀಕ್ಷೆಯ ಆತಂಕವನ್ನು ರಾಷ್ಟ್ರೀಯ ಸಂವಾದವಾಗಿ ಪರಿವರ್ತಿಸಿದೆ. ಸೂಕ್ಷ್ಮ ಮನಸ್ಸಿನ ಮೇಲೆ ಅನಗತ್ಯ ಒತ್ತಡವನ್ನು ಉಂಟು ಮಾಡುವ ಪರೀಕ್ಷೆಗಳ ಸುತ್ತಲಿನ ಆತಂಕವನ್ನು ಹೋಗಲಾಡಿಸಲು ಪ್ರಧಾನಿಯವರು ಹಲವು ರ್ಷಗಳಿಂದ ಶ್ರಮಿಸುತ್ತಿದ್ದಾರೆ. ಪ್ರಧಾನ ಮಂತ್ರಿಯವರ ಸ್ವಂತ ಜೀವನ ಮತ್ತು ಅನುಭವಗಳಿಂದ ಪಡೆದ ಪ್ರಾಯೋಗಿಕ ಸಲಹೆಗಳು ಪರೀಕ್ಷಾರ್ಥಿಗಳಿಂದ ಹೆಚ್ಚು ಮೆಚ್ಚುಗೆ ಪಡೆದಿವೆ. ತೊಂದರೆ ರಹಿತ ಮತ್ತು ಒತ್ತಡ ರಹಿತ ಪರೀಕ್ಷೆಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಿವೆ. ನಿಜವಾದ ನಾಯಕತ್ವದ ಉದಾಹರಣೆಯಾಗಿ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಮತ್ತು ಪ್ರಗತಿಯತ್ತ ರಾಷ್ಟ್ರದ ಅಚಲ ಪ್ರಗತಿಯನ್ನು ಖಚಿತ ಪಡಿಸಿಕೊಳ್ಳುವ ಭವಿಷ್ಯದ ಪೀಳಿಗೆಯನ್ನು ಬೆಳೆಸುವ ದೂರದೃಷ್ಟಿಯ ನಾಯಕನ ಸಮರ್ಪಣೆಯನ್ನು ನಾವು ನೋಡುತ್ತಿದ್ದೇವೆ. ಪೋಷಕರು ಮತ್ತು ನಾಗರಿಕ ಸಮಾಜವು ಈ ಪರಿವರ್ತನೆಯ ಕೇಂದ್ರವಾಗಿದೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ಮಾನಸಿಕ ಆರೋಗ್ಯ ಮತ್ತು ಬೆಂಬಲ ಕಲಿಕೆಯ ಪರಿಸರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವಲ್ಲಿ ಮಹತ್ವದ್ದಾಗಿದೆ. ಇದು 10ನೇ 12ನೇ ತರಗತಿಗಳಲ್ಲದೇ - ನಮ್ಮ ಸಂಪೂರ್ಣ ಶೈಕ್ಷಣಿಕ ಭೂದೃಶ್ಯದಾದ್ಯಂತ ತರಗತಿ ಕೊಠಡಿಗಳು ಮತ್ತು ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕಾದ ಮತ್ತು ವ್ಯಾಪಿಸಬೇಕಾದ ಉಪಕ್ರಮವಾಗಿದೆ. ಪರೀಕ್ಷೆಗಳ ಒತ್ತಡ ಮತ್ತು ಆತಂಕವನ್ನು ಕಲಿಕೆಯ ಎಲ್ಲಾ ಹಂತಗಳಿಂದ ತೆಗೆದುಹಾಕಬೇಕಾಗಿದೆ.
ರವೀಂದ್ರನಾಥ ಟ್ಯಾಗೋರ್ ಅವರು ‘ಮಗುವನ್ನು ನಿಮ್ಮ ಸ್ವಂತ ಕಲಿಕೆಗೆ ಸೀಮಿತಗೊಳಿಸಬೇಡಿ, ಏಕೆಂದರೆ ಅವನು ಬೇರೆ ಸಮಯದಲ್ಲಿ ಜನಿಸಿದ್ದಾನೆ’ ಎಂದು ಹೇಳಿದ್ದಾರೆ. ಶೈಕ್ಷಣಿಕ ಬದಲಾವಣೆಯ ನಮ್ಮ ವಿಧಾನವು ಈ ಜ್ಞಾನದಿಂದ ಮಾರ್ಗದರ್ಶನ ಪಡೆದಿದೆ. ಶಿಕ್ಷಣದಲ್ಲಿ ಒತ್ತಡವು ಅನಿವಾರ್ಯ ಎಂಬ ಕಲ್ಪನೆಯನ್ನು ನೈಜ ಕಲಿಕೆಯು ಪೋಷಣೆಯ ಪರಿಸರದಲ್ಲಿ ಬೆಳೆಯುತ್ತದೆ ಎಂಬ ತಿಳುವಳಿಕೆಗೆ ಬದಲಾಯಿಸಬೇಕಾಗಿದೆ. ವಿದ್ಯಾರ್ಥಿಗಳಿಗಾಗಿ ಸ್ಥಳ ಗುರುತಿಸಿ ಸಮುದಾಯಗಳು, ಶಿಕ್ಷಕ ಮತ್ತು ಕುಟುಂಬಗಳು ಒಟ್ಟಾಗಿ ವಿದ್ಯಾರ್ಥಿಗಳು ಪ್ರವರ್ಧಮಾನಕ್ಕೆ ಬರುವಂತಹ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡಿದಾಗ, ಯಶಸ್ಸು ಬಂದೇ ಬರುತ್ತದೆ. ತರಗತಿಗಳಿಂದ ಆಟದ ಮೈದಾನಗಳವರೆಗೆ, ವೃತ್ತಿ ಪರ ತರಬೇತಿ ಕೇಂದ್ರಗಳಿಂದ ಸಂಶೋಧನಾ ಪ್ರಯೋಗಾಲಯಗಳವರೆಗೆ, ವೈವಿಧ್ಯಮಯ ಪ್ರತಿಭೆಗಳು ಬೆಳಗುವ ಮತ್ತು ಪ್ರವರ್ಧಮಾನಕ್ಕೆ ಬರುವಂತಹ ಸ್ಥಳಗಳನ್ನು ನಾವು ಸೃಷ್ಟಿಸಬೇಕು. ಸಾಂಪ್ರದಾಯಿಕವಾದ ‘ಒಂದೇ ಅಳತೆ ಎಲ್ಲರಿಗೂ ಸರಿಹೊಂದುತ್ತದೆʼ ಎಂಬ ವಿಧಾನವನ್ನು ವೈಯಕ್ತಿಕ ಸಾಮರ್ಥ್ಯವನ್ನು ಗುರುತಿಸುವ ಮತ್ತು ಪೋಷಿಸುವ ಹೆಚ್ಚು ಸೂಕ್ಷ್ಮವಾದ, ಸ್ಪಂದಿಸುವ ವ್ಯವಸ್ಥೆಗೆ ಬದಲಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ನಾವು ವೇಗವಾಗಿ ವಿಕಸಿತ ಭಾರತದತ್ತ ಸಾಗುತ್ತಿರುವಾಗ, ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಪರಿವರ್ತನೆಯ ಪ್ರಮುಖ ಅಡಿಪಾಯವಾಗಿದೆ. ಪ್ರತಿಯೊಂದು ಕೌಶಲ್ಯವು ಅರ್ಹತೆಯನ್ನು ಹೊಂದಿದೆ, ಪ್ರತಿ ಪ್ರಯಾಣವು ಮೌಲ್ಯವನ್ನು ಹೊಂದಿದೆ ಮತ್ತು ಪ್ರತಿ ಮಗುವಿಗೆ ಶ್ರೇಷ್ಠತೆಯ ಅನನ್ಯ ಮಾರ್ಗವನ್ನು ಡುಕೊಳ್ಳುವ ಹಕ್ಕಿದೆ ಎಂದು ನಾವು ಗುರುತಿಸುತ್ತೇವೆ. ನಾವು ವೈವಿಧ್ಯಮಯ ಪ್ರತಿಭೆಗಳನ್ನು ಪೋಷಿಸಿದಾಗ, ನಾವು ನಮ್ಮ ಸಮಾಜದ ರಚನೆಯನ್ನು ಬಲಪಡಿಸುತ್ತೇವೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ರಾಷ್ಟ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತೇವೆ. ಶಿಕ್ಷಣದ ಪರಿವರ್ತನೆ ಸಾಮೂಹಿಕ ಬದ್ಧತೆ ಇಂದು, ನಾನು ನಮ್ಮ ಮಹಾನ್ ರಾಷ್ಟ್ರದ ಪ್ರತಿಯೊಬ್ಬ ಪೋಷಕರು, ಶಿಕ್ಷಕರು ಮತ್ತು ನಾಗರಿಕರಿಗೆ ಮನವಿ ಮಾಡುತ್ತೇನೆ. ಶಿಕ್ಷಣದ ಪರಿವರ್ತನೆಯು ಕೇವಲ ಸರ್ಕಾರದ ಉಪಕ್ರಮವಲ್ಲ - ಇದು ನಮ್ಮ ಸಾಮೂಹಿಕ ಬದ್ಧತೆ ಮತ್ತು ಹಂಚಿಕೆಯ ದೃಷ್ಟಿಕೋನಗಳನ್ನು ಬೇಡುವ ರಾಷ್ಟ್ರೀಯ ಧ್ಯೇಯವಾಗಿದೆ. ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಹಯೋಗ ಮತ್ತು ಪಾಲುದಾರಿಕೆಯು ನಮ್ಮ ನೀತಿಗಳು ಮತ್ತು ಕಾರ್ಯಗಳನ್ನು ವ್ಯಾಖ್ಯಾನಿಸಿದಾಗ ನಾವು ನಮ್ಮ ಗುರಿಗಳನ್ನು ಸಾಧಿಸುತ್ತೇವೆ.
ನಮ್ಮ ಮಕ್ಕಳು ನಮ್ಮ ಭವಿಷ್ಯ. ಅವರು ತಮ್ಮ ವಿಶಿಷ್ಟ ಪ್ರತಿಭೆಯಿಂದ ಬೆಳಗುತ್ತಾರೆ ಮತ್ತು ದೇಶಕ್ಕೆ ಹೆಮ್ಮೆ ತರುತ್ತಾರೆ. ಉಜ್ವಲ ಭವಿಷ್ಯವು ನಮಗೆ ಕಾಯುತ್ತಿದೆ. ಭಾರತದ ಭವಿಷ್ಯದ ಅನನ್ಯತೆಯು ಪ್ರತಿ ಮಗುವಿನ ಅನನ್ಯತೆಯಲ್ಲಿದೆ ಎಂದು ನಾವು ನಂಬುತ್ತೇವೆ. ನಮ್ಮ ಅಗಾಧ ಪ್ರತಿಭಾವಂತ ವಿದ್ಯಾರ್ಥಿಗಳ ಅನನ್ಯ ಕೊಡುಗೆಗಳನ್ನು ಬಳಸಿಕೊಳ್ಳುವಲ್ಲಿ ಒತ್ತಡ ರಹಿತ ಶಿಕ್ಷಣವು ಪ್ರಮುಖವಾಗಿದೆ. (ಲೇಖಕರ ಅಭಿಪ್ರಾಯಗಳು ವೈಯಕ್ತಿಕವಾದುವು.)