ವಿವೇಕಾನಂದ ಗುಡ್ಡವನ್ನು ಪಾರ್ಕ್‌ ಮಾಡಲು ನಿವಾಸಿಗಳ ಒತ್ತಾಯ

| N/A | Published : Jun 24 2025, 01:47 AM IST / Updated: Jun 24 2025, 04:59 AM IST

ಸಾರಾಂಶ

ಹುಳಿಮಾವು ಪ್ರದೇಶದ ಅಕ್ಷಯ ನಗರದಲ್ಲಿರುವ ‘ವಿವೇಕಾನಂದ ಗುಡ್ಡ’ವನ್ನು ಬಿಬಿಎಂಪಿಯಿಂದ ಉದ್ಯಾನವನ ಅಥವಾ ಅರಣ್ಯ ಇಲಾಖೆಯಿಂದ ಘೋಷಿತ ಅರಣ್ಯವಾಗಿ ಅಭಿವೃದ್ಧಿಪಡಿಸಬೇಕು ಎಂದು ಅಕ್ಷಯ ನಗರ, ಬೇಗೂರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

 ಬೆಂಗಳೂರು :  ಹುಳಿಮಾವು ಪ್ರದೇಶದ ಅಕ್ಷಯ ನಗರದಲ್ಲಿರುವ ‘ವಿವೇಕಾನಂದ ಗುಡ್ಡ’ವನ್ನು ಬಿಬಿಎಂಪಿಯಿಂದ ಉದ್ಯಾನವನ ಅಥವಾ ಅರಣ್ಯ ಇಲಾಖೆಯಿಂದ ಘೋಷಿತ ಅರಣ್ಯವಾಗಿ ಅಭಿವೃದ್ಧಿಪಡಿಸಬೇಕು ಎಂದು ಅಕ್ಷಯ ನಗರ, ಬೇಗೂರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಬಿಬಿಎಂಪಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನೆರವಿನೊಂದಿಗೆ ವಿವೇಕಾನಂದ ಗುಡ್ಡದಲ್ಲಿ ಭಾನುವಾರ ವನ ಮಹೋತ್ಸವ ಆಚರಿಸಿ ಸುಮಾರು 200 ಸಸಿಗಳನ್ನು ನೆಟ್ಟಿರುವ ನಿವಾಸಿಗಳು, ಈ ಸರ್ಕಾರಿ ಜಮೀನನ್ನು ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡಬೇಕು. ಅದಕ್ಕಾಗಿ ಸುತ್ತಲು ಕಾಂಪೌಂಡ್ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ಆಂಜಿನಪ್ಪ, ಈ ಜಾಗವನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸಲು ಅಗತ್ಯ ಸಹಕಾರವನ್ನು ನೀಡುತ್ತೇನೆ. ಸ್ಥಳೀಯರಿಗೆ ಇದೊಂದು ಅತ್ಯುತ್ತಮ ಹಸಿರು ತಾಣವಾಗಲಿದೆ ಎಂದರು.

ಸಂಸದ ಡಾ.ಸಿ.ಎನ್.ಮಂಜುನಾಥ ಮತ್ತು ಶಾಸಕರಾದ ಕೃಷ್ಣಪ್ಪ ಅವರು ಕೂಡ ಸಾರ್ವಜನಿಕ ಹಸಿರು ಪ್ರಯತ್ನಕ್ಕೆ ಶ್ಲಾಘಿಸಿದ್ದು, ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ಡೈರಿಯ ನಿವೃತ್ತ ಅಧಿಕಾರಿ ಡಾ. ಪ್ರಕಾಶ್ ಅವರ ನೇತೃತ್ವದಲ್ಲಿ ಕಳೆದ 12 ವರ್ಷಗಳಿಂದ ಈ ಗುಡ್ಡವನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ಆರಂಭವಾಯಿತು. ಈವರೆಗೆ 50 ಮಾದರಿಯ ಸುಮಾರು 2,000 ಸಸಿಗಳನ್ನು ನೆಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ನೂರಾರು ಜನರು ಇಲ್ಲಿ ವಾಯು ವಿಹಾರ, ವ್ಯಾಯಾಮ ಮಾಡುತ್ತಾರೆ. ಹಸಿರಿನ ನಡುವೆ ಪ್ರಶಾಂತ ಪ್ರದೇಶದಲ್ಲಿ ಕಾಲ ಕಳೆಯಲು ಅತ್ಯುತ್ತಮ ಸಾರ್ವಜನಿಕ ಪ್ರದೇಶವಾಗಿದೆ ಎಂದು ಅಕ್ಷಯ ನಗರ ನಿವಾಸಿ ಶಿವರಾಮ್ ಪಾಟೀಲ್ ಹೇಳಿದರು.

ಸಾಮಾಜಿಕ ಸಂಘಟನೆಯಾಗಿರುವ ವಿವೇಕಾನಂದ ವ್ಯಕ್ತಿತ್ವ ವಿಕಸನ ಕೇಂದ್ರದ ಮುಖಾಂತರ 9 ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಈ ಜಾಗದಲ್ಲಿ ವನ ಮಹೋತ್ಸವ, ಸಸಿ ನೆಡುವುದು ಹಾಗೂ ಹಸಿರು ಉಳಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಕಾಂಪೌಂಡ್ ಇಲ್ಲದ ಕಾರಣ ಕೆಲವು ಕಿಡಿಗೇಡಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ, ಈ ಗುಡ್ಡವನ್ನು ಸಂರಕ್ಷಿಸಬೇಕು ಎಂದು ಕೇಂದ್ರದ ಕಾರ್ಯದರ್ಶಿ ಶಶಿ ಮನವಿ ಮಾಡಿದರು.

Read more Articles on