ಸಾರಾಂಶ
ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಸಚಿನ್ ಕುಳಗೇರಿ
ಎಬಿವಿಪಿ
ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಜುಲೈ 9, 1949ರಲ್ಲಿ ಸ್ಥಾಪನೆಯಾದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನ 76 ವರ್ಷದ ಸುದೀರ್ಘ ದಾರಿಯಲ್ಲಿ ‘ವಿದ್ಯಾರ್ಥಿ ಶಕ್ತಿ - ರಾಷ್ಟ್ರ ಶಕ್ತಿ’ ಎಂಬ ಸಂದೇಶದೊಂದಿಗೆ ಕಾಲೇಜಿನ ಕ್ಯಾಂಪಸ್ನಲ್ಲಿರುವ ಸಾಮಾನ್ಯ ವಿದ್ಯಾರ್ಥಿಯನ್ನು ಈ ದೇಶದ ಶಕ್ತಿಯನ್ನಾಗಿ ಬದಲಾವಣೆ ಮಾಡುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರವನ್ನು ನಿರ್ಮಾಣ ಮಾಡುವ ಕಾರ್ಯವನ್ನು ತನ್ನ ಕಾರ್ಯಕರ್ತರ ಮೂಲಕ ಮಾಡುತ್ತಿದೆ. ಯಾವ ಸಂಘಟನೆಗಳು ಆ ದೇಶದ ಮಣ್ಣಿಗೆ ಪೂರಕವಾಗಿ ಕೆಲಸ ಮಾಡುತ್ತವೆಯೋ ಆ ಸಂಘಟನೆಗಳು ಬಾನೆತ್ತರಕ್ಕೆ ಬೆಳೆಯುತ್ತವೆ ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತ ದೇಶದ ಮಣ್ಣಿಗೆ ಪೂರಕವಾಗಿ ಎಬಿವಿಪಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡ ಸಂಘಟನೆ ಎಬಿವಿಪಿ ಆಗಿದೆ. ಕಾಶ್ಮೀರ ಚಲೋ
ಭಾರತ ದೇಶದ ಕಿರೀಟ ಜಮ್ಮು - ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ ಎಂಬ ಸವಾಲನ್ನು ಭಯೋತ್ಪಾದಕರು ಹಾಕುತ್ತಾರೆ. ಆಗಿನ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಅವರು ಜಮ್ಮು ಕಾಶ್ಮೀರದ ಲಾಲ್ ಚೌಕ ಒಂದು ಭಯೋತ್ಪಾದಕ ಪ್ರದೇಶ, ಅಲ್ಲಿಗೆ ಯಾರೂ ಹೋಗಬಾರದು ಎಂಬ ಹೇಳಿಕೆ ನೀಡುತ್ತಾರೆ. ಆದರೆ ದೇಶದ ಪರ ಚಿಂತನೆ ಮಾಡುವ ಸಂಘಟನೆಯಾದ ಎಬಿವಿಪಿ ಹತ್ತು ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಶ್ಮೀರ ಚಲೋ ಮೂಲಕ ಜಮ್ಮು ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ನೀಡಿತ್ತು.
ಬಾಂಗ್ಲಾ ನುಸುಳುಕೋರರ ಸರ್ವೇ ರಾಷ್ಟ್ರದ ಗಡಿ ರೇಖೆಯನ್ನು ಅತಿಕ್ರಮವಾಗಿ ಪ್ರವೇಶಿಸಿ, ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ, ನಮ್ಮ ನೆಲದ ಸಂಸ್ಕೃತಿ, ಸಂಸ್ಕಾರ ರಾಷ್ಟ್ರೀಯತೆಯ ಭಾವನೆಗಳಿಗೆ ಧಕ್ಕೆಯನ್ನು ಉಂಟುಮಾಡುತ್ತಿದ್ದ, ದೇಶದ ಸಾರ್ವಭೌಮತೆ ಸಮಗ್ರತೆಗೆ ಸವಾಲಾಗಿದ್ದ, ಬಾಂಗ್ಲಾದೇಶದ ಅತಿಕ್ರಮಣ ನುಸುಳುಕೋರರ ಕುರಿತು ಸರ್ವೆಯನ್ನು ಮಾಡಿ ರಾಷ್ಟ್ರದ ಆಡಳಿತ ವರ್ಗಕ್ಕೆ ಮನದಟ್ಟು ಮಾಡಿ, ಅದರ ವಿರುದ್ಧ ದೇಶವ್ಯಾಪಿ ಬೃಹತ್ ಆಂದೋಲನವನ್ನ ಹಮ್ಮಿಕೊಂಡ ಈ ದೇಶದ ಏಕೈಕ ವಿದ್ಯಾರ್ಥಿ ಸಂಘಟನೆ ಅಭಾವಿಪ. ಕೊರೋನಾ ಸಮಯದಲ್ಲಿ ಸೇವೆ
ದೇಶವು ಕೋವಿಡ್ ಬಾಧಿತವಾಗಿ ಜನಜೀವನ ಸ್ಥಗಿತಗೊಂಡು ಸಂಕಷ್ಟದಲ್ಲಿದ್ದಾಗ, ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕೂಲಿ ಕೆಲಸವನ್ನು ಮಾಡಲು ಬಂದ ಕಾರ್ಮಿಕರಿಗೆ ಫುಡ್ ಪ್ಯಾಕೆಟ್ ವಿತರಣೆ, ತಾಲೂಕು ಆಡಳಿತ, ಜಿಲ್ಲಾ ಆಡಳಿತದ ಜೊತೆಗೆ ಹೆಲ್ಪ್ಲೈನ್ಗಳಲ್ಲಿ ಎಬಿವಿಪಿಯ ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದರು. ಆಸ್ಪತ್ರೆಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಲ್ಲದೆ, ಅಗತ್ಯಬಿದ್ದಾಗ ಮೃತರಾದವರ ಅಂತ್ಯ ಸಂಸ್ಕಾರವನ್ನೂ ಮಾಡಿ, ಯಾವ ಫಲಾಪೇಕ್ಷೆಯೂ ಇಲ್ಲದೆ ಎಬಿವಿಪಿ ಕಾರ್ಯಕರ್ತರು ದುಡಿದಿದ್ದರು. ವಿದ್ಯಾರ್ಥಿಗಳಿಗೆ ಸಮಸ್ಯೆ ಆದಾಗ ಯಾವುದೇ ಸರ್ಕಾರವಿರಲಿ, ಆ ಸರ್ಕಾರದ ವಿರುದ್ಧ ದ್ವನಿ ಎತ್ತಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ, ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ, ಹಾಸ್ಟೆಲ್ಗಳ ಸಂಖ್ಯೆ ಹೆಚ್ಚಳ, ಗುಣಮಟ್ಟದ ವಿದ್ಯಾರ್ಥಿಸ್ನೇಹಿ ಕಾಲೇಜು ಕ್ಯಾಂಪಸ್ಗಳ ನಿರ್ಮಾಣಕ್ಕೆ ಒತ್ತು, ವಿದ್ಯಾರ್ಥಿವೇತನ, ಸಿಇಟಿ ಹೋರಾಟ, ಇಂತಹ ಹಲವಾರು ಹೋರಾಟಗಳನ್ನು ಎಬಿವಿಪಿ ಕಟ್ಟಿಕೊಂಡು ಬಂದಿದೆ. ಆಯಾಮ ಗತಿವಿಧಿಗಳ ಕಾರ್ಯ
ಎಬಿವಿಪಿಯು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಕಾರ್ಯ ಮಾಡುತ್ತಿದೆ. ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಖೇಲೋ ಭಾರತ, ಚಿತ್ರಕಲೆ ಹಾಗೂ ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಕಲಾ ಮಂಚ್, ಪರಿಸರ ಮತ್ತು ಸ್ವಚ್ಛತೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್, ಸೇವೆಯನ್ನು ಮಾಡುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಸ್ಟೂಡೆಂಟ್ ಫಾರ್ ಸೇವಾ ಕಾರ್ಯಕ್ರಮಗಳನ್ನು ಹೊಂದಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ನೀಟ್ ತರಬೇತಿ ಶಿಬಿರ, ಮೆಡಿಕಲ್ ವಿದ್ಯಾರ್ಥಿಗಳಿಗೆ ‘ಮೆಡಿವಿಷನ್’, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಸಾವಿಸ್ಕರ’, ಕೃಷಿ ವಿದ್ಯಾರ್ಥಿಗಳಿಗಾಗಿ ‘ಅಗ್ರಿವಿಷನ್’, ಫಾರ್ಮಾ ವಿದ್ಯಾರ್ಥಿಗಳಿಗಾಗಿ ‘ಫಾರ್ಮವಿಷನ್’, ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆಗಾಗಿ ‘ಮಿಷನ್ ಸಾಹಸಿ’, ಐಐಟಿ ವಿದ್ಯಾರ್ಥಿಗಳಿಗಾಗಿ ‘ಥಿಂಕ್ ಇಂಡಿಯಾ’, ಸಂಶೋಧನಾ ವಿದ್ಯಾರ್ಥಿಗಳಿಗಾಗಿ ‘ಶೋಧ’ ಹೆಸರಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.
ವಿದ್ಯಾರ್ಥಿ ಪರಿಷತ್ನಿಂದ ನಾಯಕರಾದವರು ಈ ದೇಶದಲ್ಲಿ ಹಲವಾರು ವ್ಯಕ್ತಿಗಳು ವಿದ್ಯಾರ್ಥಿ ಪರಿಷತ್ನಲ್ಲಿ ಕಾರ್ಯನಿರ್ವಹಿಸಿದ ನಂತರ ನಾನಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನದಲ್ಲಿ ಇದ್ದಾರೆ. ರಾಜನೀತಿ ಕ್ಷೇತ್ರದಲ್ಲಿ ಈಗಿನ ಗೃಹ ಸಚಿವ ಅಮಿತ್ ಶಾ, ಕೇಂದ್ರದ ಮಂತ್ರಿಗಳಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಹಿಂದಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕರ್ನಾಟಕದ ದಿ.ಅನಂತಕುಮಾರ್, ಶೋಭಾ ಕರಂದ್ಲಾಜೆ, ಸದಾನಂದಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಎನ್.ರವಿಕುಮಾರ್, ತೇಜಸ್ವಿ ಸೂರ್ಯ ಹೀಗೆ ಹಲವು ನಾಯಕರು ಎಬಿವಿಪಿಯ ಗರಡಿಯಲ್ಲಿ ಬೆಳೆದವರು.