ವಿದ್ಯುತ್‌ ಸ್ಪರ್ಶದಿಂದ 30 ವರ್ಷದ ಗಂಡಾನೆ ಸಾವು

| Published : Dec 15 2023, 01:30 AM IST

ಸಾರಾಂಶ

ವಿದ್ಯುತ್ ಸ್ಪರ್ಶದಿಂದಾಗಿ ಸುಮಾರು 30 ವರ್ಷದ ಗಂಡಾನೆ ಮೃತಪಟ್ಟಿರುವ ಘಟನೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಆನೆ ಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ವಿದ್ಯುತ್ ಸ್ಪರ್ಶದಿಂದಾಗಿ ಸುಮಾರು 30 ವರ್ಷದ ಗಂಡಾನೆ ಮೃತಪಟ್ಟಿರುವ ಘಟನೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಆನೆ ಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಮುತ್ತೂರು ವ್ಯಾಪ್ತಿಯ ಮರಳುಕಟ್ಟೆ ಎ ಹಾಡಿಯ ನಿವಾಸಿ ಲೇಟ್ ಗೆಜ್ಜೆ ಮೇಸ್ತ್ರಿ ಅವರ ಅನೆಚೌಕೂರು ಫಾರೆಸ್ಟ್ ಸರ್ವೆ ನಂಬರ್ ಎರಡರ ಜಮೀನಿನಲ್ಲಿ ಅಕ್ರಮವಾಗಿ ಮುಳ್ಳು ತಂತಿ ಬೇಲಿಗೆ ಹಾಯಿಸಿದ ವಿದ್ಯುತ್ ಸ್ಪರ್ಶದಿಂದಾಗಿ ಆನೆ ಮೃತಪಟ್ಟಿದೆ ಎನ್ನಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಸಿ. ಚಿಕ್ಕನರಗುಂದ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹುಣಸೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ. ದಯಾನಂದ, ವಲಯಾರಣ್ಯ ಅಧಿಕಾರಿ ಕೆ. ಸುಬ್ರಹ್ಮಣ್ಯ, ಪಶು ವೈದ್ಯಾಧಿಕಾರಿಗಳಾದ ಚಟ್ಟಿಯಪ್ಪ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸಲಾಗಿ ವಿದ್ಯುತ್ ಸ್ಪರ್ಶದಿಂದ ಆನೆಯು ಮೃತಪಟ್ಟಿರೋದು ದೃಢಪಟ್ಟಿದೆ.

ಜಮೀನಿನ ಮಾಲೀಕ ಮಣಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಹಾಯಿಸಿರುವುದರಿಂದ ದೂರು ದಾಖಲು ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಂಡಿದ್ದಾರೆ.