ಸಾಹಿತ್ಯ ಸಮ್ಮೇಳನದಲ್ಲೇ ಮಂಡ್ಯ ಆಸ್ಮಿತೆಗೆ ಧಕ್ಕೆ!!! ಬಾಡೂಟ ಇಲ್ಲ ಎಂದಿದ್ದಕ್ಕೆ ಕೋಳಿಗಳು ಫುಲ್‌ ಖುಷ್‌

| Published : Dec 16 2024, 11:57 AM IST

Mandya

ಸಾರಾಂಶ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರಂಭಕ್ಕೆ ಮುನ್ನವೇ ಚರ್ಚಾಗೋಷ್ಠಿ ಆರಂಭವಾಗಿದೆ. ಬಾಡೂಟ ಕುರಿತ ಬೇಕು? ಬೇಡಗಳೇ ಚರ್ಚೆಯ ಪ್ರಧಾನ ವಿಷಯ ಎಂಬುದು ಈ ಬಾರಿಯ ವಿಶೇಷ.

ಬಾಡೂಟ ಇಲ್ಲ ಎಂದಿದ್ದಕ್ಕೆ ಕೋಳಿಗಳು ಫುಲ್‌ ಖುಷ್‌! ಇತ್ತೀಚೆಗೆ ಸಚಿವರನ್ನು ಪತ್ರಕರ್ತರು ಪ್ರಶ್ನೆ ಕೇಳೋದೇ ಅಪರಾಧ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರಂಭಕ್ಕೆ ಮುನ್ನವೇ ಚರ್ಚಾಗೋಷ್ಠಿ ಆರಂಭವಾಗಿದೆ. ಬಾಡೂಟ ಕುರಿತ ಬೇಕು? ಬೇಡಗಳೇ ಚರ್ಚೆಯ ಪ್ರಧಾನ ವಿಷಯ ಎಂಬುದು ಈ ಬಾರಿಯ ವಿಶೇಷ.

ಮಂಡ್ಯ ಹೇಳಿ-ಕೇಳಿ ಬಾಡೂಟಕ್ಕೆ ಫೇಮಸ್. ಇದೇ ತಿಂಗಳು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ಆರಂಭಗೊಂಡಿದೆ. ಮೂರು ದಿನಗಳ ಊಟದ ಮೆನು ಕೂಡ ಸಿದ್ಧವಾಗಿದೆ. ಆದರೆ, ಮೆನುನಲ್ಲಿ ಬಾಡೂಟದ ಸುಳಿವೇ ಇಲ್ಲ. ಇದರಿಂದ ಬೇಸರಗೊಂಡಿರುವ ಬಾಡೂಟ ಪ್ರಿಯರು ನಮಗೆ ಸಮ್ಮೇಳನದಲ್ಲಿ ಒಂದು ದಿನ ಬಾಡೂಟ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ.

ಸಮ್ಮೇಳನದಲ್ಲಿ ಭೂರಿ ಭೋಜನಕ್ಕಾಗಿ ₹5 ಕೋಟಿಯನ್ನು ಮೀಸಲಿಡಲಾಗಿದೆ. ಕೇವಲ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಊಟಕ್ಕಷ್ಟೇ ಮಾನ್ಯತೆ ನೀಡದೆ ಬಾಡೂಟ ಇರಲೇ ಬೇಕೆಂಬ ಬೇಡಿಕೆಯನ್ನು ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ.

ಸರ್ಕಾರದಿಂದ ಬಾಡೂಟ ಮಾಡಲು ಸಾಧ್ಯವಾಗದಿದ್ದರೆ ಮನೆಗೊಂದು ಕೋಳಿ ಅಭಿಯಾನ ಆರಂಭಿಸುವುದಕ್ಕೂ ನಿರ್ಧರಿಸಿದ್ದಾರೆ. ಮಂಡ್ಯ ನಾಟಿ ಸ್ಟೈಲ್ ಬಾಡೂಟಕ್ಕೆ ಹೆಸರುವಾಸಿ. ಹೊರರಾಜ್ಯಗಳಿಂದ ಬರುವ ಸಾಹಿತ್ಯಾಭಿಮಾನಿಗಳಿಗೆ ಮಂಡ್ಯದ ನಾಟಿಸ್ಟೈಲ್ ಬಾಡೂಟದ ರುಚಿಯನ್ನು ಉಣಬಡಿಸದಿದ್ದರೆ ಏನು ಚೆನ್ನಾಗಿರುತ್ತದೆ. ಕೇವಲ ಸಸ್ಯಹಾರವನ್ನಷ್ಟೇ ನೀಡಿದರೆ ಸಾಲದು. ಬಾಡೂಟ ಮೆನುವನ್ನೂ ಕೂಡ ಸಿದ್ಧಪಡಿಸುವಂತೆ ಬಾಡೂಟ ಬಳಗದವರು ಒತ್ತಡ ಹೇರಿದ್ದಾರೆ.

ಆದರೆ, ಸದಾ ಬಾಡೂಟ ಸವಿಯುವ ಉಸ್ತುವಾರಿ ಸಚಿವರು ಮಾತ್ರ ಇದಕ್ಕೆ ಮನ್ನಣೆ ನೀಡಿದಂತೆ ಕಾಣುತ್ತಿಲ್ಲ. ಸೋ, ಬೆಂಗಳೂರಿನ ತಮ್ಮ ಗುತ್ತಿಗೆದಾರ ಗೆಳೆಯರ ಜತೆ ಕೂತು ಎಲೆ (ಈ ಎಲೆ ವಿಳೆದೆಲೆ ಹಾಗೂ ಬಾಳೆಎಲೆ ಎರಡೂ ಅಲ್ಲ) ಬಾಡೂಟದ ಸವಿ ಸವಿಯುತ್ತ. ಸಿಹಿ ಊಟನೇ ಇರಲಿ ಬಿಡಿ ಎಂದರಂತೆ.

ಪರಿಣಾಮ ಮಂಡ್ಯದ ಜನತೆ ಆಸ್ಮಿತೆಯಾದ ಬಾಡೂಟಕ್ಕೆ ಕಿಕ್‌ ಔಟ್ ಸಿಕ್ಕಿದೆ. ಸೋ, ಬಾಡೂಟ ಗೆಳೆಯರು ಮನೆ ಮನೆಗೆ ಹೋಗಿ ‘ಕೋಳಿ ಕೊಡ್ತಿರಾ ಸಮ್ಮೇಳನದಲ್ಲಿ ನಮ್ಮ ಮಂಡ್ಯದ ಗತ್ತು ತೋರಿಸೋಣ’ ಅಂತಿದ್ದಾರೆ.

ಒಂದು ವೇಳೆ ಈ ಕೋಳಿ ಗತ್ತು ಸಕ್ಸಸ್‌ ಆದರೆ, ಸಮ್ಮೇಳನದ ಸಿಹಿ ಊಟ ವೇಸ್ಟ್ ಆಗೋದು ಗ್ಯಾರಂಟಿ. ಬಾಡೂಟ ಇಲ್ಲ ಎಂಬ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಕೋಳಿಗಳೆಲ್ಲಾ ಭರ್ಜರಿ ಬಾಡೂಟದ ಪಾರ್ಟಿ ಮಾಡಿವೆ ಎಂಬುದು ಮಂಡ್ಯದ ಕಡೆಯ ಹೊಸ ಸುದ್ದಿ.

ಪ್ರಶ್ನೆ ಕೇಳಿದರೇ ಬಿಜೆಪಿ ವಕ್ತಾರರು!,

ಕೇಳದಿದ್ರೆ ಕಾಂಗ್ರೆಸ್‌ ಕಾರ್ಯಕರ್ತ!!

ವಕ್ಫ್‌ ವಿಚಾರ ದೇಶಾದ್ಯಂತ ಸುದ್ದಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ವಿಜಯಪುರ ಜಿಲ್ಲೆಯಲ್ಲಾಗಿದ್ದ ವಕ್ಫ್‌ ಅವಾಂತರಗಳ ಕುರಿತು ಸ್ಪಷ್ಟನೆ ನೀಡಲು ನ.8ರಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಅವರು ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿದರು.

‘ನಾನು ವಕ್ಫ್‌ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುತ್ತಿದ್ದು, ಮಧ್ಯದಲ್ಲಿ ಯಾರೂ ಪ್ರಶ್ನೆಗಳನ್ನು ಕೇಳಬೇಡಿ, ಕೊನೆಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ’ ಎಂದು ಮೊದಲೇ ಆದೇಶ ಮಾಡಿಬಿಟ್ಟರು. ಅನಂತರ ಸುದೀರ್ಘವಾಗಿ 40 ನಿಮಿಷಗಳ ಸುದ್ದಿಗೊಷ್ಠಿ ನಡೆಸಿದ್ದ ಸಚಿವ ಎಂ.ಬಿ.ಪಾಟೀಲರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದೇ ನಡೆಸಿದ್ದು.

ಈ ವೇಳೆ ಆಕ್ರೋಶಭರಿತವಾಗಿ ಮಾಡಿನಾಡಿದ ಸಚಿವರು, ವಿಶ್ವೇಶ್ವರಯ್ಯನವರ ಕಾಲೇಜಿಗೆ ನೋಟಿಸ್‌ ಹೋಗಲು ಬಿಜೆಪಿಯವರೇ ಕಾರಣ. ಅವರ ಕಾಲದಲ್ಲೂ ಕೇಂದ್ರದ ಪ್ರಣಾಳಿಕೆಯಲ್ಲೇ ವಕ್ಫ್‌ ಆಸ್ತಿ ರಕ್ಷಣೆಗೆ ಬದ್ಧ ಎಂದು ನಮೂದಿಸಿಕೊಂಡಿದ್ದರು, ಸಾಕಷ್ಟು ವಕ್ಫ್‌ ಆಸ್ತಿ ರಕ್ಷಣೆ ಮಾಡಲು ಕ್ರಮ ಕೈಗೊಂಡಿದ್ದು, ಈಗ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಇವರದ್ದೇ ಅಧಿಕಾರ ಇತ್ತಲ್ಲ, ಆವಾಗ ಯಾಕೆ ಕಾಯ್ದೆ ತಿದ್ದುಪಡಿ ಮಾಡಲಿಲ್ಲ? ಈವಾಗ ಇವರಿಗೆ ಜ್ಞಾನೋದಯ ಆಯ್ತಾ? ಅಲ್ಲದೇ ಬಿಜೆಪಿಯವರು ಮಾಡಬಾರದ್ದೆಲ್ಲ ಮಾಡಿ ಈಗ ನಾವು ಪ್ಯೂರ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಭರ್ಜರಿ ಫೋರ್ಸ್‌ನಲ್ಲಿ ಸಚಿವರಿದ್ದರು.

ಈ ಹಂತದಲ್ಲಿ ಪತ್ರಕರ್ತರು ಕೆಲ ಮೂಲ ಕೆದಕುವ ಪ್ರಶ್ನೆ ಕೇಳಿದರಪ್ಪ ಅಷ್ಟೇ, ಸಚಿವರು ನೀವು ಬಿಜೆಪಿ ವಕ್ತಾರರಾ? ಎಂದು ಜಾಡಿಸಿಬಿಡೋದಾ?

‘ಇಲ್ಲ ಸ್ವಾಮಿ, ನಾವು ಬಿಜೆಪಿ ವಕ್ತಾರರಲ್ಲ, ಪ್ರಶ್ನೆ ಕೇಳದೆ ಕಾಂಗ್ರೆಸ್‌ ಕಾರ್ಯಕರ್ತರಾಗುತ್ತೇವೆ ಬಿಡಿ’ ಎಂದು ಪತ್ರಕರ್ತರು ಸುಮ್ಮನಾಗಬೇಕಾಯ್ತು.

-ಶಶಿಕಾಂತ ಮೆಂಡೆಗಾರ,

-ಮಂಡ್ಯ ಮಂಜುನಾಥ್