ಸಾರಾಂಶ
ಬೆಂಗಳೂರು : ದೇಶದ ಸಿಲಿಕಾನ್ ವ್ಯಾಲಿ ಬೆಂಗಳೂರು ನಗರದಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿ ಕನಸು ನನಸಾಗಿದ್ದು, ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು.
ಗುರುವಾರ ದೆಹಲಿಯಲ್ಲಿ ಭೇಟಿಯಾದ ಅವರು ಶುಕ್ರವಾರ ಬೆಂಗಳೂರಿನಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿ ಉದ್ಘಾಟನೆಯಾಗುತ್ತಿದ್ದು, ಕನ್ನಡಿಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೇಂದ್ರ ಸ್ಥಾನವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಬೆಂಗಳೂರು, ಅಮೆರಿಕ ಕಾನ್ಸುಲೇಟ್ ಸ್ಥಾಪನೆಯೊಂದಿಗೆ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈ ಮಹತ್ವದ ಬೆಳವಣಿಗೆ ಬೆಂಗಳೂರಿಗೆ ಹೊಸ ಅಧ್ಯಾಯ ಆರಂಭವಾಗಿದೆ. ಮಾತ್ರವಲ್ಲದೆ, ಈ ಕನಸನ್ನು ನನಸಾಗಿಸಲು ಅವಿರತವಾಗಿ ಶ್ರಮಿಸಿದ ಹಲವು ನಾಯಕರ ನಿರಂತರ ಶ್ರಮಕ್ಕೆ ಸಿಕ್ಕ ಗೆಲುವಾಗಿದೆ ಎಂದು ಹೇಳಿದರು.
ಭೇಟಿ ವೇಳೆ ಬೆಂಗಳೂರಿನಲ್ಲಿ 2006ರಿಂದಲೂ ಸ್ಥಾಪನೆ ಮಾಡಿಸುವ ಬಗ್ಗೆ ತಾವು ನಡೆಸಿದ ಪ್ರಯತ್ನಗಳ ಬಗ್ಗೆ ಸಚಿವ ಜೈಶಂಕರ್ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಅಂದಿನ ಯುಪಿಎ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅನ್ಯರಾಜ್ಯವೊಂದರ ಮುಖ್ಯಮಂತ್ರಿಯ ಒತ್ತಡಕ್ಕೆ ಮಣಿದ ಸರ್ಕಾರ ಅವರ ರಾಜ್ಯಕ್ಕೆ ಅಮೆರಿಕ ಕಾನ್ಸುಲೇಟ್ ಹೋಯಿತು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು 2018ರ ಮೇ 31ರಂದು ಮುಖ್ಯಮಂತ್ರಿಯಾಗಿದ್ದ ವೇಳೆ ಆಗಿನ ಭಾರತದ ಅಮೆರಿಕ ರಾಯಭಾರಿ ಕೆನೆತ್ ಜಸ್ಟರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆಯ ಬೇಡಿಕೆಯನ್ನು ಪ್ರಸ್ತಾಪಿಸಿದ್ದರು. ಆಗ ಕುಮಾರಸ್ವಾಮಿ ಮನವಿಗೆ ಜಸ್ಟರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.