ಇಂಜಮಾಮ್‌ರ ಆರೋಪದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ರೋಹಿತ್‌ ಶರ್ಮಾಗೆ ಪ್ರಶ್ನಿಸಿದ್ದಾರೆ. ಈ ವೇಳೆ ರೋಹಿತ್‌ ಅವರು ಇಂಜಮಾಮ್‌ ಹೇಳಿಗೆ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದಾರೆ.

ಕರಾಚಿ: ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್‌ ಸೂಪರ್‌-8 ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಚೆಂಡು ವಿರೂಪಗೊಳಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ ಆರೋಪಿಸಿದ್ದಾರೆ. ಅರ್ಶ್‌ದೀಪ್‌ ಸಿಂಗ್‌ ಎಸೆದ 16ನೇ ಓವರ್‌ನಲ್ಲಿ ಚೆಂಡು ರಿವರ್ಸ್‌ ಸ್ವಿಂಗ್‌ ಆಗುತ್ತಿತ್ತು. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದ ಅವರು, ಅಂಪೈರ್‌ಗಳು ತಮ್ಮ ಕಣ್ಣುಗಳನ್ನು ತೆರೆದಿರಬೇಕು ಎಂದು ಕುಟುಕಿದ್ದರು.

 ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೋಹಿತ್‌, ‘ಪಿಚ್‌ ಒಣಗಿದ್ದರಿಂದ ಎಲ್ಲಾ ಬೌಲರ್‌ಗಳೂ ರಿವರ್ಸ್‌ ಸಿಂಗ್‌ ಮಾಡುತ್ತಿದ್ದರು. ನೀವು ನಿಮ್ಮ ಮನಸ್ಸನ್ನು ತೆರೆದಿಡಬೇಕಾದ ಅಗತ್ಯವಿದೆ. ಇದು ಆಸ್ಟ್ರೇಲಿಯಾ ಅಲ್ಲ’ ಎಂದಿದ್ದಾರೆ.

ಗಾಯ: ನಿತೀತ್‌ ಜಿಂಬಾಬ್ವೆ ವಿರುದ್ಧದ ಸರಣಿಗೆ ಅಲಭ್ಯ

ನವದೆಹಲಿ: ಜಿಂಬಾಬ್ವೆ ವಿರುದ್ಧ ಸರಣಿಗಾಗಿ ಚೊಚ್ಚಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಯುವ ಆಲ್ರೌಂಡರ್‌ ನಿತೀಶ್‌ ರೆಡ್ಡಿ ಗಾಯಗೊಂಡಿದ್ದು, ಸರಣಿಗೆ ಅಲಭ್ಯರಾಗಲಿದ್ದಾರೆ. ಬದಲಿ ಆಟಗಾರನಾಗಿ ಶಿವಂ ದುಬೆಯನ್ನು ಬಿಸಿಸಿಐ ಆಯ್ಕೆಮಾಡಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಮಿಂಚಿದ್ದ ನಿತೀಶ್‌ರ ಗಾಯದ ಬಗ್ಗೆ ಬಿಸಿಸಿಐ ಹೆಚ್ಚಿನ ಮಾಹಿತಿ ನೀಡಿಲ್ಲ.

 ಆದರೆ ಅವರ ಮೇಲೆ ವೈದ್ಯಕೀಯ ತಂಡ ನಿಗಾ ಇಡಲಿದೆ ಎಂದು ತಿಳಿಸಿದೆ. ದುಬೆ ಭಾರತ ಪರ 27 ಟಿ20 ಪಂದ್ಯಗಳನ್ನಾಡಿದ್ದು, 34.72ರ ಸರಾಸರಿಯಲ್ಲಿ 383 ರನ್‌ ಕಲೆಹಾಕಿದ್ದಾರೆ. ಭಾರತ ತಂಡ ಜುಲೈ 6ರಿಂದ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಐಪಿಎಲ್‌ನಲ್ಲಿ ಮಿಂಚಿರುವ ಹಲವು ಆಟಗಾರರು ತಂಡದಲ್ಲಿದ್ದು, ಶುಭ್‌ಮನ್‌ ಗಿಲ್‌ ತಂಡದ ನಾಯಕತ್ವ ವಹಿಸಲಿದ್ದಾರೆ.