ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಲ್‌ ಹಾಗೂ ಧನಶ್ರೀ ವರ್ಮಾಗೆ ಇಲ್ಲಿ ಕೌಟುಂಬಿಕ ನ್ಯಾಯಾಲಯ ಗುರುವಾರ ವಿಚ್ಛೇದನ ಮಂಜೂರು ಮಾಡಿದೆ

ಮುಂಬೈ: ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಲ್‌ ಹಾಗೂ ಧನಶ್ರೀ ವರ್ಮಾಗೆ ಇಲ್ಲಿ ಕೌಟುಂಬಿಕ ನ್ಯಾಯಾಲಯ ಗುರುವಾರ ವಿಚ್ಛೇದನ ಮಂಜೂರು ಮಾಡಿದೆ.

 ವಿಚ್ಛೇದನ ಅರ್ಜಿಯನ್ನು ಮಾ.20ರಂದೇ ಇತ್ಯರ್ಥ ಪಡಿಸುವಂತೆ ಬಾಂಬೆ ಹೈಕೋರ್ಟ್‌ ಸೂಚನೆ ನೀಡಿದ ಕಾರಣ, ಗುರುವಾರ ಚಹಲ್‌ ಹಾಗೂ ಧನಶ್ರೀ ಉಪಸ್ಥಿತಿಯಲ್ಲಿ ವಿಚ್ಛೇದನ ಮಂಜೂರು ಮಾಡಲಾಯಿತು. 

2020ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, 2022ರ ಜೂನ್‌ನಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ತಮ್ಮ ಅರ್ಜಿಯಲ್ಲಿ ತಿಳಿಸಿತ್ತು. ಧನಶ್ರೀಗೆ ₹4.75 ಕೋಟಿ ಜೀವನಾಂಶ ನೀಡಲು ಚಹಲ್‌ ಒಪ್ಪಿಕೊಂಡಿರುವುದಾಗಿ ಕ್ರಿಕೆಟಿಗನ ಪರ ವಕೀಲರು ತಿಳಿಸಿದರು.

ಇದೇ ವೇಳೆ ಚಹಲ್‌ ಕೋರ್ಟ್‌ಗೆ ಮಾರ್ಮಿಕ ಸಂದೇಶವಿರುವ ಟಿ-ಶರ್ಟ್‌ ಧರಿಸಿ ಆಗಮಿಸಿದ್ದು ಗಮನ ಸೆಳೆಯಿತು. ‘Be your own sugar daddy’ ಎನ್ನುವ ಸಂದೇಶವಿತ್ತು. ಶುಗರ್‌ ಡ್ಯಾಡಿ ಎಂದರೆ, ತನ್ನ ವಿಲಾಸಿ ಜೀವನಕ್ಕೆ ಮನಸೋಯಿಚ್ಛೆ ಖರ್ಚು ಮಾಡುವ ವ್ಯಕ್ತಿ.