ಸಾರಾಂಶ
ಕಾಪು : ಖ್ಯಾತ ಕ್ರಿಕೆಟಿಗ, ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಭಾನುವಾರ ಇಲ್ಲಿನ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನವೀಕೃತ ಹೊಸ ಮಾರಿಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಭಾನುವಾರ ಮಾರಿಗುಡಿಯಲ್ಲಿ ಮಾರಿಯಮ್ಮನಿಗೆ ಸ್ವರ್ಣಗದ್ದುಗೆಯಲ್ಲಿ ಪುನಃಪ್ರತಿಷ್ಠೆ ನಡೆಯಿತು. ಈ ಸಂದರ್ಭ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜೊತೆ ಆಗಮಿಸಿ ಶಿಲಾಮಯ ದೇವಾಲಯವನ್ನು ವೀಕ್ಷಿಸಿ ಸಂತಸಪಟ್ಟರು.
ದೇವಿಶಾ ಶೆಟ್ಟಿ ಕರಾವಳಿ ಮೂಲದವರು, ಆದ್ದರಿಂದ ಅವರು ಕಳೆದ ವರ್ಷ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದಾಗ ಪತಿ ಯಾದವ್ ಅವರನ್ನು ಕರೆದುಕೊಂಡು ಬಂದು, ದೇವಾಲಯಕ್ಕೆ ಕಲ್ಲಿನ ಕಂಬವೊಂದನ್ನು ಸೇವಾ ರೂಪದಲ್ಲಿ ದೇಣಿಗೆಯಾಗಿ ನೀಡಿದ್ದರು, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬರುವುದಾಗಿ ಹೇಳಿದ್ದರು.
ಕಳೆದ ಬಾರಿ ಇಲ್ಲಿ ಭೇಟಿ ಕೊಟ್ಟ ಬಳಿಕ ಅವರು ಬಾರತದ ಟಿ- 20 ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಇದೀಗ ಪುನಃ ದೇವಾಲಯಕ್ಕೆ ಬಂದು ತಮ್ಮ ಹರಕೆ ತೀರಿಸಿದ್ದಾರೆ. ಅವರನ್ನು ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯವರು ಬರ ಮಾಡಿಕೊಂಡು ಮಾರಿಯಮ್ಮನ ದರ್ಶನ ಮಾಡಿಸಿ, ಪ್ರಸಾದ ನೀಡಿ ಗೌರವಿಸಿದರು.