ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೂಚ್‌ ಬೆಹಾರ್‌ ರಾಷ್ಟ್ರೀಯ ಅಂಡರ್‌ 19 ಟೂರ್ನಿಯ ಫೈನಲ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 626 ರನ್‌ ಕಲೆಹಾಕಿದೆ. ಪ್ರಖರ್‌ ಚತುರ್ವೇದಿ ಔಟಾಗದೆ 256 ರನ್‌ ಸಿಡಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಶಿವಮೊಗ್ಗ: ಇಲ್ಲಿ ನಡೆಯುತ್ತಿರುವ ಕೂಚ್‌ ಬೆಹಾರ್‌ ರಾಷ್ಟ್ರೀಯ ಅಂಡರ್‌ 19 ಟೂರ್ನಿಯ ಫೈನಲ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕ ಇನ್ನಿಂಗ್ಸ್‌ ಮುನ್ನಡೆ ಪಡೆದಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದೆ. 

ಮುಂಬೈನ ಮೊದಲ ಇನ್ನಿಂಗ್ಸ್‌ನ 380 ರನ್‌ಗೆ ಉತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಕರ್ನಾಟಕ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 626 ರನ್‌ ಕಲೆಹಾಕಿದೆ. ತಂಡ ಒಟ್ಟು 246 ರನ್‌ ಮುನ್ನಡೆಯಲ್ಲಿದೆ.

 ಹರ್ಷಿಲ್‌ ಧರ್ಮಾನಿ 169 ರನ್‌ ಸಿಡಿಸಿ ಔಟಾದರೆ, ಪ್ರಖರ್‌ ಚತುರ್ವೇದಿ ಔಟಾಗದೆ 256 ರನ್‌ ಸಿಡಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಸೋಮವಾರ ಪಂದ್ಯದ ಕೊನೆ ದಿನವಾಗಿದ್ದು, ಫಲಿತಾಂಶ ಸಿಗದಿದ್ದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಅಧಾರದಲ್ಲಿ ಕರ್ನಾಟಕ ಚಾಂಪಿಯನ್‌ ಎನಿಸಿಕೊಳ್ಳಲಿದೆ.

ಮಹಿಳಾ ಏಕದಿನ: ರಾಜ್ಯ ತಂಡಕ್ಕೆ ಮತ್ತೆ ಸೋಲು!

ಕಟಕ್‌: ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಮೂರನೇ ಸೋಲನುಭವಿಸಿದ್ದು, ನಾಕೌಟ್‌ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ರಾಜ್ಯ ಭಾನುವಾರ ಗುಜರಾತ್‌ ವಿರುದ್ಧ 45 ರನ್‌ಗಳಿಂದ ಸೋತಿತು. 

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 49 ಓವರಲ್ಲಿ 174ಕ್ಕೆ ಆಲೌಟಾಯಿತು. ಸಹನಾ ಪವಾರ್ 4, ವೃಂದಾ 2 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದರೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ ಕರ್ನಾಟಕ 46.5 ಓವರ್‌ಗಳಲ್ಲಿ 129ಕ್ಕೆ ಆಲೌಟಾಯಿತು. 

ರಾಜ್ಯ ತಂಡ 6 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದಿದ್ದು, ‘ಬಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲಿದೆ. ಕೊನೆ ಪಂದ್ಯದಲ್ಲಿ ಮಂಗಳವಾರ ಬಿಹಾರ ವಿರುದ್ಧ ಆಡಲಿದೆ. ಗೆದ್ದರೂ ನಾಕೌಟ್‌ಗೇರುವುದು ಅನುಮಾನ.