ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಕರ್ನಾಟಕದ ದೇವದತ್‌ಗೆ ಕೊನೆಗೂ ಭಾರತ ಟೆಸ್ಟ್‌ ಕ್ಯಾಪ್‌

| Published : Mar 08 2024, 01:48 AM IST

ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಕರ್ನಾಟಕದ ದೇವದತ್‌ಗೆ ಕೊನೆಗೂ ಭಾರತ ಟೆಸ್ಟ್‌ ಕ್ಯಾಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಡಿಕ್ಕಲ್‌ ಕಳೆದೆರಡು ಪಂದ್ಯಗಳಲ್ಲೇ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ರಜತ್‌ ಪಾಟೀದಾರ್‌ಗೆ ಅವಕಾಶ ನೀಡಲಾಗಿತ್ತು. ಅವರು ವಿಫಲರಾಗಿದ್ದರಿಂದ 5ನೇ ಟೆಸ್ಟ್‌ನಲ್ಲಿ ಪಡಿಕ್ಕಲ್‌ಗೆ ಮಣೆ ಹಾಕಲಾಗಿದೆ.

ಧರ್ಮಶಾಲಾ: ದೇಸಿ ಕ್ರಿಕೆಟ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಟೀಂ ಇಂಡಿಯಾದ ರಾಷ್ಟ್ರೀಯ ಆಯ್ಕೆ ಸಮಿತಿ ಗಮನ ಸೆಳೆದಿದ್ದ ಕರ್ನಾಟಕದ ಯುವ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ಕೊನೆಗೂ ಭಾರತ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಶುಕ್ರವಾರ ಇಂಗ್ಲೆಂಡ್‌ ಎದುರಿನ 5ನೇ ಟೆಸ್ಟ್‌ ಮೂಲಕ ಭಾರತ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡರು. ಪಡಿಕ್ಕಲ್ ಭಾರತ ಪರ 314ನೇ ಆಟಗಾರನಾಗಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವವಿಚಂದ್ರನ್ ಅಶ್ವಿನ್ ಅವರು ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್‌ಗೆ ಕ್ಯಾಪ್ ನೀಡುವ ಮೂಲಕ ಟೆಸ್ಟ್ ತಂಡಕ್ಕೆ ಸ್ವಾಗತಿಸಿದರು. ಇದರೊಂದಿಗೆ ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಭಾರತ ಪರ ಐವರು ಆಟಗಾರರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಂತಾಗಿದೆ.ಪಡಿಕ್ಕಲ್‌ ಅವರು ಟೀಂ ಇಂಡಿಯಾ ಟೆಸ್ಟ್‌ ಆಡುತ್ತಿರುವ ಕರ್ನಾಟಕದ 25ನೇ ಆಟಗಾರ. 2021ರಲ್ಲೇ ಭಾರತ ಪರ ಪಾದಾರ್ಪಣೆ ಮಾಡಿರುವ ಪಡಿಕ್ಕಲ್‌ 2 ಟಿ20 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ.ಕೆ.ಎಲ್‌.ರಾಹುಲ್‌ ಗಾಯಗೊಂಡ ಬಳಿಕ ರಜತ್‌ ಪಾಟೀದಾರ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ರಜತ್‌ ಆಡಿದ 3 ಪಂದ್ಯಗಳಲ್ಲೂ ವಿಫಲರಾಗಿದ್ದರು. ಹೀಗಾಗಿ ಅವರಿಗೆ 5ನೇ ಟೆಸ್ಟ್‌ನಲ್ಲೂ ಅವಕಾಶ ನೀಡದೆ ಪಡಿಕ್ಕಲ್‌ ಮಣೆ ಹಾಕಲಾಗಿದೆ.