ಸಾರಾಂಶ
ಇಂದಿನಿಂದ ದುಲೀಪ್ ಟ್ರೋಫಿ ಫೈನಲ್. ಪ್ರಶಸ್ತಿಗಾಗಿ ದಕ್ಷಿಣ ವಲಯ ಹಾಗೂ ಕೇಂದ್ರ ವಲಯ ಮುಖಾಮುಖಿ. ಕರ್ನಾಟಕದ ಆರ್.ಸ್ಮರಣ್ ಮೇಲೆ ಎಲ್ಲರ ಕಣ್ಣು.
ಬೆಂಗಳೂರು: ದುಲೀಪ್ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯ ಫೈನಲ್ ಪಂದ್ಯ ಗುರುವಾರದಿಂದ ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್ಲೆನ್ಸ್ ಮೈದಾನದಲ್ಲಿ ನಡೆಯಲಿದೆ. ಎರಡೂ ತಂಡಗಳ ಕೆಲ ಪ್ರಮುಖ ಆಟಗಾರರು ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದ ಕಾರಣ, ಕೆಲ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಲಾಗಿದೆ.
ದಕ್ಷಿಣ ವಲಯ ಪರ ಕರ್ನಾಟಕದ ಆರ್.ಸ್ಮರಣ್ ಹಾಗೂ ತಮಿಳುನಾಡಿನ ಆ್ಯಂಡ್ರೆ ಸಿದ್ಧಾರ್ಥ್ ಮಿಂಚಲು ಸಿದ್ಧರಾಗಿದ್ದಾರೆ. ಎನ್.ಜಗದೀಶನ್ ಹಾಗೂ ದೇವದತ್ ಪಡಿಕ್ಕಲ್ರ ಸೇವೆ ದಕ್ಷಿಣ ವಲಯಕ್ಕೆ ಅಲಭ್ಯವಾಗಲಿದೆ. ಅದೇ ರೀತಿ ಕೇಂದ್ರ ವಲಯ ತನ್ನ ತಾರಾ ಆಟಗಾರರಾದ ಯಶ್ ಠಾಕೂರ್, ಹರ್ಷ್ ದುಬೆ, ಖಲೀಲ್ ಅಹ್ಮದ್ ಹಾಗೂ ಮಾನವ್ ಸುಥಾರ್ ಇಲ್ಲದೇ ಆಡಬೇಕಿದೆ. ಹೀಗಾಗಿ ತಂಡ ವಿದರ್ಭದ ಯುವ ಬ್ಯಾಟರ್ ದಾನಿಶ್ ಮಾಲೆವಾರ್ ಮೇಲೆ ಎಲ್ಲರ ಕಣ್ಣಿದೆ.ದಕ್ಷಿಣ ವಲಯವನ್ನು ಕೇರಳದ ಮೊಹಮದ್ ಅಜರುದ್ದೀನ್, ಕೇಂದ್ರ ವಲಯವನ್ನು ಮಧ್ಯಪ್ರದೇಶದ ರಜತ್ ಪಾಟೀದಾರ್ ಮುನ್ನಡೆಸಲಿದ್ದಾರೆ. ಫೈನಲ್ ಪಂದ್ಯ 5 ದಿನಗಳ ಕಾಲ ನಡೆಯಲಿದೆ.