ಚಿನ್ನಸ್ವಾಮಿ ಕ್ರೀಡಾಂಗಣ @50: ಬೆಂಗಳೂರಿನಲ್ಲಿ ಮೊದಲ ಅಂ.ರಾ. ಪಂದ್ಯ ನಡೆದು ಇಂದಿಗೆ 50 ವರ್ಷ!

| Published : Nov 22 2024, 01:17 AM IST / Updated: Nov 22 2024, 04:25 AM IST

ಸಾರಾಂಶ

1974ರ ನ.22ರಂದು ಆರಂಭಗೊಂಡಿದ್ದ ಭಾರತ-ವಿಂಡೀಸ್‌ ಟೆಸ್ಟ್‌. ಲಾಯ್ಡ್‌, ರಾಬರ್ಟ್ಸ್‌, ಗವಾಸ್ಕರ್‌, ಜಿಆರ್‌ವಿ, ಚಿನ್ನಸ್ವಾಮಿಯಲ್ಲಿ ಸೂಪರ್‌ ಸ್ಟಾರ್‌ಗಳ ಸಂಗಮಕ್ಕೆ ಸಾಕ್ಷಿಯಾಗಿಲ್ಲ ಕ್ರೀಡಾಂಗಣ. ಮೊದಲ ಪಂದ್ಯದ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಕ್ರಿಕೆಟಿಗರು.

 ಕರ್ನಾಟಕ ಕ್ರಿಕೆಟ್ ಪಾಲಿನ ‘ಪುಣ್ಯ ಭೂಮಿ’, ವಿಶ್ವದಲ್ಲೇ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೀಗ 50ರ ಸಂಭ್ರಮ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದು ನ.22ಕ್ಕೆ ಬರೋಬ್ಬರಿ 50 ವರ್ಷಗಳು ಭರ್ತಿಯಾಗಿವೆ. ಆ ಐತಿಹಾಸಿಕ ಪಂದ್ಯ ಹೇಗಿತ್ತು?, ಯಾರೆಲ್ಲಾ ಆಡಿದ್ದರು ಎನ್ನುವುದನ್ನು ಮೆಲುಕು ಹಾಕೋಣ.

ಲಾಯ್ಡ್‌, ರಾಬರ್ಟ್ಸ್‌, ಗವಾಸ್ಕರ್‌, ಜಿಆರ್‌ವಿ, ಚಿನ್ನಸ್ವಾಮಿಯಲ್ಲಿ ಸೂಪರ್‌ ಸ್ಟಾರ್‌ಗಳ ಸಂಗಮ!

1974ರ ನವೆಂಬರ್‌ 22ನೇ ತಾರೀಖು. ಭಾರತದಲ್ಲಿ ಮತ್ತೊಂದು ಟೆಸ್ಟ್‌ ಕ್ರಿಕೆಟ್‌ ಕೇಂದ್ರ ತಲೆಎತ್ತಿತು. ಅದು ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣ. ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು, ಭಾರತ ಹಾಗೂ ವೆಸ್ಟ್‌ಇಂಡೀಸ್‌ ತಂಡಗಳು. ಭಾರತ ತಂಡವನ್ನು ಮನ್ಸೂರ್‌ ಅಲಿ ಖಾನ್‌ ಪಟೌಡಿ, ವಿಂಡೀಸ್‌ ತಂಡವನ್ನು ಕ್ಲೈವ್‌ ಲಾಯ್ಡ್‌ ಮುನ್ನಡೆಸಿದ್ದರು. ಭಾರತ ತಂಡದಲ್ಲಿ ಸಾರ್ವಕಾಲಿಕ ಸೂಪರ್‌ ಸ್ಟಾರ್‌ಗಳಾದ ಪಟೌಡಿ, ಸುನಿಲ್‌ ಗವಾಸ್ಕರ್‌, ಜಿ.ಆರ್‌.ವಿಶ್ವನಾಥ್‌, ಇಎಎಸ್‌ ಪ್ರಸನ್ನ, ಬಿಎಸ್‌ ಚಂದ್ರಶೇಖರ್‌, ಬ್ರಿಜೇಶ್‌ ಪಟೇಲ್‌, ಏಕ್‌ನಾಥ್‌ ಸೋಲ್ಕರ್‌, ಫಾರೂಖ್‌ ಎಂಜಿನಿಯರ್‌, ಎಸ್‌.ವೆಂಕಟರಾಘವನ್‌ ಇದ್ದರೆ, ವಿಂಡೀಸ್‌ ತಂಡದಲ್ಲಿ ಲಾಯ್ಡ್‌, ಆಲ್ವಿನ್‌ ಕಾಲಿಚರಣ್‌, ರಾಯ್‌ ಫ್ರೆಡ್ರಿಕ್ಸ್‌, ಆ್ಯಂಡಿ ರಾಬರ್ಟ್ಸ್‌, ಲ್ಯಾನ್ಸ್‌ ಗಿಬ್ಸ್‌, ಕೀಥ್‌ ಬಾಯ್ಸ್‌, ಡೆರೆಕ್‌ ಮರ್ರೆ ಇದ್ದರು. ಇವರ ಜೊತೆಗೆ ಮತ್ತಿಬ್ಬರು ವಿಂಡೀಸ್‌ ತಂಡಕ್ಕೆ ಪಾದಾರ್ಪಣೆ ಮಾಡಿ, ದಿಗ್ಗಜ ಕ್ರಿಕೆಟಿಗರಾಗಿ ಬೆಳೆದರು. ಅವರೇ ಸರ್‌. ವಿವಿಯನ್‌ ರಿಚರ್ಡ್ಸ್‌ ಹಾಗೂ ಗಾರ್ಡನ್‌ ಗ್ರೀನಿಡ್ಜ್‌.

ಮೊದಲ ಪಂದ್ಯದಲ್ಲೇ 3 ಶತಕಕ್ಕೆ ಸಾಕ್ಷಿ!

ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಪಂದ್ಯದಲ್ಲೇ 3 ಶತಕಗಳಿಗೆ ಸಾಕ್ಷಿಯಾಗಿತ್ತು. ಮೂರೂ ಶತಕಗಳು ವಿಂಡೀಸ್‌ ಬ್ಯಾಟರ್‌ಗಳಿಂದಲೇ ದಾಖಲಾಗಿದ್ದು. ಮೊದಲ ಇನ್ನಿಂಗ್ಸಲ್ಲಿ ಕಾಲಿಚರಣ್‌ 124 ರನ್‌ ಸಿಡಿಸಿದರೆ, 2ನೇ ಇನ್ನಿಂಗ್ಸಲ್ಲಿ ಗ್ರೀನಿಡ್ಜ್‌ 107, ಕ್ಲೈವ್‌ ಲಾಯ್ಡ್‌ 163 ರನ್‌ ಚಚ್ಚಿದ್ದರು.

ವಿಂಡೀಸ್‌ಗೆ 267 ರನ್‌ ಜಯ

ಮೊದಲ ಇನ್ನಿಂಗ್ಸಲ್ಲಿ 289 ರನ್‌ ಗಳಿಸಿದ್ದ ಪ್ರವಾಸಿ ವಿಂಡೀಸ್‌, ಭಾರತವನ್ನು 260 ರನ್‌ಗೆ ಆಲೌಟ್‌ ಮಾಡಿ 29 ರನ್‌ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 356 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡ ವಿಂಡೀಸ್‌ ಭಾರತಕ್ಕೆ ಗೆಲ್ಲಲು 386 ರನ್‌ ಗುರಿ ನೀಡಿತ್ತು. ಭಾರತ 2ನೇ ಇನ್ನಿಂಗ್ಸಲ್ಲಿ ಕೇವಲ 118 ರನ್‌ಗೆ ಆಲೌಟ್‌ ಆಗಿ 267 ರನ್‌ ಸೋಲು ಅನುಭವಿಸಿತ್ತು. 

ತವರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಕರ್ನಾಟಕದ ನಾಲ್ವರು!

ತವರಿನಂಗಳದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಕರ್ನಾಟಕದ ನಾಲ್ವರು ಆಟಗಾರರು ಪ್ರತಿನಿಧಿಸಿದ್ದರು. ತಾರಾ ಬ್ಯಾಟರ್‌ಗಳಾದ ಜಿ.ಆರ್‌.ವಿಶ್ವನಾಥ್‌, ಬ್ರಿಜೇಶ್‌ ಪಟೇಲ್‌, ತಾರಾ ಸ್ಪಿನ್ನರ್‌ಗಳಾದ ಇಎಎಸ್‌ ಪ್ರಸನ್ನ, ಬಿಎಸ್‌ ಚಂದ್ರಶೇಖರ್‌ ತಂಡದಲ್ಲಿದ್ದರು. ಪಂದ್ಯದಲ್ಲಿ ಚಂದ್ರಶೇಖರ್‌ 6, ಪ್ರಸನ್ನ 2 ವಿಕೆಟ್‌ ಪಡೆದಿದ್ದರು. ಜಿಆರ್‌ವಿ ಮೊದಲ ಇನ್ನಿಂಗ್ಸಲ್ಲಿ 29, 2ನೇ ಇನ್ನಿಂಗ್ಸಲ್ಲಿ 22 ರನ್‌ ಗಳಿಸಿದ್ದರು. ಬ್ರಿಜೇಶ್‌ ಮೊದಲ ಇನ್ನಿಂಗ್ಸಲ್ಲಿ 2, 2ನೇ ಇನ್ನಿಂಗ್ಸಲ್ಲಿ 22 ರನ್‌ ದಾಖಲಿಸಿದ್ದರು.

ಕ್ರೀಡಾಂಗಣದಲ್ಲಿ ಜನಸಾಗರವೇ ನೆರೆದಿತ್ತು:

ಚಿನ್ನಸ್ವಾಮಿಯಲ್ಲಿ ಮೊದಲ ಪಂದ್ಯಕ್ಕೆ ಸ್ಕೋರರ್‌ ಆಗಿದ್ದ ಗೋಪಾಲಕೃಷ್ಣ

‘ನನಗೀಗಲೂ ಆ ದೃಶ್ಯಗಳು ಕಣ್ಣಿಗೆ ಕಟ್ಟಿದ ರೀತಿ ಇದೆ. ಅಷ್ಟೊಂದು ಕ್ರಿಕೆಟ್‌ ಅಭಿಮಾನಿಗಳನ್ನು ನಾನು ಜೀವನದಲ್ಲೇ ನೋಡಿರಲಿಲ್ಲ’, ಇದು 1974ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ವಿಂಡೀಸ್‌ ನಡುವೆ ಚೊಚ್ಚಲ ಟೆಸ್ಟ್‌ ನಡೆದಾಗ ಪಂದ್ಯದ ಅಧಿಕೃತ ಸ್ಕೋರರ್‌ ಆಗಿದ್ದ ಎಚ್‌.ಆರ್‌.ಗೋಪಾಲಕೃಷ್ಣ ಅವರ ಮಾತುಗಳು.‘ಕನ್ನಡಪ್ರಭ’ದೊಂದಿಗೆ ಆ ಪಂದ್ಯದ ಅನುಭವಗಳನ್ನು ಹಂಚಿಕೊಂಡ ಗೋಪಾಲಕೃಷ್ಣ ಅವರು, ಅಂದಿನ ಸನ್ನಿವೇಶಗಳನ್ನು ಎಳೆ ಎಳೆಯಾಗಿ ವಿವರಿಸಿದರು. ‘ನಾನು ಪಂದ್ಯದ ಹಿಂದಿನ ದಿನವೂ ಕ್ರೀಡಾಂಗಣಕ್ಕೆ ಹೋಗಿದ್ದೆ. ಮುಖ್ಯಸ್ಥರಾದ ಚಿನ್ನಸ್ವಾಮಿ ಅವರು ಎಲ್ಲ ಪರಿಶೀಲನೆ ನಡೆಸುತ್ತಿದ್ದರು. ಕ್ರೀಡಾಂಗಣದ ಸ್ಟ್ಯಾಂಡ್‌ಗಳು ಸುರಕ್ಷಿತವಾಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಹೀಗಾಗಿ, ಚಿನ್ನಸ್ವಾಮಿ ಅವರು ಸಾವಿರಾರು ಮರಳಿನ ಮೂಟೆಗಳನ್ನು ತರಿಸಿ ಸ್ಟ್ಯಾಂಡ್ಸ್‌ ಗಟ್ಟಿಯಿವೆ ಎಂದು ದೃಢಪಡಿಸಿಕೊಂಡಿದ್ದರು.ಪಂದ್ಯದ ದಿನ ಬೆಳಗ್ಗೆ 9 ಗಂಟೆಗೆ ವೇಳೆಗೆ ನಾನು ಕ್ರೀಡಾಂಗಣಕ್ಕೆ ಹೋದಾಗ, ಅಲ್ಲಿ ಜನಸಾರವೇ ನೆರೆದಿತ್ತು. ಭಾರತ-ವಿಂಡೀಸ್‌ ಪಂದ್ಯವನ್ನು ವೀಕ್ಷಿಸಲು ದೂರದ ಊರುಗಳಿಂದಲೂ ಜನ ಬಂದಿದ್ದರು. ಆದರೆ, ಮೊದಲ ಅವಧಿಯಲ್ಲೇ ಮಳೆ ಬಂದಿದ್ದರಿಂದ ಎಲ್ಲರಿಗೂ ಸ್ವಲ್ಪ ನಿರಾಸೆ ಉಂಟಾಗಿತ್ತು. ಆದರೂ ಮಧ್ಯಾಹ್ನ 12.10ಕ್ಕೆ ಆಟ ಶುರುವಾದಾಗ ಎಲ್ಲರಲ್ಲೂ ರಣೋತ್ಸಾಹ’ ಎಂದು ಪಂದ್ಯದ ಆರಂಭಿಕ ಕ್ಷಣಗಳನ್ನು ತಿಳಿಸಿದರು.

ಮೊದಲ ಬಾರಿಗೆ ಸ್ಕೋರಿಂಗ್‌ಗೆ ಬಣ್ಣದ ಇಂಕ್‌ಗಳ ಬಳಕೆ!

ಭಾರತ-ವಿಂಡೀಸ್‌ ಟೆಸ್ಟ್‌ನ ಸ್ಕೋರಿಂಗ್‌ ಮಾಡಲು ತಾವು ಅನುಸರಿಸಿದ ಮಾದರಿಯ ಬಗ್ಗೆಯೂ ಗೋಪಾಲಕೃಷ್ಣ ಅವರು ತಿಳಿಸಿದರು. ‘ಭಾರತದಲ್ಲೇ ಮೊದಲ ಬಾರಿಗೆ ಸ್ಕೋರಿಂಗ್‌ಗೆ ನಾನು ಬಣ್ಣ ಬಣ್ಣದ ಪೆನ್‌ಗಳನ್ನು ಬಳಸಿದೆ. ನೀಲಿ, ಹಸಿರು, ಕೆಂಪು ಹಾಗೂ ಕಪ್ಪು ಬಣ್ಣದ ಇಂಕ್‌ಗಳನ್ನು ಬಳಸಿ ಸ್ಕೋರಿಂಗ್ ಮಾಡಿದೆ’ ಎಂದು ಆ ಪಂದ್ಯ ಅಧಿಕೃತ ಸ್ಕೋರ್‌ ಕಾರ್ಡನ್ನು ತೋರಿಸಿದರು.ಗೋಪಾಲಕೃಷ್ಣ ಅವರು ಸ್ಕೋರರ್‌ ಆಗಿ ಈ ವರೆಗೂ 100 ಟೆಸ್ಟ್‌ಗಳನ್ನು ಪೂರೈಸಿದ್ದಾರೆ. ಅಲ್ಲದೇ ಕ್ರಿಕೆಟ್‌ ಜಗತ್ತಿನ ಅಗ್ರ ಸ್ಟ್ಯಾಟಿಸ್ಟಿಷಿಯನ್‌ಗಳಲ್ಲಿ ಒಬ್ಬರು ಎಂದು ಖ್ಯಾತ ಪಡೆದಿದ್ದಾರೆ. ಹಲವು ವಿಶ್ವ ದಾಖಲೆಗಳನ್ನು ಗುರುತಿಸಿ, ಕ್ರಿಕೆಟ್‌ ಲೋಕಕ್ಕೆ ತಿಳಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.

ಅಂಕಿ-ಅಂಶ, ಫೋಟೋಗಳ ಕೃಪೆ: ಎಚ್‌.ಆರ್‌.ಗೋಪಾಲಕೃಷ್ಣ

ಸಬ್‌ ಏರ್‌ ವ್ಯವಸ್ಥೆ ಇರುವ ವಿಶ್ವದ ಏಕೈಕ ಕ್ರಿಕೆಟ್‌ ಕ್ರೀಡಾಂಗಣ

1969ರ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 1970ರಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭಗೊಂಡು, 1974ರ ವೇಳೆಗೆ ಅರ್ಧ ಕಾಮಗಾರಿ ಪೂರ್ತಿಗೊಂಡಿತ್ತು. ಆದರೂ, ಟೆಸ್ಟ್‌ ಕ್ರೀಡಾಂಗಣ ಎನ್ನುವ ಮಾನ್ಯತೆ ಪಡೆಯುವಲ್ಲಿ ಕೆಎಸ್‌ಸಿಎ ಸ್ಟೇಡಿಯಂ ಸಫಲವಾಗಿತ್ತು. 1977ರಿಂದ 1980ರ ವರೆಗೂ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಎಂ.ಚಿನ್ನಸ್ವಾಮಿ ಅವರ ನೆನಪಿನಲ್ಲಿ ಕ್ರೀಡಾಂಗಣಕ್ಕೆ 1987ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಎಂದು ಮರುನಾಮರಣ ಮಾಡಲಾಯಿತು.ಆರಂಭದಲ್ಲಿ ತಾತ್ಕಾಲಿಕ ಗ್ಯಾಲರಿಯನ್ನು ಹೊಂದಿದ್ದ ಕ್ರೀಡಾಂಗಣಕ್ಕೆ ನಂತರ ಸಿಮೆಂಟ್‌ ಬೆಂಚ್‌ಗಳು ಬಂದವು. 1996ರ ಏಕದಿನ ವಿಶ್ವಕಪ್‌ಗೂ ಮುನ್ನ ಕ್ರೀಡಾಂಗಣಕ್ಕೆ ಫ್ಲಡ್‌ ಲೈಟ್ಸ್‌ ಅಳವಡಿಕೆ ಮಾಡಲಾಯಿತು.ಬಳಿಕ ಹಲವು ನವೀಕರಣ ಕಾರ್ಯಗಳು ನಡೆದವು. 2017ರಲ್ಲಿ ಮೈದಾನದಲ್ಲಿ ಸಬ್‌-ಏರ್‌ ಸಿಸ್ಟಮ್‌ ಅಳವಡಿಕೆ ಮಾಡಲಾಯಿತು. ಈ ವ್ಯವಸ್ಥೆ ಹೊಂದಿದ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎನ್ನುವ ಹಿರಿಮೆಗೆ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಯಿತು. ಸಬ್‌-ಏರ್‌ ವ್ಯವಸ್ಥೆಯಿಂದಾಗಿ ಮಳೆ ನಿಂತ 20 ನಿಮಿಷದಲ್ಲಿ ಆಟ ಆರಂಭಿಸಬಹುದು. ಅಲ್ಲದೇ ಲಕ್ಷಾಂತರ ಲೀ. ನೀರು ಸಹ ಸಂಗ್ರಹವಾಗುತ್ತದೆ.ಇನ್ನು, ಮೇಲ್ಚಾವಣಿಗೆ ಸೋಲಾರ್‌ ಪ್ಯಾನೆಲ್‌ಗಳ ಅಳವಡಿಕೆ, ಹೊಸ ಫ್ಲಡ್‌ ಲೈಟ್ಸ್‌ಗೆ ಎಲ್‌ಇಡಿ ಬಲ್ಬ್‌ಗಳ ಬಳಕೆ, ಕಸ ನಿರ್ವಹಣೆ ಹೀಗೆ ಆಧುನಿಕ ವ್ಯವಸ್ಥೆ, ತಂತ್ರಜ್ಞಾನಗಳ ಬಳಕೆ ಮಾಡುವುದಲ್ಲಿ ಕೆಎಸ್‌ಸಿಎ ಸದಾ ಮುಂದಿದೆ.

ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಹೆಸರು ಬಂದಿದ್ದು ಹೇಗೆ?

ಬೆಂಗಳೂರಿನ ಕ್ರೀಡಾಂಗಣ ‘ಚಿನ್ನಸ್ವಾಮಿ ಕ್ರೀಡಾಂಗಣ’ ಎಂದೇ ಖ್ಯಾತಿ. ಹಲವರಿಗೆ ಈ ಹೆಸರಿನ ಹಿಂದಿರುವ ಗುಟ್ಟು ಗೊತ್ತಿರಲಿಕ್ಕಿಲ್ಲ. ಆದರೆ ಚಿನ್ನಸ್ವಾಮಿ ಅವರನ್ನು ನೆನಪಿಸಿಕೊಳ್ಳದಿದ್ದರೆ ಕ್ರೀಡಾಂಗಣಕ್ಕೆ ಮಹತ್ವ ಬರಲು ಸಾಧ್ಯವೇ ಇಲ್ಲ. ಪೂರ್ಣ ಹೆಸರು ಮಂಗಳಂ ಚಿನ್ನಸ್ವಾಮಿ ಮುದಳಿಯಾರ್‌. 1900ರಲ್ಲಿ ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲ. ವೃತ್ತಿಪರ ಕ್ರಿಕೆಟಿಗನಲ್ಲದಿದ್ದರೂ ಕರ್ನಾಟಕದಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರಮುಖ ಶಕ್ತಿಯೇ ಚಿನ್ನಸ್ವಾಮಿ.ರಾಜ್ಯ ಕ್ರಿಕೆಟ್‌ ಸಂಸ್ಥೆಗೆ 1953ರಿಂದ 1978ರ ವರೆಗೆ ಕಾರ್ಯದರ್ಶಿ, 1978ರಿಂದ 1990ರ ವರೆಗೆ ಅಧ್ಯಕ್ಷರಾಗಿದ್ದ ಅವರು, ಬಿಸಿಸಿಐಗೆ 1960ರಿಂದ 1965ರ ವರೆಗೆ ಕಾರ್ಯದರ್ಶಿ, 1977ರಿಂದ 1980ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದಿಂದ ಐಸಿಸಿಗೆ 3 ಬಾರಿ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರದಿಂದ ಕ್ರೀಡಾಂಗಣಕ್ಕೆ ಜಾಗ ಮೀಸಲಿಡುವಂತೆ ಮಾಡಿ, ನಿರ್ಮಾಣಕ್ಕೂ ಶ್ರಮ ವಹಿಸಿದ ಚಿನ್ನಸ್ವಾಮಿ ಹೆಸರನ್ನೇ ಬಳಿಕ ಕ್ರೀಡಾಂಗಣಕ್ಕೆ ಇಡಲಾಯಿತು. ಚಿನ್ನಸ್ವಾಮಿ ಅವರು 1991ರಲ್ಲಿ ನಿಧನರಾಗಿದ್ದಾರೆ.