ಸಾರಾಂಶ
ನವದೆಹಲಿ: ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕೇಂದ್ರೀಯ ಗುತ್ತಿಗೆ ಕಳೆದುಕೊಂಡಿರುವ ಬಗ್ಗೆ ಪರ ವಿರೋಧ ಚರ್ಚೆಯ ನಡುವೆ ಬಿಸಿಸಿಐ ನೀಡಿದ ಆಫರ್ ಅನ್ನು ಇಶಾನ್ ಕಿಶನ್ ತಿರಸ್ಕರಿಸಿದ್ದರು ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿದೆ.
ಸದ್ಯ ಚಾಲ್ತಿಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವಂತೆ ಬಿಸಿಸಿಐ ಇಶಾನ್ ಅವರನ್ನು ಕೇಳಿತ್ತು. ಆದರೆ ತಾವಿನ್ನೂ ತಂಡಕ್ಕೆ ಮರಳಲು ಮಾನಸಿಕವಾಗಿ ಸಿದ್ಧರಿಲ್ಲ ಎಂದು ತಿಳಿಸಿದ್ದ ಅವರು, ಐಪಿಎಲ್ಗಾಗಿ ಪ್ರತ್ಯೇಕವಾಗಿ ತಯಾರಿ ನಡೆಸಿದ್ದು, ಖಾಸಗಿ ಟಿ20 ಟೂರ್ನಿಯೊಂದರಲ್ಲೂ ಆಡುತ್ತಿದ್ದಾರೆ. ಇದೇ ಕಾರಣಕ್ಕೆ ಕಿಶನ್ ಮೇಲೆ ಸಿಟ್ಟಾದ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಅವರನ್ನು ಹೊರಹಾಕಿದೆ ಎಂದು ವರದಿ ಮಾಡಿದೆ.
ಸಂತೋಷ್ ಟ್ರೋಫಿ: ಕೊನೆ ಪಂದ್ಯದಲ್ಲೂ ರಾಜ್ಯಕ್ಕಿಲ್ಲ ಜಯ
ಯೂಪಿಯಾ: 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ಒಂದೂ ಗೆಲುವು ಕಾಣದೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.
ಫೈನಲ್ ಹಂತದ ‘ಬಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಶನಿವಾರ ಕರ್ನಾಟಕ 1-4 ಗೋಲುಗಳ ಅಂತರದಲ್ಲಿ ಮಹಾರಾಷ್ಟ್ರ ವಿರುದ್ಧ ಸೋಲುಂಡಿತು.
ಇದರೊಂದಿಗೆ ಗುಂಪಿನಲ್ಲಿ ಕೊನೆ ಸ್ಥಾನಿಯಾಗಿಯೇ ಉಳಿಯಿತು. ಮೊದಲೆರಡು ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ರಾಜ್ಯ ತಂಡ, ಕೊನೆಯ 3 ಪಂದ್ಯಗಳಲ್ಲಿ ಸೋಲುಂಡು ನಿರಾಸೆ ಅನುಭವಿಸಿತು.