ನವದೆಹಲಿ: ರಣಜಿ ಆಡುವಂತೆ ಭಾರತದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ನೀಡಿದ್ದ ಸಲಹೆಗೂ ಯುವ ಕ್ರಿಕೆಟಿಗ ಇಶಾನ್‌ ಕಿಶನ್‌ ಬೆಲೆ ಕಲ್ಪಿಸಿಲ್ಲ ಎಂದು ಹೇಳಲಾಗುತ್ತಿದ್ದು, ರಣಜಿ ಬದಲು ಬರೋಡಾದಲ್ಲಿ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಇಶಾನ್‌ ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದಾರೆ. ಅವರು ಮಾನಸಿಕ ಆರೋಗ್ಯ ಕಾರಣಕ್ಕೆ ತಂಡದಿಂದ ದೂರ ಉಳಿದಿದ್ದು, ದುಬೈನಲ್ಲಿ ಪಾರ್ಟಿಯಲ್ಲಿ ಕಾಣಿಸಿಕೊಂಡ ಬಳಿಕ ವಿವಾದವಾಗಿತ್ತು. 

ಈ ನಡುವೆ ಇಶಾನ್‌ ರಾಷ್ಟ್ರೀಯ ತಂಡಕ್ಕೆ ಮರಳಬೇಕಿದ್ದರೆ ದೇಸಿ ಕ್ರಿಕೆಟ್‌ ಆಡಲಿ ಎಂದಿದ್ದರು. ಆದರೆ ಇಶನ್‌ ಈ ಬಾರಿ ರಣಜಿಯಲ್ಲಿ ಆಡುತ್ತಿಲ್ಲ. ಬದಲಾಗಿ ಪಾಂಡ್ಯ ಸಹೋದರರ ಜೊತೆ ಐಪಿಎಲ್‌ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಕಿರಿಯರ ಕುಸ್ತಿ ಕೂಟ ಫೆ.11ಕ್ಕೆ ಅಲ್ಲ, 28ಕ್ಕೆ ಶುರು
ನವದೆಹಲಿ: ಮುಂದಿನ ವಾರ ಆರಂಭಗೊಳ್ಳಬೇಕಿದ್ದ ರಾಷ್ಟ್ರೀಯ ಅಂಡರ್‌-15 ಹಾಗೂ ಅಂಡರ್-20 ಕುಸ್ತಿ ಚಾಂಪಿಯನ್‌ಶಿಪ್‌ಗೆ ಭಾರತೀಯ ಕುಸ್ತಿ ಫೆಡರೇಶನ್‌ನ ಸ್ವತಂತ್ರ ಸಮಿತಿ ಹೊಸ ದಿನಾಂಕ ಪ್ರಕಟಿಸಿದೆ. ಕೂಟ ಪಟಿಯಾಲದಲ್ಲಿ ಫೆ.28ರಿಂದ ಮಾ.5ರ ವರೆಗೆ ನಡೆಯಲಿದೆ ಎಂದು ಗುರುವಾರ ಘೋಷಿಸಿದೆ. 

ಈ ಮೊದಲು ಗ್ವಾಲಿಯರ್‌ನಲ್ಲಿ ಫೆ.11ರಿಂದ 17ರ ವರೆಗೆ ಕೂಟ ನಡೆಸುವುದಾಗಿ ಸಮಿತಿ ತಿಳಿಸಿತ್ತು. ಆದರೆ ರಾಜ್ಯ ಸಂಸ್ಥೆಗಳು ಕುಸ್ತಿಪಟುಗಳ ಆಯ್ಕೆಗೆ ಸಮಯಾವಕಾಶ ಕೋರಿದ್ದರಿಂದ ಬುಧವಾರ ಸ್ವತಂತ್ರ ಸಮಿತಿಯು ಕೂಟವನ್ನು ಮುಂದೂಡುವುದಾಗಿ ಹೇಳಿತ್ತು.