ಇಂದು ಮುಖ್ಯಮಂತ್ರಿಯಿಂದ ಕರ್ನಾಟಕ ಒಲಿಂಪಿಕ್ ಸಂಸ್ಥೆ ಪ್ರಶಸ್ತಿ ಪ್ರದಾನ. ಅಥ್ಲೆಟಿಕ್ಸ್‌ನ ಸಿಂಚಲ್‌ ಕಾವೇರಮ್ಮ, ಬಾಸ್ಕೆಟ್‌ಬಾಲ್‌ನ ಅಭಿಷೇಕ್‌ ಗೌಡ, ಬ್ಯಾಡ್ಮಿಂಟನ್‌ ಪಟು ಸಾಯಿಪ್ರತೀಕ್‌, ಭಾರತ ಹಾಕಿ ತಂಡದ ಆಟಗಾರ ಮೊಹಮ್ಮದ್‌ ರಾಹೀಲ್‌ ಮೌಸೀನ್‌ಗೂ ಪ್ರಶಸ್ತಿ.

 ಬೆಂಗಳೂರು : ಕನ್ನಡಪ್ರಭ ಪತ್ರಿಕೆಯ ಹಿರಿಯ ಫೋಟೋಗ್ರಾಫರ್‌ ವೀರಮಣಿ ಸೇರಿದಂತೆ 22 ಸಾಧಕರು 2024ರ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ(ಕೆಒಎ) ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶನಿವಾರ ಸಂಸ್ಥೆಯು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಗೊಳಿಸಿತು. ಅಥ್ಲೆಟಿಕ್ಸ್‌ನ ಸಿಂಚಲ್‌ ಕಾವೇರಮ್ಮ, ಬಾಸ್ಕೆಟ್‌ಬಾಲ್‌ನ ಅಭಿಷೇಕ್‌ ಗೌಡ, ಬ್ಯಾಡ್ಮಿಂಟನ್‌ ಪಟು ಸಾಯಿಪ್ರತೀಕ್‌, ಈಜು ಸ್ಪರ್ಧಿ ಅನೀಶ್‌ ಗೌಡ, ಭಾರತ ಹಾಕಿ ತಂಡದ ಆಟಗಾರ ಮೊಹಮ್ಮದ್‌ ರಾಹೀಲ್‌ ಮೌಸೀನ್, ನೆಟ್‌ಬಾಲ್‌ ಆಟಗಾರ್ತಿ ಸುರಭಿ ಬಿ.ಆರ್‌., ಫುಟ್ಬಾಲ್‌ ಪಟು ಅಂಕಿತಾ, ಕೆನೋಯ್‌ ಹಾಗೂ ಕಾಯಕಿಂಗ್‌ ಸ್ಪರ್ಧಿ ದಾದಾಪೀರ್‌, ಸೈಕ್ಲಿಂಗ್‌ನ ಕೀರ್ತಿ ರಂಗಸ್ವಾಮಿ, ಜಿಮ್ನಾಸ್ಟಿಕ್‌ ಪಟು ಕೀರ್ತನಾ, ಟೆನಿಸ್ ಆಟಗಾರ್ತಿ ಸುಹಿತಾ ಮರೂರಿ, ರೈಫಲ್‌ ಶೂಟಿಂಗ್‌ ಪಟು ಯುಕ್ತಿ ರಾಜೇಂದ್ರ, ವೇಟ್‌ಲಿಫ್ಟಿಂಗ್‌ ಸ್ಪರ್ಧಿ ಉಶಾ ಎಸ್‌.ಆರ್., ಫೆನ್ಸಿಂಗ್‌ನ ಕೂಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಇಂದು ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಸಂಜೆ ನೃಪತುಂಗ ರಸ್ತೆಯ ಯವನಿಕಾದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಶಾಸಕ ರಿಜ್ವಾನ್‌ ಅರ್ಷದ್‌ ಸಾಧಕರಿಗೆ ಪ್ರಶಸ್ತಿ ವಿತರಿಸಲಿದ್ದಾರೆ. ಕೆಒಎ ಅಧ್ಯಕ್ಷ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು ಸೇರಿ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.