ಸಾರಾಂಶ
ಬೆಂಗಳೂರು: ಕ್ರಿಕೆಟ್ ದಂತಕತೆ ಕಪಿಲ್ ದೇವ್ ನೇತೃತ್ವದ ಟ್ರಿನಿಟಿ ಗಾಲ್ಫ್ ಚಾಂಪಿಯನ್ಸ್ ಲೀಗ್ನ ಎರಡನೇ ಆವೃತ್ತಿಯನ್ನು ಜುಲೈ 18ರಂದು ಘೋಷಿಸಲಾಯಿತು. ಇದು ಭಾರತೀಯ ಗಾಲ್ಫ್ ಕ್ಷೇತ್ರವನ್ನು ಮರು ವ್ಯಾಖ್ಯಾನಿಸುವ ಟೂರ್ನಿಯಾಗಿದೆ.
2024ರ ಸೆಪ್ಟೆಂಬರ್ನಲ್ಲಿ ಈ ಚಾಂಪಿಯನ್ಶಿಪ್ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ರೋಮಾಂಚಕ ಮುಖಾಮುಖಿಯಲ್ಲಿ ಭಾರತದ 7 ಹಾಗೂ ಶ್ರೀಲಂಕಾದ 1 ತಂಡ ಭಾಗವಹಿಸಲಿವೆ. ವೈಯಕ್ತಿಕ ಪ್ರತಿಭೆ ಮತ್ತು ತಂಡಗಳ ಕಾರ್ಯತಂತ್ರಗಳು ಈ ಪಂದ್ಯಾವಳಿಯಲ್ಲಿ ಅನಾವರಣಗೊಳ್ಳಲಿವೆ.
ಪಂದ್ಯಾವಳಿಯನ್ನು ಪ್ರಕಟಿಸಿದ ದಿಗ್ಗಜ ಕ್ರೀಡಾಪಟು ಕಪಿಲ್ ದೇವ್ "ಗಾಲ್ಫ್ ಅಪಾರ ಕೌಶಲ್ಯ ಮತ್ತು ಏಕಾಗ್ರತೆಯನ್ನು ಬೇಡುವ ಕ್ರೀಡೆಯಾಗಿದೆ, ಆದರೆ ಇದನ್ನು ಹೆಚ್ಚಾಗಿ ವೈಯಕ್ತಿಕ ಸಾಧನೆಯಾಗಿ ನೋಡಲು ಸಾಧ್ಯ. ಟಿಜಿಸಿಎಲ್ನ ಎರಡನೇ ಆವೃತ್ತಿಯು ವೃತ್ತಿಪರರು, ಹವ್ಯಾಸಿಗಳು ಮತ್ತು ಪ್ರಸಿದ್ಧ ಗಾಲ್ಫ್ ಆಟಗಾರರನ್ನು ತಂಡವಾಗಿ ಸ್ಪರ್ಧಿಸಲು ಒಂದೆಡೆ ಸೇರಿಸಲಿದೆ. ಈ ಕೂಟವು ಸ್ನೇಹಪರತೆ ಮತ್ತು ಕಾರ್ಯತಂತ್ರದ ಸಹಯೋಗದ ಮನೋಭಾವವನ್ನು ಬೆಳೆಸಲಿದೆ ಎಂದರು.
‘ಇದು ಗಾಲ್ಫ್ ಅಭಿಮಾನಿಗಳು ಹಿಂದೆಂದೂ ಕಂಡರಿಯದ ರೀತಿಯಲ್ಲೂ ಕ್ರೀಡಾಕೂಟವಾಗಿರಲಿದೆ. ವಿದೇಶದ ತಂಡ ಸೇರಿದಂತೆ 8 ತಂಡಗಳನ್ನು ಈ ಪಂದ್ಯಾವಳಿಗೆ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ಅತ್ಯುತ್ತಮ ತಂಡ ಸ್ವರೂಪ ಮತ್ತು ವಿಶ್ವದಾದ್ಯಂತದ ಪ್ರತಿಭಾವಂತ ಗಾಲ್ಫ್ ಆಟಗಾರರ ಭಾಗವಹಿಸುವಿಕೆಯೊಂದಿಗೆ, ಟಿಜಿಸಿಎಲ್ನ ಎರಡನೇ ಆವೃತ್ತಿಯು ಗಾಲ್ಫ್ ಉತ್ಸಾಹಿಗಳು ಮತ್ತು ಕ್ರೀಡಾ ಅಭಿಮಾನಿಗಳಿಗೆ ರೋಮಾಂಚನ ನೀಡಲಿದೆ’ ಎಂದು ಹೇಳಿದರು.
ಸೆಪ್ಟೆಂಬರ್ 2023ರಲ್ಲಿ ನಡೆದ ಉದ್ಘಾಟನಾ ಋತುವಿನ ಅದ್ಭುತ ಯಶಸ್ಸಿನ ಆಧಾರದ ಮೇಲೆ, ಈ ವರ್ಷ ಟಿಜಿಸಿಎಲ್ ಐಪಿಎಲ್ ಸ್ವರೂಪದಲ್ಲಿ ಕನಿಷ್ಠ ನಾಲ್ಕು ಟೂರ್ನಮೆಂಟ್ ಸುತ್ತುಗಳನ್ನು ಆಡುತ್ತಿದೆ. ಭಾರತದ ಏಳು ನಗರಗಳನ್ನು ಪ್ರತಿನಿಧಿಸುವ ತಂಡಗಳು ಮತ್ತು ಶ್ರೀಲಂಕಾದ ಒಂದು ತಂಡಗಳು ಸ್ಪರ್ಧಿಸಲಿವೆ.