ಸಾರಾಂಶ
ಕೋಲ್ಕತಾ: ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕೆಕೆಆರ್ ತಂಡದ ಆಟಗಾರರಿದ್ದ ಖಾಸಗಿ ವಿಮಾನ ಮೊದಲು ಗುವಾಹಟಿ, ಬಳಿಕ ವಾರಾಣಸಿಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ಸೋಮವಾರ ಸಂಜೆ ಆಟಗಾರರು ಲಖನೌದಿಂದ ಕೋಲ್ಕತಾ ವಿಮಾನವೇರಿದ್ದಾರೆ. ಕೋಲ್ಕತಾದಲ್ಲಿ ಭಾರಿ ಮಳೆ ಕಾರಣಕ್ಕೆ ವಿಮಾನ ಗುವಾಹಟಿಯಲ್ಲಿ ಲ್ಯಾಂಡ್ ಆಗಿದೆ. ಅಲ್ಲಿಂದ ಕೋಲ್ಕತಾಗೆ ಪ್ರಯಾಣ ಬೆಳೆಸಿದರೂ ಮತ್ತೆ ಸಮಸ್ಯೆ ಎದುರಾದ ಕಾರಣ ವಿಮಾನವನ್ನು ವಾರಾಣಸಿಯಲ್ಲಿ ಇಳಿಸಲಾಗಿದೆ. ಆಟಗಾರರು ಅಲ್ಲೇ ರಾತ್ರಿ ಕಳೆದಿದ್ದು, ಮಂಗಳವಾರ ಕಾಶಿ ವಿಶ್ವನಾಥ ದೇಗುಲ ಸೇರಿ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಸಂಜೆ ವೇಳೆ ಅಲ್ಲಿಂದ ಕೋಲ್ಕತಾಗೆ ಪ್ರಯಾಣಿಸಿದ್ದಾರೆ.ಪ್ಲೇ-ಆಫ್ನಲ್ಲೂ ಇಂಗ್ಲೆಂಡ್ನ ಆಟಗಾರರ ಆಡಿಸಲು ಬಿಸಿಸಿಐ ಮನವಿ
ನವದೆಹಲಿ: ಈ ಬಾರಿ ಐಪಿಎಲ್ನ ಪ್ಲೇ-ಆಫ್ನಲ್ಲೂ ಇಂಗ್ಲೆಂಡ್ನ ಆಟಗಾರರಿಗೆ ಆಡಲು ಅನುಮತಿ ನೀಡುವಂತೆ ಬಿಸಿಸಿಐ ಅಧಿಕಾರಿಗಳು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಮೇ 21ರಿಂದ ಪ್ಲೇ-ಆಫ್ ಆರಂಭವಾಗಲಿದೆ. ಅತ್ತ ಇಂಗ್ಲೆಂಡ್-ಪಾಕಿಸ್ತಾನ ಟಿ20 ಸರಣಿ ಮೇ 22ರಿಂದ 30ರ ವರೆಗೆ ನಿಗದಿಯಾಗಿದೆ. ಹೀಗಾಗಿ ರಾಜಸ್ಥಾನ ತಂಡದ ಬಟ್ಲರ್, ಕೋಲ್ಕತಾದ ಫಿಲ್ ಸಾಲ್ಟ್, ಚೆನ್ನೈನ ಮೊಯೀನ್ ಅಲಿ, ಆರ್ಸಿಬಿಯ ಜ್ಯಾಕ್ಸ್ ಹಾಗೂ ರೀಸ್ ಟಾಪ್ಲಿ, ಪಂಜಾಬ್ನ ಬೇರ್ಸ್ಟೋವ್, ಸ್ಯಾಮ್ ಕರ್ರನ್ ತವರಿಗೆ ಮರಳುವ ಸಾಧ್ಯತೆಯಿದೆ. ಆದರೆ ಇಂಗ್ಲೆಂಡ್ ಜೊತೆ ಬಿಸಿಸಿಐ ಸಮಾಲೋಚನೆ ನಡೆಸುತ್ತಿದ್ದು, ಆಟಗಾರರನ್ನು ಪ್ಲೇ-ಆಫ್ ಆಡಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದೆ.