ಸಾರಾಂಶ
ಹಾಲಿ ಚಾಂಪಿಯನ್ ಕೋಲ್ಕತಾ ತಂಡ ಪ್ಲೇ-ಆಫ್ ರೇಸ್ನಿಂದ ಹೊರಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ
ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ತಂಡ ಪ್ಲೇ-ಆಫ್ ರೇಸ್ನಿಂದ ಹೊರಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 1 ರನ್ ರೋಚಕ ಗೆಲುವು ಸಾಧಿಸಿದ ಕೆಕೆಆರ್, ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡ 11 ಪಂದ್ಯಗಳಲ್ಲಿ 11 ಅಂಕ ಸಂಪಾದಿಸಿದ್ದು, ಇನ್ನುಳಿದ 3 ಪಂದ್ಯದಲ್ಲೂ ಗೆದ್ದರೆ ಪ್ಲೇ-ಆಫ್ಗೇರಬಹುದು. ಮತ್ತೆ ಕೊನೆ ಕ್ಷಣದ ಒತ್ತಡಕ್ಕೆ ಬಲಿಯಾದ ರಾಜಸ್ಥಾನ ಟೂರ್ನಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 9ನೇ ಸೋಲನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಕೆಕೆಆರ್, 4 ವಿಕೆಟ್ಗೆ 204 ರನ್ ಕಲೆಹಾಕಿತು. ಗುರ್ಬಾಜ್ 35, ರಹಾನೆ 30 ರನ್ ಗಳಿಸಿದರೆ, ಅಂಘ್ಕೃಷ್ ರಘುವಂಶಿ 31 ಎಸೆತಕ್ಕೆ 44 ರನ್ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಆಂಡ್ರೆ ರಸೆಲ್ ಕೇವಲ 25 ಎಸೆತಕ್ಕೆ 57 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಕೆಕೆಆರ್ನ ಮೊತ್ತ ದೊಡ್ಡದೇ ಆಗಿದ್ದರೂ ರಿಯಾನ್ ಪರಾಗ್ ಅಬ್ಬರದಿಂದಾಗಿ ರಾಜಸ್ಥಾನ ಗೆಲುವಿನ ಸನಿಹ ತಲುಪಿತ್ತು. ಆದರೆ ಕೊನೆಯಲ್ಲಿ ಎಡವಿದ ತಂಡ 8 ವಿಕೆಟ್ಗೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
8 ಓವರ್ಗಳಲ್ಲಿ 5 ವಿಕೆಟ್ಗೆ 72 ರನ್ ಗಳಿಸಿದ್ದ ತಂಡ ಬಳಿಕ ಗೇರ್ ಚೇಂಜ್ ಮಾಡಿಕೊಂಡಿತು. ಮೊಯೀನ್ ಅಲಿ ಎಸೆದ 13ನೇ ಓವರ್ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ ರಿಯಾನ್ ಪರಾಗ್, ತಂಡವನ್ನು ಗೆಲುವಿನ ಹಳಿಗೆ ತಂದಿಟ್ಟರು. ಕೊನೆ 4 ಓವರ್ಗೆ 43 ರನ್ ಬೇಕಿದ್ದಾಗ ನರೈನ್ 17ನೇ ಓವರ್ನಲ್ಲಿ 5 ರನ್ ಬಿಟ್ಟುಕೊಟ್ಟರು. 45 ಎಸೆತಕ್ಕೆ 94 ರನ್ ಗಳಿಸಿದ್ದ ರಿಯಾನ್, 18ನೇ ಓವರ್ನಲ್ಲಿ ಹರ್ಷಿತ್ಗೆ ವಿಕೆಟ್ ಒಪ್ಪಿಸಿದರು. ಆ ಓವರಲ್ಲಿ ಕೇವಲ 5 ರನ್ ಬಂತು. 19ನೇ ಓವರ್ನಲ್ಲಿ ರಸೆಲ್ 11 ರನ್ ನೀಡಿದರು. ವೈಭವ್ ಅರೋರಾ ಎಸೆದ ಕೊನೆ ಓವರ್ಗೆ 22 ರನ್ ಬೇಕಿತ್ತು. ಮೊದಲೆರಡು ಎಸೆತಕ್ಕೆ 3 ರನ್ ಬಂತು. ಬಳಿಕ 3 ಎಸೆತಗಳಲ್ಲಿ ಶುಭಂ ದುಬೆ 2 ಸಿಕ್ಸರ್, 1 ಬೌಂಡರಿ ಬಾರಿಸಿದರು. ಕೊನೆ ಎಸೆತಕ್ಕೆ 3 ರನ್ ಬೇಕಿತ್ತು. 2ನೇ ರನ್ ಪ್ರಯತ್ನದಲ್ಲಿದ್ದಾಗ ಆರ್ಚರ್ ರನೌಟ್ ಆದರು.
ಸ್ಕೋರ್: ಕೋಲ್ಕತಾ 4 ವಿಕೆಟ್ಗೆ 206 (ರಸೆಲ್ ಔಟಾಗದೆ 57, ರಘುವಂಶಿ 44, ಗುರ್ಬಾಜ್ 35, ರಿಯಾನ್ 1-21), ರಾಜಸ್ಥಾನ 20 ಓವರಲ್ಲಿ 205/8 (ರಿಯಾನ್ 95, ಜೈಸ್ವಾಲ್ 34, ವರುಣ್ 2-32)
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್
ಈ ವರ್ಷ 4ನೇ ಬಾರಿ
ಕೊನೆ ಕ್ಷಣದಲ್ಲಿ ಎಡವಿ
ಸೋತ ರಾಜಸ್ಥಾನ!
ರಾಜಸ್ಥಾನ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದರೂ, ಅದೃಷ್ಟ ಕೈಕೊಟ್ಟು ಪಂದ್ಯ ಸೋತಿದ್ದೇ ಹೆಚ್ಚು. ಡೆಲ್ಲಿ ವಿರುದ್ಧ ಕೊನೆ ಓವರ್ಗೆ 9 ರನ್ ಗಳಿಸಲಾಗದೆ ಟೈ ಮಾಡಿಕೊಂಡು, ಬಳಿಕ ಸೂಪರ್ ಓವರ್ನಲ್ಲಿ ಸೋತಿತ್ತು. ಲಖನೌ ವಿರುದ್ಧವೂ ಕೊನೆ ಓವರ್ಗೆ 9 ರನ್ ಬೇಕಿದ್ದಾಗ ಸೋತಿತ್ತು. ಆರ್ಸಿಬಿ ವಿರುದ್ಧ ಕೊನೆ ಓವರ್ಗೆ 18 ರನ್ ಬೇಕಿದ್ದಾಗ 12 ಎಸೆತಕ್ಕೆ ಕೇವಲ 5 ರನ್ ಗಳಿಸಿ ಪರಾಭವಗೊಂಡಿತ್ತು.
ರಾಯಲ್ಸ್ಗೆ 3ನೇ ಸಲ
1 ರನ್ನಿಂದ ಸೋಲು
ರಾಜಸ್ಥಾನ ತಂಡ ಐಪಿಎಲ್ನಲ್ಲಿ 3ನೇ ಬಾರಿ ಕೇವಲ 1 ರನ್ ಅಂತರದಲ್ಲಿ ಸೋತಿದೆ. 2011ರಲ್ಲಿ ಡೆಲ್ಲಿ, 2024ರಲ್ಲಿ ಸನ್ರೈಸರ್ಸ್ ಹಾಗೂ ಈ ಬಾರಿ ಕೆಕೆಆರ್ ವಿರುದ್ಧ ಈ ರೀತಿ ಪರಾಭವಗೊಂಡಿದೆ.
ರಿಯಾನ್ ಸತತ 6
ಎಸೆತಕ್ಕೆ 6 ಸಿಕ್ಸರ್
ರಾಯಲ್ಸ್ ನಾಯಕ ರಿಯಾನ್ ಸತತ 6 ಎಸೆತಕ್ಕೆ 6 ಸಿಕ್ಸರ್ ಸಿಡಿಸಿದರು. ಮೊಯೀನ್ರ 13ನೇ ಓವರ್ನ ಕೊನೆ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿದರು. ಮುಂದಿನ ಓವರ್ನಲ್ಲಿ ವರುಣ್ ಚಕ್ರವರ್ತಿ ಎಸೆತವನ್ನೂ ರಿಯಾನ್ ಸಿಕ್ಸರ್ಗಟ್ಟಿ ಸತತ 6 ಸಿಕ್ಸರ್ ಪೂರೈಸಿದರು.
05ನೇ ಬ್ಯಾಟರ್
ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ 5ನೇ ಆಟಗಾರ ರಿಯಾನ್. 2012ರಲ್ಲಿ ಗೇಲ್, 2020ರಲ್ಲಿ ರಾಹುಲ್ ತೆವಾಟಿಯಾ, 2021ರಲ್ಲಿ ಜಡೇಜಾ, 2023ಲ್ಲಿ ರಿಂಕು ಈ ಸಾಧನೆ ಮಾಡಿದ್ದರು.
ಪಂಜಾಬ್ ಆರ್ಭಟಕ್ಕೆ ಲಖನೌ ತತ್ತರ
ಪಂಜಾಬ್ಗೆ 00 ರನ್ ಭರ್ಜರಿ ಗೆಲುವು । 7ನೇ ಜಯ, ಅಂಕಪಟ್ಟಿಯಲ್ಲಿ ನಂ.2ಪ್ರಭ್ಸಿಮ್ರನ್ 91, ಪಂಜಾಬ್ 236/5 । ಲಖನೌ 0000 । ಒಟ್ಟು 6ನೇ ಸೋಲು
ಧರ್ಮಶಾಲಾ: ಪಂಜಾಬ್ ಕಿಂಗ್ಸ್ನ ರನ್ ಮಳೆಯಲ್ಲಿ ಕೊಚ್ಚಿ ಹೋದ ಲಖನೌ, 18ನೇ ಆವೃತ್ತಿ ಐಪಿಎಲ್ನಲ್ಲಿ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಒಳಗಾಗಿದೆ. ತಂಡಕ್ಕಿದು 11 ಪಂದ್ಯಗಳಲ್ಲಿ 6ನೇ ಸೋಲು. 11 ಪಂದ್ಯಗಳಲ್ಲಿ 7ನೇ ಗೆಲುವು ಸಾಧಿಸಿದ ಪಂಜಾಬ್, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ತಂಡ ಇನ್ನೊಂದು ಪಂದ್ಯ ಗೆದ್ದರೆ ಪ್ಲೇ-ಆಫ್ ಪ್ರವೇಶಿಸಲಿದೆ.
ಪಂಜಾಬ್ ಮೊದಲು ಬ್ಯಾಟ್ ಮಾಡಿ ಬರೋಬ್ಬರಿ 236 ರನ್ ಕಲೆಹಾಕಿತು. ಬೃಹತ್ ಮೊತ್ತ ನೋಡಿಯೇ ಕಂಗಾಲಾದ ಲಖನೌ, 0 ವಿಕೆಟ್ಗೆ 00 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಟೂರ್ನಿಯುದ್ದಕ್ಕೂ ತಂಡಕ್ಕೆ ಆಸರೆಯಾಗಿದ್ದ ಮಾರ್ಕ್ರಮ್(13), ಮಿಚೆಲ್ ಮಾರ್ಷ್(0), ನಿಕೋಲಸ್ ಪೂರನ್(6) ಪವರ್-ಪ್ಲೇ ಮುಕ್ತಾಯಕ್ಕೂ ಮುನ್ನವೇ ಪೆವಿಲಿಯನ್ ಸೇರಿದ್ದರು. ನಾಯಕ ರಿಷಭ್ ಪಂತ್(18) ಮತ್ತೆ ಕಳಪೆ ಆಟವಾಡಿ ವಿಕೆಟ್ ಒಪ್ಪಿಸಿದರು. ಬಳಿಕ ಆಯುಶ್ ಬದೋನಿ(00 ಎಸೆತಕ್ಕೆ 00), ಅಬ್ದುಲ್ ಸಮದ್(00 ಎಸೆತಕ್ಕೆ 00) ರನ್ ಗಳಿಸಿದರೂ, ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಪ್ರಭ್ಸಿಮ್ರನ್ ಮ್ಯಾಜಿಕ್: ಇದಕ್ಕೂ ಮುನ್ನ ಧರ್ಮಶಾಲಾ ಕ್ರೀಡಾಂಗಣ ಯುವ ಬ್ಯಾಟರ್ ಪ್ರಭ್ಸಿಮ್ರನ್ ಸಿಂಗ್ರ ಸ್ಫೋಟಕ ಆಟಕ್ಕೆ ಸಾಕ್ಷಿಯಾಯಿತು. 48 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ನೊಂದಿಗೆ 91 ರನ್ ಸಿಡಿಸಿದ ಅವರು, ಶತಕದ ಅಂಚಿನಲ್ಲಿ ದಿಗ್ವೇಶ್ ರಾಠಿಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ 25 ಎಸೆತಕ್ಕೆ 45, ಜೋಶ್ ಇಂಗ್ಲಿಸ್ 14 ಎಸೆತಕ್ಕೆ 30, ಶಶಾಂಕ್ 15 ಎಸೆತಕ್ಕೆ 33, ಸ್ಟೋಯ್ನಿಸ್ 5 ಎಸೆತಕ್ಕೆ 15 ರನ್ ಸಿಡಿಸಿದರು.
ಸ್ಕೋರ್: ಪಂಜಾಬ್ 20 ಓವರಲ್ಲಿ 236/5 (ಪ್ರಭ್ಸಿಮ್ರನ್ 91, ಶ್ರೇಯಸ್ 45, ಆಕಾಶ್ 2-30), ಲಖನೌ 20 ಓವರಲ್ಲಿ 000 (ಆಯುಶ್ 000, ಸಮದ್ 000, ಅರ್ಶ್ದೀಪ್ 000)
ಈ ಸಲ 8 ಮಂದಿನರ್ವಸ್ ನೈಂಟಿ!
ಈ ಬಾರಿ 8 ಆಟಗಾರರು ಶತಕದಿಂದ ವಂಚಿತರಾಗಿದ್ದಾರೆ. ಭಾನುವಾರವೇ ರಾಜಸ್ಥಾನದ ರಿಯಾನ್(95), ಪಂಜಾಬ್ನ ಪ್ರಭ್ಸಿಮ್ರನ್(91) ನರ್ವಸ್ ನೈಂಟಿಗೆ ಬಲಿಯಾದರು. ಇದಕ್ಕೂ ಮುನ್ನ ಶ್ರೇಯಸ್, ಡಿ ಕಾಕ್, ಬಟ್ಲರ್ ತಲಾ 97 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಚೆನ್ನೈನ ಆಯುಶ್ ಮಾಥ್ರೆ(94), ಡೆಲ್ಲಿಯ ಕೆ.ಎಲ್.ರಾಹುಲ್(93), ಗುಜರಾತ್ನ ಗಿಲ್(90) ಕೂಡಾ ಶತಕದ ಅಂಚಿನಲ್ಲಿ ಎಡವಿದ್ದಾರೆ.
ಹೈದರಾಬಾದ್ಗೆ ಡು ಆರ್ ಡೈ ಪಂದ್ಯ: ಇಂದು ಸೋತರೆ ಔಟ್!
ಹೈದರಾಬಾದ್: ಸತತ ಗೆಲುವಿನೊಂದಿಗೆ ಈ ಬಾರಿ ಟೂರ್ನಿಗೆ ಕಾಲಿರಿಸಿದ್ದರೂ ಬಳಿಕ ಸೋಲಿನ ಸುಳಿಯಲ್ಲಿ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯದ ಹಳಿಗೆ ಮರಳುವ ಕಾತರದಲ್ಲಿದೆ. ತಂಡ ಸೋಮವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಸನ್ರೈಸರ್ಸ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇಬೇಕಿದೆ.
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಆರಂಭಿಕ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿತ್ತು. ಆದರೆ ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ-4ರಿಂದ ಕೆಳಕ್ಕಿಳಿದಿದೆ. ಆದರೆ ಪ್ಲೇ-ಆಫ್ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ, ಗೆಲುವಿನ ಹಳಿಗೆ ಮರಳುವುದರ ಜೊತೆಗೆ ತಂಡದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಡು ಪ್ಲೆಸಿ ತಂಡಕ್ಕೆ ಮರಳಿದ್ದರೂ, ಕರುಣ್ ನಾಯರ್, ಕೆ.ಎಲ್.ರಾಹುಲ್ ಅಸ್ಥಿರವಾಡುತ್ತಿದ್ದಾರೆ.
ಮತ್ತೊಂದೆಡೆ ಸನ್ರೈಸರ್ಸ್ ಪಾಲಿಗೆ ಇದು ನಿರ್ಣಾಯಕ ಪಂದ್ಯ. ಈಗಾಗಲೇ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 7 ಸೋತಿರುವ ತಂಡ, ಡೆಲ್ಲಿ ವಿರುದ್ಧವೂ ಸೋತರೆ ಪ್ಲೇ-ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಪಂದ್ಯ: ಸಂಜೆ 7.30ಕ್ಕೆ