ಬಾಗಲಕೋಟೆಯ ಬಡ ವಿದ್ಯಾರ್ಥಿಯ ಕಾಲೇಜು ಶುಲ್ಕ ಪಾವತಿಸಿ ಮಾನವೀಯತೆ ಮೆರೆದ ಕೆ.ಎಲ್‌.ರಾಹುಲ್‌

| Published : Oct 09 2024, 01:37 AM IST

ಸಾರಾಂಶ

ಇತ್ತೀಚೆಗೆ 3 ಮತ್ತು 4ನೇ ಸೆಮಿಸ್ಟರ್‌ ಕಾಲೇಜು ಶುಲ್ಕ 75,000 ರೂ. ಪಾವತಿಸಿದ್ದಾರೆ. ರಾಹುಲ್‌ ಈ ಮೊದಲು ಧಾರವಾಡ ವಿದ್ಯಾರ್ಥಿಗೂ ಶಾಲಾ ಶುಲ್ಕ ಕಟ್ಟಲು ನೆರವಾಗಿದ್ದರು.

ಬಾಗಲಕೋಟೆ: ಭಾರತೀಯ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು​ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿಯೊಬ್ಬನ ಕಾಲೇಜು ಶುಲ್ಕ ಪಾವತಿಸಿ ಗಮನ ಸೆಳೆದಿದ್ದಾರೆ. ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿವಿಯಲ್ಲಿ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆಯ ಅಮೃತ್‌ ಮಾವಿನಕಟ್ಟಿ ಎಂಬ ವಿದ್ಯಾರ್ಥಿಯ 2ನೇ ವರ್ಷದ ಕಾಲೇಜು ಶುಲ್ಕವನ್ನು ರಾಹುಲ್ ಪಾವತಿಸಿದ್ದಾರೆ. ಕಳೆದ ವರ್ಷ ಅಮೃತ್‌ರ ಬಿ.ಕಾಂ ಪ್ರಥಮ ವರ್ಷದ ಶುಲ್ಕ ಪಾವತಿಸಿದ್ದ ರಾಹುಲ್‌, ಎರಡನೇ ವರ್ಷದ ಶುಲ್ಕ ಭರಿಸುವುದಾಗಿಯೂ ಭರವಸೆ ನೀಡಿದ್ದರು. ಅದರಂತೆ ಇತ್ತೀಚೆಗೆ 3 ಮತ್ತು 4ನೇ ಸೆಮಿಸ್ಟರ್‌ ಕಾಲೇಜು ಶುಲ್ಕ 75,000 ರೂ. ಪಾವತಿಸಿದ್ದಾರೆ. ರಾಹುಲ್‌ ಈ ಮೊದಲು ಧಾರವಾಡ ವಿದ್ಯಾರ್ಥಿಗೂ ಶಾಲಾ ಶುಲ್ಕ ಕಟ್ಟಲು ನೆರವಾಗಿದ್ದರು.ಅಂ.ರಾ. ಟಿ20 ಬಾಂಗ್ಲಾದ ಮಹ್ಮೂದುಲ್ಲಾ ಗುಡ್‌ಬೈ

ನವದೆಹಲಿ: ಬಾಂಗ್ಲಾದೇಶದ ಹಿರಿಯ ಆಲ್ರೌಂಡರ್‌ ಮಹ್ಮೂದುಲ್ಲಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧ ಶನಿವಾರ ಹೈದರಾಬಾದ್‌ನಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಕೊನೆ ಬಾರಿ ಆಡುವುದಾಗಿ 38 ವರ್ಷದ ಮಹ್ಮೂದುಲ್ಲಾ ಮಂಗಳವಾರ ಮಾಹಿತಿ ಪ್ರಕಟಿಸಿದ್ದಾರೆ. 2007ರಲ್ಲಿ ಪಾದಾರ್ಪಣೆ ಮಾಡಿದ್ದ ಮಹ್ಮೂದುಲ್ಲಾ ಈ ವರೆಗೂ ಬಾಂಗ್ಲಾ ಪರ 50 ಟೆಸ್ಟ್‌, 232 ಏಕದಿನ ಹಾಗೂ 139 ಟಿ20 ಪಂದ್ಯಗಳನ್ನಾಡಿದ್ದಾರೆ. 2021ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅವರು, ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿರುವುದಾಗಿ ತಿಳಿಸಿದ್ದಾರೆ.