ಸಾರಾಂಶ
ಬೆಂಗಳೂರು : ಕರ್ನಾಟಕ ರಾಜ್ಯ ಪುರುಷ ಹಾಗೂ ಮಹಿಳೆಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಆರ್ಯನ್ ಮನೋಜ್, ಲೋಕೇಶ್ ರಾಥೋಡ್ ಚಿನ್ನದ ಪದಕ ಗೆದ್ದಿದ್ದಾರೆ. ಕೂಟದ ಕೊನೆ ದಿನವಾದ ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಆರ್ಯನ್ 10.42 ಸೆಕೆಂಡ್ಗಳಲ್ಲಿ ಕ್ರಮಿಸಿ ಅಗ್ರಸ್ಥಾನ ಪಡೆದರು.
ಗಗನ್ ಗೌಡ(10.50 ಸೆಕೆಂಡ್), ಧನುಶ್(10.60 ಸೆಕೆಂಡ್) ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರು. ಪುರುಷರ ಡೆಕಾಥ್ಲಾನ್ನಲ್ಲಿ ಯಾದಗಿರಿಯ ಲೋಕೇಶ್ 6189 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಚಿತ್ರದುರ್ಗದ ತ್ರಿಲೋಕ್ ಬೆಳ್ಳಿ, ಬೆಂಗಳೂರಿನ ಪ್ರತಾಪ್ ಕಂಚು ಪಡೆದರು. ಪುರುಷರ 10000 ಮೀ. ಓಟದಲ್ಲಿ ಬೆಳಗಾವಿಯ ವಿಜಯ್ ಚಿನ್ನ, ಸುರೇಶ್ ಬೆಳ್ಳಿ, ಲಕ್ಷ್ಮೀಶ ಕಂಚು ಜಯಿಸಿದರು. ಮಹಿಳೆಯರ ಹೆಪ್ಟಾಥ್ಲಾನ್ನಲ್ಲಿ ಉಡುಪಿಯ ರಕ್ಷಿತಾ, ಪುರುಷರ 400 ಮೀ. ಓಟದಲ್ಲಿ ಹಾಸನದ ಬಾಲಕೃಷ್ಣ ಸ್ವರ್ಣ ಪದಕ ಗೆದ್ದರು.
ಅಥ್ಲೆಟಿಕ್ಸ್: ಫೈನಲ್ಗೇರಲು ಪಾರುಲ್, ಜೆಸ್ವಿನ್ ವಿಫಲ
ಒಲಿಂಪಿಕ್ಸ್ನ ಅಥ್ಲೆಟಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳ ನೀರಸ ಪ್ರದರ್ಶನ ಮುಂದುವರಿದಿದೆ. ಭಾನುವಾರ ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್ನಲ್ಲಿ ಪಾರುಲ್ ಚೌಧರಿ ಫೈನಲ್ಗೇರಲು ವಿಫಲರಾದರು. ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ 29 ವರ್ಷದ ಪಾರುಲ್, ಭಾನುವಾರ ಹೀಟ್ಸ್ನಲ್ಲಿ 9 ನಿಮಿಷ 23.39 ಸೆಕೆಂಡ್ಗಳಲ್ಲಿ ಕ್ರಮಿಸಿ 8ನೇ ಸ್ಥಾನ ಪಡೆದರು.
ಹೀಟ್ಸ್ನಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದರೆ ಫೈನಲ್ಗೇರಬಹುದಿತ್ತು. ಪಾರುಲ್ 5000 ಮೀ. ಓಟದ ಸ್ಪರ್ಧೆಯಲ್ಲೂ ಫೈನಲ್ಗೇರಲು ವಿಫಲರಾಗಿದ್ದರು. ಇನ್ನು, ಪುರುಷರ ಲಾಂಗ್ಜಂಪ್ನಲ್ಲಿ ಜೆಸ್ವಿನ್ ಆಲ್ಡ್ರಿನ್ ಕೂಡಾ ಅರ್ಹತಾ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದರು. ಅವರು 7.61 ಮೀ. ದೂರಕ್ಕೆ ನೆಗೆದು 26ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಗ್ರ-12 ಸ್ಪರ್ಧಿಗಳು ಫೈನಲ್ ಸುತ್ತು ಪ್ರವೇಶಿಸಿದರು.