ಗುಲ್ಬರ್ಗಾ ತಂಡಕ್ಕೆ 9 ವಿಕೆಟ್ ಗೆಲುವು. ತಂಡಕ್ಕಿದು 5 ಪಂದ್ಯಗಳಲ್ಲಿ 2ನೇ ಗೆಲುವು. ಅತ್ತ ಹುಬ್ಬಳ್ಳಿ ಟೈಗರ್ಸ್‌ ಸತತ 4 ಪಂದ್ಯಗಳ ಗೆಲುವಿನ ನಂತರ ಮೊದಲ ಸೋಲಿನ ರುಚಿ ಅನುಭವಿಸಿತು.

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಸತತ 5ನೇ ಪಂದ್ಯದಲ್ಲೂ ಸೋಲನುಭವಿಸಿದೆ. ಬುಧವಾರ ಗುಲ್ಬರ್ಗಾ ಮಿಸ್ಟಿಕ್ಸ್‌ ವಿರುದ್ಧ ಶಿವಮೊಗ್ಗ 9 ವಿಕೆಟ್‌ಗಳಿಂದ ಪರಾಭವಗೊಂಡಿತು. ಗುಲ್ಬರ್ಗಾಕ್ಕೆ ಇದು 5 ಪಂದ್ಯಗಳಲ್ಲಿ 2ನೇ ಗೆಲುವು.ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ 18.1 ಓವರ್‌ಗಳಲ್ಲಿ 126ಕ್ಕೆ ಆಲೌಟಾಯಿತು. 

ಅಭಿನವ್‌ ಮನೋಹರ್‌(36 ಎಸೆತಗಳಲ್ಲಿ 55) ಹೊರತುಪಡಿಸಿ ಬೇರೆ ಯಾರೂ ಮಿಂಚಲಿಲ್ಲ. ನಾಯಕ ನಿಹಾಲ್‌ ಉಳ್ಳಾಲ್‌ 5 ರನ್‌ಗೆ ವಿಕೆಟ್‌ ಒಪ್ಪಿಸಿದರು. ಯಶೋವರ್ಧನ್‌, ಅಭಿಷೇಕ್‌ ಪ್ರಭಾಕರ್‌ ತಲಾ 3 ವಿಕೆಟ್‌ ಕಿತ್ತರು.ಸುಲಭ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ 11.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ಲುವ್‌ನಿತ್‌ ಸಿಸೋಡಿಯಾ 35 ಎಸೆತಗಳಲ್ಲಿ 62 ರನ್‌ ಸಿಡಿಸಿದರೆ, ಅನೀಶ್‌ ಕೆ.ವಿ. 14 ಎಸೆತಗಳಲ್ಲಿ 31 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ಹುಬ್ಬಳ್ಳಿ ಟೈಗರ್ಸ್‌ಗೆ ಮೊದಲು ಸೋಲು

ಈ ಬಾರಿ ಟೂರ್ನಿಯಲ್ಲಿ ಸತತ 4 ಪಂದ್ಯಗಳಲ್ಲಿ ಗೆದ್ದಿದ್ದ ಹುಬ್ಬಳ್ಳಿ ಟೈಗರ್ಸ್‌ ಮೊದಲ ಸೋಲನುಭವಿಸಿತು. ತಂಡಕ್ಕೆ ಮೈಸೂರು ವಾರಿಯರ್ಸ್‌ ವಿರುದ್ಧ 56 ರನ್‌ ಹೀನಾಯ ಸೋಲು ಎದುರಾಯಿತು. ಮೊದಲು ಬ್ಯಾಟ್‌ ಮಾಡಿದ ಮೈಸೂರು 19.3 ಓವರ್‌ಗಳಲ್ಲಿ 165 ರನ್‌ಗೆ ಆಲೌಟಾಯಿತು. ನಾಯಕ ಕರುಣ್‌ ನಾಯರ್‌ 36 ಎಸೆತಗಳಲ್ಲಿ 66 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ 17 ಓವರ್‌ಗಳಲ್ಲಿ 109 ರನ್‌ಗೆ ಆಲೌಟಾಯಿತು. ಸುಚಿತ್‌ 14 ರನ್‌ಗೆ 4 ವಿಕೆಟ್‌ ಕಿತ್ತರು. ಮೈಸೂರಿಗೆ ಇದು 3ನೇ ಜಯ.

ಇಂದಿನ ಪಂದ್ಯಗಳು

ಮೈಸೂರು-ಶಿವಮೊಗ್ಗ, ಮಧ್ಯಾಹ್ನ 3ಕ್ಕೆಮಂಗಳೂರು-ಬೆಂಗಳೂರು, ಸಂಜೆ 7ಕ್ಕೆ