ಸಾರಾಂಶ
ಅಮರಾವತಿ: ಆಸ್ಟ್ರೇಲಿಯಾ ಪ್ರವಾಸದಿಂದ ಇತ್ತೀಚೆಗಷ್ಟೇ ಭಾರತಕ್ಕೆ ಹಿಂದಿರುಗಿದ್ದ ಯುವ ಕ್ರಿಕೆಟಿಗ ನಿತೀಶ್ ರೆಡ್ಡಿ ಮೊಣಕಾಲಿನಲ್ಲೇ ತಿರುಮಲ ತಿರುಪತಿ ದೇವಾಲಯದ ಮೆಟ್ಟಲುಗಳನ್ನು ಹತ್ತಿ ಹರಕೆ ತೀರಿಸಿದ್ದಾರೆ.
ತಿರುಪತಿ ದೇವಾಲಯದ ಮೆಟ್ಟಿಲುಗಳನ್ನು ಮೊಣಕಾಲು ಬಳಸಿ ಹತ್ತುವುದಾಗಿ ನಿತೀಶ್ ಹರಕೆ ಹೊತ್ತಿದ್ದರು. ಅದರಂತೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಹಿಂದಿರುಗಿದ ಕೂಡಲೇ ಹರಕೆ ಪೂರ್ತಿಗೊಳಿಸಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ನಿತೀಶ್, ‘ಗೋವಿಂದ.. ಗೋವಿಂದ’ ಎನ್ನುವ ಶೀರ್ಷಿಕೆಯನ್ನೂ ನೀಡಿದ್ದಾರೆ.
ಇಂದು ಭಾರತ vs ಐರ್ಲೆಂಡ್ 3ನೇ ಮಹಿಳಾ ಏಕದಿನ ಪಂದ್ಯ
ರಾಜ್ಕೋಟ್: ಭಾರತ ಹಾಗೂ ಐರ್ಲೆಂಡ್ ಮಹಿಳಾ ತಂಡಗಳ ನಡುವಿನ 3ನೇ ಹಾಗೂ ಕೊನೆ ಏಕದಿನ ಪಂದ್ಯ ಗುರುವಾರ ನಡೆಯಲಿದೆ. ಭಾರತ 3-0 ಅಂತರದಲ್ಲಿ ಕ್ಲೀನ್ಸ್ವೀಪ್ ಸಾಧಿಸುವ ನಿರೀಕ್ಷೆಯಲ್ಲಿದೆ.
ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿದ್ದ ಸ್ಮೃತಿ ಮಂಧನಾ ಪಡೆ, ಕ್ರಮವಾಗಿ 6 ವಿಕೆಟ್ ಹಾಗೂ 116 ರನ್ ಗೆಲುವು ಸಾಧಿಸಿತ್ತು. ಎರಡೂ ಪಂದ್ಯದಲ್ಲಿ ತಂಡ ಬ್ಯಾಟಿಂಗ್ನಲ್ಲಿ ಅಬ್ಬರಿಸಿತ್ತು. ಸ್ಮೃತಿ, ಪ್ರತಿಕಾ ರಾವಲ್, ಜೆಮಿಮಾ ಮಿಂಚುತ್ತಿದ್ದು, ಬೌಲರ್ಗಳೂ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದಾರೆ. ಮತ್ತೊಂದೆಡೆ ಭಾರತ ವಿರುದ್ಧ ಚೊಚ್ಚಲ ದ್ವಿಪಕ್ಷೀಯ ಸರಣಿಯನ್ನು ಈಗಾಗಲೇ ಕಳೆದುಕೊಂಡಿರುವ ಪ್ರವಾಸಿ ಐರ್ಲೆಂಡ್, ಕ್ಲೀನ್ಸ್ವೀಪ್ ಮುಖಭಂಗದಿಂದ ಪಾರಾಗುವ ಕಾತರದಲ್ಲಿದೆ.
ಪಂದ್ಯ: ಬೆಳಗ್ಗೆ 11 ಗಂಟೆಗೆ