ಸಾರಾಂಶ
ಲೀಡ್ಸ್: ಭಾರತ ತಂಡ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ಅವರನ್ನು ಇಂಗ್ಲೆಂಡ್ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ಆಡಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದು, ಬೂಮ್ರಾ 3 ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೂಮ್ರಾ ಕಾರ್ಯದೊತ್ತದ ನಿಭಾಯಿಸುವುದು ಮುಖ್ಯ. ಹೀಗಾಗಿ ಅವರನ್ನು 3 ಟೆಸ್ಟ್ನಲ್ಲಿ ಮಾತ್ರ ಆಡಿಸುತ್ತೇವೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ತಂಡದಲ್ಲಿ ಅನನುಭವಿ ಬೌಲರ್ಗಳು ಹೆಚ್ಚಿದ್ದಾರೆ. ಆದರೆ ಅವರು ಪ್ರತಿ ಪಂದ್ಯದಲ್ಲೂ ಬೆಳೆಯುತ್ತಿದ್ದಾರೆ’ ಎಂದಿದ್ದಾರೆ. ಆದರೆ ಯಾವ 3 ಟೆಸ್ಟ್ನಲ್ಲಿ ಆಡಿಸಲಾಗುವುದು ಎಂಬ ಪ್ರಶ್ನೆಗೆ ಗಂಭೀರ್ ಸ್ಪಷ್ಟ ಉತ್ತರ ನೀಡಿಲ್ಲ. ‘ಅದರ ಬಗ್ಗೆ ನಿರ್ಧರಿಸಿಲ್ಲ. ಆದರೆ ಇನ್ನು 2 ಪಂದ್ಯಗಳಲ್ಲಿ ಮಾತ್ರ ಅವರು ಆಡಲಿದ್ದಾರೆ’ ಎಂದು ತಿಳಿಸಿದ್ದಾರೆ.
ವೇಗಿ ಹರ್ಷಿತ್ ಭಾರತ ತಂಡದಿಂದ ಬಿಡುಗಡೆ
ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೇಗದ ಬೌಲರ್ ಹರ್ಷಿತ್ ರಾಣಾ ಭಾರತ ತಂಡದಿಂದ ಬಿಡುಗಡೆಗೊಂಡಿದ್ದಾರೆ. ಕಳೆದ ತಿಂಗಳು ತಂಡ ಪ್ರಕಟಿಸಿದಾಗ 23 ವರ್ಷದ ಹರ್ಷಿತ್ಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ ಮೊದಲ ಪಂದ್ಯಕ್ಕೂ ಮುನ್ನ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅವರು 2ನೇ ಟೆಸ್ಟ್ಗೆ ಬರ್ಮಿಂಗ್ಹ್ಯಾಮ್ಗೆ ತೆರಳಿದ ಭಾರತ ತಂಡದ ಜೊತೆ ಪ್ರಯಾಣಿಸಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.